ಸಿಸಿಬಿ ಅಧಿಕಾರಿಗಳು ಬೆಳ್ಳಂಬೆಳಗ್ಗೆ ರೌಡಿಶೀಟರ್ ಗಳಿಗೆ ಶಾಕ್ ನೀಡಿ, ಚಳಿ ಬಿಡಿಸಿದ್ದಾರೆ.
ಹೊಸ ವರ್ಷ ಸಮೀಪಿಸುತ್ತಿದ್ದಂತೆ ಆಕ್ಟೀವ್ ಆಗುತ್ತಿದ್ದ ರೌಡಿಶೀಟರ್ ಗಳ ಮನೆಗಳ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸಿಸಿಬಿಯ ಆರ್ಗನೈಸ್ಡ್ ಕ್ರೈಂ ಕಂಟ್ರೋಲ್ ವಿಂಗ್ ನಿಂದ ಸುಮಾರು 40ಕ್ಕೂ ಅಧಿಕ ರೌಡಿ ಶೀಟರ್ ಗಳ ಮನೆಗಳ ಮೆಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ.
ದಾಳಿ ವೇಳೆ ರೌಡಿಶೀಟರ್ ಮನೆಗಳಲ್ಲಿ ಲಾಂಗು, ಮಚ್ಚುಗಳು ಪತ್ತೆಯಾಗಿವೆ. ಮಾದನಾಯಕನಹಳ್ಳಿಯಲ್ಲಿನ ಕುಳ್ಳ ಶಿವರಾಜ್ ಎಂಬ ರೌಡಿಶೀಟರ್ ಮನೆಯಲ್ಲಿ ಲಾಂಗು, ಮಚ್ಚುಗಳು ಪತ್ತೆಯಾಗಿವೆ. ಹೀಗಾಗಿ ವೆಪನ್ ಗಳ ಸಮೇತ ರೌಡಿಶೀಟರ್ ನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬ್ಯಾಡರಹಳ್ಳಿ, ಪರಪ್ಪನ ಅಗ್ರಹಾರ, ಮಾದನಾಯಕನಹಳ್ಳಿ ಸೇರಿದಂತೆ ಬೆಂಗಳೂರಿನ 12 ಕಡೆ ದಾಳಿ ನಡೆಸಲಾಗಿದೆ. ಚಂದ್ರಾಲೇಔಟ್, ಕಾಟನ್ ಪೇಟೆ, ಪರಪ್ಪನ ಅಗ್ರಹಾರ ಸೇರಿದಂತೆ ರೌಡಿಗಳಾದ ಅತೂಶ್, ಅಪ್ಪು ಸೇರಿದಂತೆ ಹಲವು ರೌಡಿಶೀಟರ್ ಗಳ ಮನೆ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಲಾಗಿದೆ. ದಾಳಿಯಲ್ಲಿ ಸಿಸಿಬಿ ಒಸಿಡಬ್ಲ್ಯು ವಿಂಗ್ ನ 5 ಇನ್ಸ್ ಪೆಕ್ಟರ್, 20ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಇದ್ದರು. ಅಪರಾಧ ಕೃತ್ಯಗಳನ್ನು ತಡೆಯುವ ನಿಟ್ಟಿನಲ್ಲಿ ಈ ದಾಳಿ ನಡೆದಿದೆ.