ಹುಬ್ಬಳ್ಳಿ : ಕುರಿ ಮೇಯಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬಗಳ ನಡುವೆ ನಡೆದ ಗಲಾಟೆಯಲ್ಲಿ ಮಹಿಳೆಗೆ ಚಾಕು ಇರಿದಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ನಗರದ ಸುಳ್ಳದ ರೋಡ್ನಲ್ಲಿ ನಡೆದ ಈ ಘಟನೆಯಲ್ಲಿ, ಉಣಕಲ್ ನಿವಾಸಿ ನಾಗಮ್ಮ ನರಗುಂದ ಚಾಕು ಇರಿತಕ್ಕೆ ಒಳಗಾದ ಮಹಿಳೆ ಎಂದು ಗುರುತಿಸಲಾಗಿದೆ. ಗಲಾಟೆ ವೇಳೆ ನಾಗಮ್ಮ ಅವರ ಪತಿ ಬಸವರಾಜನ ಮೇಲೂ ಮನಸೋ ಇಚ್ಛೆ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ.
ಮಾಹಿತಿ ಪ್ರಕಾರ, ಸುಳ್ಳದ ರೋಡ್ನಲ್ಲಿ ಕುರಿ ಮೇಯಿಸುತ್ತಿದ್ದ ದಂಪತಿಗಳು ಹಾಗೂ ಇದೇ ಕುಟುಂಬದ ಯಲ್ಲಪ್ಪ ನರಗುಂದ ಮತ್ತು ಸಿದ್ದಪ್ಪ ನರಗುಂದ ನಡುವೆ ಕ್ಷುಲ್ಲಕ ವಿಚಾರಕ್ಕೆ ಜಗಳ ಶುರುವಾಗಿದೆ. ಮಾತಿಗೆ ಮಾತು ಬೆಳೆದು ಯಲ್ಲಪ್ಪ ಮತ್ತು ಸಿದ್ದಪ್ಪ ಇಬ್ಬರು ಸೇರಿಕೊಂಡು ನಾಗಮ್ಮ ಹಾಗೂ ಆಕೆಯ ಪತಿ ಬಸವರಾಜನ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಈ ವೇಳೆ ನಾಗಮ್ಮ ಅವರ ಹೊಟ್ಟೆಗೆ ಚಾಕು ಇರಿದು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಗಾಯಾಳು ನಾಗಮ್ಮ ಅವರನ್ನು ತಕ್ಷಣ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಹತ್ಯೆ



















