ಚಿತ್ರದುರ್ಗ : ಎಣ್ಣೆ ಮತ್ತಿನಲ್ಲಿ ಬೈಕ್ ಚಾಲನೆ ಮಾಡಿದ ವ್ಯಕ್ತಿಯ ಮೇಲೆ ಸರ್ಕಲ್ ಇನ್ಸ್ ಪೆಕ್ಟರ್ ಹಲ್ಲೆ ಮಾಡಿರುವ ಗಂಭೀರ ಆರೋಪ ಕೇಳಿ ಬಂದಿದೆ. ಚಿತ್ರದುರ್ಗ ಕೋಟೆ ಠಾಣೆ ಸಿಪಿಐ ದೊಡ್ಡಣ್ಣ ವಿರುದ್ದ ಈ ಆರೋಪ ಕೇಳಿ ಬಂದಿದೆ. ಮಾಳಪ್ಪನಹಟ್ಟಿ ಗ್ರಾಮದ ಮೈಲಾರಪ್ಪ ಎಂಬ ವ್ಯಕ್ತಿ, ಕುಡಿದು ಬೈಕ್ ರೈಡ್ ಮಾಡಿಕೊಂಡು ಬರುತ್ತಿದ್ದರು. ಈ ವೇಳೆ ಕನಕ ವೃತ್ತದಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ದೊಡ್ಡಣ್ಣ ಬೈಕ್ ಅಡ್ಡಗಟ್ಟಿ ಪೈನ್ ಹಾಕಲು ಮುಂದಾಗಿದ್ದಾರೆ. ಬಳಿಕ ಬೈಕ್ ಸಮೇತ ಸ್ಟೇಷನ್ ಗೆ ಕರೆದೊಯ್ದು ಮೈಲಾರಪ್ಪ ಅವರಿಗೆ ಮನಬಂದಂತೆ ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಇದರಿಂದ ಮನನೊಂದ ಮೈಲಾರಪ್ಪ ಠಾಣೆ ಗೋಡೆ ಮೇಲಿಂದ ಕೆಳಗೆ ಜಿಗಿದಿದ್ದಾನೆ. ಸದ್ಯ ಮೈಲಾರಪ್ಪಗ ತಲೆಗೆ ಗಾಯಗಳಾಗಿದ್ದು, ಚಿತ್ರದುರ್ಗ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ಚಿತ್ರದುರ್ಗ ಶಾಸಕರಾದ ಕೆ.ಸಿ.ವೀರೇಂದ್ರ ಭೇಟಿ ನೀಡಿ, ಗಾಯಾಳು ಆರೋಗ್ಯ ವಿಚಾರಿಸಿದ್ದು, ಹಲ್ಲೆ ಮಾಡಿದ ಪೊಲೀಸ್ ಅಧಿಕಾರಿ ಮೇಲೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.