ಮಂಡ್ಯ : ಹೋದಲ್ಲೆಲ್ಲ ಪತ್ರಕರ್ತರನ್ನೂ ಬಿಡದೆ ರಾಹುಲ್ ಗಾಂಧಿ ನಿಮ್ಮ ಜಾತಿ ಯಾವುದು ಅಂತಾ ಕೇಳುತ್ತಿದ್ದಾರೆ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಜಾತಿ ಬಗ್ಗೆ ಮಾತನಾಡುವಂತಹ ಕೆಟ್ಟ ಪರಿಸ್ಥಿತಿ ಬಂದಿದೆ. ರಾಜ್ಯದಲ್ಲಿ ಜಾತಿಗಣತಿ ಮಾಡಿದ್ದೀವಿ ಅಂತಾರೆ. ಮಂಡ್ಯದಲ್ಲೇ ಮನೆಗೆ ಬಾರದೆ ಕೂತಲ್ಲೇ ಜಾತಿ ಗಣತಿ ಮಾಡಿದ್ದಾರೆ. ಈ ಮೂಲಕ ಕೆಲವು ಸಮುದಾಯದ ಜನ ಹೆಚ್ಚಿದ್ದಾರೆಂದು ತೋರಿಸಲು ಈ ರೀತಿ ಪ್ರಯತ್ನಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಮುಸ್ಲಿಂ ಮುಖಂಡರೊಬ್ಬರು ದೊಡ್ಡ ಸಂಖ್ಯೆಯಲ್ಲಿದ್ದೇವೆ ಅಂತಾ ಹೇಳಿದ್ದರು. ಇದನ್ನು ಗಮನಿಸಿದರೆ ಜಾತಿಗಣತಿಯಲ್ಲಿ ಷಡ್ಯಂತ್ರ ಇರುವ ಅನುಮಾನವಿದೆ. ಹೀಗಾಗಿ ರಾಜ್ಯಾದ್ಯಂತ ಜಾತಿ ಗಣತಿ ವಿರುದ್ಧ ಜನಾಕ್ರೋಶ ಎದುರಾದರೂ ಆಶ್ಚರ್ಯ ಪಡಬೇಕಿಲ್ಲ. ರಾಜ್ಯ ಕಾಂಗ್ರೆಸ್ ಸರ್ಕಾರ ಈ ರೀತಿ ಷಡ್ಯಂತ್ರ ನಡೆಸುತ್ತಿದೆ. ಹಿಂದುಗಳನ್ನು ಜಾತಿ ಹೆಸರಿನಲ್ಲಿ ಪ್ರತ್ಯೇಕ ಮಾಡಲು ಹಾಗೂ ಮುಸ್ಲಿಂರನ್ನು ಒಗ್ಗಟ್ಟು ಮಾಡಲು ಕಾಂಗ್ರೆಸ್ ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಕ್ರೈಸ್ತ್, ಬ್ರಾಹ್ಮಣರು ಅಂತೆಲ್ಲ ಸಮಾಜದಲ್ಲಿ ಒಡಕು ಸೃಷ್ಟಿಸಲು ಕಾಂಗ್ರೆಸ್ ಯತ್ನಿಸುತ್ತಿದೆ. ಹಿಂದೂಗಳು ಒಗ್ಗಟ್ಟಾಗದಂತೆ ನೋಡಿಕೊಳ್ಳುವುದರ ಹಿಂದಿನ ಷಡ್ಯಂತ್ರವಿದು. ರಾಜ್ಯ ಹಾಗೂ ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ತನ್ನ ಮತ ಬ್ಯಾಂಕ್ ಬಲಪಡಿಸಿಕೊಳ್ಳಲು ಈ ರೀತಿ ಯತ್ನಿಸುತ್ತದೆ. ಗ್ಯಾರಂಟಿಯಿಂದ ಕಂಗೆಟ್ಟಿರುವ ಮತದಾರರನ್ನ ಡೈವರ್ಟ್ ಮಾಡಲು ಕಾಂಗ್ರೆಸ್ ಹೂಡಿರುವ ತಂತ್ರವಷ್ಟೇ ಇದು ಎಂದು ಆರೋಪಿಸಿದ್ದಾರೆ.