ಬೆಂಗಳೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ತನಿಖೆಗೆ ಕೋರ್ಟ್ ಸೂಚಿಸಿದೆ. ಇದರ ಬೆನ್ನಲ್ಲೇ ಬಿಜೆಪಿಯು ಸಿಬಿಐ ತನಿಖೆಗೆ ನೀಡುವಂತೆ ಆಗ್ರಹಿಸಿದೆ. ಇದಕ್ಕೆ ಪರಮೇಶ್ವರ್ ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕೋರ್ಟ್ ಮತ್ತು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಲೋಕಾಯುಕ್ತಕ್ಕೆ ಎಫ್ ಐ ಆರ್ ದಾಖಲು ಮಾಡಲು ಆದೇಶ ನೀಡಿದೆ. ಹೀಗಾಗಿ ಕಾನೂನು ಕ್ರಮದ ಕುರಿತು ತಜ್ಞರ ತಂಡ ಸಲಹೆ ನೀಡಿದೆ. ಅದರಂತೆ ತನಿಖೆ ನಡೆಯಲಿದೆ.
ಕಾನೂನಿಗೆ ಅದರದ್ದೇ ಆದ ಪ್ರಕ್ರಿಯೆ ಇದೆ. ಮೊದಲು ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಬೇಕು. ನಂತರ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಬೇಕು. ಹೀಗಾಗಿ ತಜ್ಞರ ಅಭಿಪ್ರಾಯದ ನಂತರ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದಿದ್ದಾರೆ.
ಆಡಳಿತ ಪಕ್ಷದ ವಿಷಯದಲ್ಲಿ ಆರೋಪ ಸಿಕ್ಕರೆ ಸಾಕು ವಿಪಕ್ಷಗಳು ವಿರೋಧ ಮಾಡೇ ಮಾಡುತ್ತವೆ. ನಾವು ಕಾನೂನಾತ್ಮಕವಾಗಿ ಏನು ಮಾಡಬೇಕೋ ಅದನ್ನು ಮಾಡುತ್ತೇವೆ. ಕಾನೂನು ದೊಡ್ಡದಾ ಬಿಜೆಪಿ ಅಭಿಪ್ರಾಯ ದೊಡ್ಡದಾ? ಎಂದು ತಿರುಗೇಟು ನೀಡಿದ್ದಾರೆ.
ಈ ದೇಶದಲ್ಲಿ ಕಾನೂನು ದೊಡ್ಡದು. ಆದರೆ, ಆದೇಶ ನಮಗೆ ಸಮಾಧಾನ ತಂದಿಲ್ಲ. ಮುಡಾ ಪ್ರಕರಣ ಮತ್ತು ರಾಜ್ಯಪಾಲರ ಪ್ರಾಸಿಕ್ಯೂಷನ್ ಅನುಮತಿ ವಿಚಾರವಾಗಿ, ನಾವು ಕೊಟ್ಟ ದಾಖಲೆ ಮತ್ತು ಮಾಹಿತಿಯನ್ನು ನ್ಯಾಯಾಲಯ ಸೂಕ್ತವಾಗಿ ಪರಿಗಣಿಸಿಲ್ಲ. ಹೀಗಾಗಿ ನಾವು ಮುಂದಿನ ಹೋರಾಟ ನಡೆಸುತ್ತೇವೆ ಎಂದು ಹೇಳಿದ್ದಾರೆ.