ನಾವು ಯಾವುದೇ ಕಾರಣಕ್ಕೂ ಜಾತಿ ಗಣತಿ ಒಪ್ಪುವುದಿಲ್ಲ. ಈಗಾಗಲೇ ವೀರಶೈವ ಮಹಾಸಭೆಯಲ್ಲಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗಿದೆ. ಶಾಮನೂರು ಶಿವಶಂಕರಪ್ಪ ಅವರ ಅಧ್ಯಕ್ಷತೆಯಲ್ಲಿ ತೀರ್ಮಾನ ಕೈಗೊಂಡಿರುವುದೇ ಅಂತಿಮ ಎಂದು ವೀರಶೈವ ಮಹಾಸಭಾ ರಾಜ್ಯಾಧ್ಯಕ್ಷ ಶಂಕರ್ ಬಿದರಿ ಹೇಳಿದ್ದಾರೆ.
ಶಿವಶಂಕರಪ್ಪ ಅವರು ತೆಗೆದುಕೊಂಡ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ. ರಾಜ್ಯದ ಎಲ್ಲಾ ಜನರಿಗೆ ಅದರಿಂದ ಒಳ್ಳೆಯದು ಆಗಲಿ. ಚಿನ್ನಪ್ಪ ರೆಡ್ಡಿ ಆಯೋಗ ಮತ್ತು ಹಾವನೂರು ಆಯೋಗಕ್ಕೆ ಹೋಲಿಸಿದರೆ ನಮ್ಮ ಜನ ಸಂಖ್ಯೆ ಕಡಿಮೆಯಾಗಿದೆ. ಚಿನ್ನಪ್ಪರೆಡ್ಡಿ ಆಯೋಗದಲ್ಲಿ ನಮ್ಮ ಜನಸಂಖ್ಯೆ ಶೇ. 17.34ರಷ್ಟಿತ್ತು. ಆದರೆ, ಈಗ 11.09ರಷ್ಟಾಗಿದೆ. ಈಗಿನ ವರದಿಯಲ್ಲಿ ಶೇ.6.32ರಷ್ಟು ಕಡಿಮೆಯಾಗಿದೆ.
ಈ ವಿಷಯವನ್ನು ನಮ್ಮ ಸಮಾಜದವರು ಮುಖ್ಯಮಂತ್ರಿ ಗಮನಕ್ಕೆ ತಂದಿದ್ದಾರೆ. ಈ ವರದಿ ಜಾರಿಯಾದರೆ ನಮಗೆ ತೊಂದರೆಯಾಗುವುದಿಲ್ಲ. ಅನೇಕ ಸಮಾಜದವರಿಗೆ ತೊಂದರೆ ಆಗುತ್ತೆ. ಕಳೆದ ಬಾರಿ 3B ಯಲ್ಲಿ ನಮ್ಮ ಸಮಾಜ 75 ಲಕ್ಷ ಇತ್ತು. ಈ ಸಲ 66 ಲಕ್ಷಕ್ಕೆ ತಂದಿದ್ದಾರೆ. ಕ್ಯಾಬಿನೆಟ್ ನಲ್ಲಿ ಯಾವ ತೀರ್ಮಾನ ಆಗುತ್ತದೆ ಎಂಬುವುದನ್ನು ನೋಡಿಕೊಂಡು ನಮ್ಮ ಹೋರಾಟದ ರೂಪರೇಷೆಗಳ ಬಗ್ಗೆ ತೀರ್ಮಾನಿಸುತ್ತೇವೆ ಎಂದಿದ್ದಾರೆ.