ಗದಗ: ಜಾತಿ ಗಣತಿ ವರದಿ ದೋಷ ಪೂರಿತವಾಗಿದೆ. ವರದಿಯಲ್ಲಿ ಲಿಂಗಾಯತರಿಗೆ ಅನ್ಯಾಯವಾಗಿದೆ. ಸರ್ಕಾರ ಇನ್ನೊಮ್ಮೆ ಸಮೀಕ್ಷೆ ನಡೆಸಿ ಮತ್ತೊಮ್ಮೆ ಜಾತಿ ಗಣತಿ ವರದಿ ಸಿದ್ದಪಡಿಸಬೇಕು ಎಂದು ಗದಗದ ತೋಂಟದಾರ್ಯ ಮಠದ ಡಾ. ಸಿದ್ದರಾಮ ಶ್ರೀಗಳು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಸರ್ಕಾರವು ಇತ್ತೀಚೆಗೆ ಜಾತಿ ಗಣತಿ ವರದಿಯನ್ನು ಸ್ವೀಕರಿಸಿದೆ. ಸಚಿವ ಸಂಪುಟದ ಸಭೆಯಲ್ಲಿ ಜಾತಿ ಗಣತಿ ಬಗ್ಗೆ ಚರ್ಚಿ ನಡೆಸಿದ್ದಾರೆ. ಏ. 17ರಂದು ಜಾತಿ ಗಣತಿ ವಿಚಾರವಾಗಿ ವಿಶೇಷ ಸಭೆ ಕರೆಯಲಾಗಿದೆ. ಜಾತಿ ಗಣತಿಯ ವರದಿ ಸಾರ್ವಜನಿಕರಲ್ಲಿ ಸಂದೇಹ ಹುಟ್ಟು ಹಾಕಿದೆ. ಸುಮಾರು ಏಳೆಂಟು ವರ್ಷಗಳ ಹಿಂದೆ ಜಾತಿ ಗಣತಿ ಸಿದ್ದ ಪಡಿಸಿದ್ದಾರೆ. ಆ ಜಾತಿ ಗಣತಿ ವರದಿ ಸಮರ್ಪಕವಾಗಿ ಇಲ್ಲ. ಆ ವರದಿಯನ್ನು ಸಿದ್ದಪಡಿಸಿದ ವ್ಯಕ್ತಿಗಳು ಕರ್ನಾಟಕ ಪ್ರತಿಯೊಬ್ಬ ವ್ಯಕ್ತಿಯನ್ನು ಸಂಪರ್ಕಿಸಿಲ್ಲವೆಂಬ ಆರೋಪವಿದೆ ಎಂದಿದ್ದಾರೆ.
ಕರ್ನಾಟಕದಲ್ಲಿ ಲಿಂಗಾಯತರು ಬಹು ಸಂಖ್ಯಾತರೆಂಬುವುದು ಎಲ್ಲರಿಗೂ ಗೊತ್ತಿದೆ. ನಂತರ ಒಕ್ಕಲಿಗರು ಸೇರಿದಂತೆ ವಿವಿಧ ಜಾತಿಯವರು ಇದ್ದಾರೆ. ಆದರೆ, ಜಾತಿ ಗಣತಿಯ ಮುಖ್ಯಾಂಶಗಳನ್ನು ಗಮನಿಸಿದ್ದಾಗ ಲಿಂಗಾಯತರ ಜನ ಸಂಖ್ಯೆ ಗಣನೀಯವಾಗಿ ಕಡಿಮೆ ಆಗಿದೆ. ಲಿಂಗಾಯತರು ಮೀಸಲಾತಿಗಾಗಿ ಉಪಜಾತಿಯ ಹೆಸರನ್ನು ಬರೆಸಿಸಿರುವ ಕಾರಣವೂ ಇರಬಹುದು ಎಂದಿದ್ದಾರೆ.
ಶಿಕ್ಷಣ, ರಾಜಕಾರಣ, ಉದ್ಯೋಗ ಹಾಗೂ ವ್ಯವಸಾಯ ಸೇರಿದಂತೆ ಅನೇಕ ಜಾತಿ ಉಪಜಾತಿಗಳಿಗೆ ಅನ್ಯಾಯ ವಾಗಬಹುದು. ನೂರಾರು ಉಪಜಾತಿಗಳನ್ನು ವರದಿಯಲ್ಲಿ ಕೈ ಬಿಟ್ಟಿರುವುದು ಅತ್ಯಂತ ಆಘಾತಕಾರಿಯಾಗಿದೆ. ಸರ್ಕಾರ ಸ್ವೀಕಾರ ಮಾಡಿರುವ ವರದಿ ಸಮರ್ಪಕವಾಗಿಲ್ಲ. ಸರ್ಕಾರ ಸಮೀಕ್ಷೆ ನಡೆಸಿ ಮತ್ತೊಮ್ಮೆ ಜಾತಿ ಗಣತಿ ವರದಿ ಸಿದ್ದ ಪಡಿಸಬೇಕೆಂದು ಆಗ್ರಹಿಸಿದರು.
ಲಿಂಗಾಯತರು ಜನ ಸಂಖ್ಯೆ ಅಂದಾಜಿನ ಪ್ರಕಾರ 1.50 ಲಕ್ಷಕ್ಕೂ ಅಧಿಕ ಇದೆ. ಆದರೆ, ಲಿಂಗಾಯತರ ಸಂಖ್ಯೆಯನ್ನು ವರದಿಯಲ್ಲಿ 72 ಲಕ್ಷಕ್ಕೆ ಇಳಿಸಿದ್ದು, ಅತ್ಯಂತ ಆಘಾತಕಾರಿ ಸಂಗತಿಯಾಗಿದೆ. ಜನಸಂಖ್ಯೆಯೇ ಇಲ್ಲದ ಬೇರೆ ಜಾತಿಯವರು ವರದಿಯಲ್ಲಿ ಮುನ್ನೆಲೆಗೆ ಬಂದಿದ್ದಾರೆ. ಹೀಗಾಗಿ ಸರ್ಕಾರ ಇನ್ನೊಮ್ಮೆ ಪರಿಶೀಲನೆ ಮಾಡಬೇಕು ಎಂದು ಹೇಳಿದ್ದಾರೆ.