ಹಾಸನ: ಕೇವಲ 7 ಸಾವಿರ ರೂಪಾಯಿ ಹಣಕ್ಕಾಗಿ ಗಾಂಜಾ ಅಮಲಿನಲ್ಲಿ ಗೆಳೆಯನನ್ನೇ ಅಮಾನುಷ ರೀತಿಯಲ್ಲಿ ಕೊಲೆಗೈದ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ಅರಸೀಕೆರೆ ತಾಲ್ಲೂಕಿನ ಕಾಡಯ್ಯನಕೊಪ್ಪಲು ಗ್ರಾಮದ 22 ವರ್ಷದ ವರುಣ್ ಕೊಲೆ ಪ್ರಕರಣದಲ್ಲಿ ಐದು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸ್ ವರಿಷ್ಠಾಧಿಕಾರಿ ಶುಭಾನ್ವಿತ ನೀಡಿರುವ ಮಾಹಿತಿಯ ಪ್ರಕಾರ, ವರುಣನ ಗೆಳೆಯ ಶಶಾಂಕ್ ಹಾಗೂ ಇತರೆ ಆರೋಪಿ ಯುವಕರು ಮಾರ್ಚ್ 10ರಂದು ವರುಣನನ್ನು ಸಿನಿಮೀಯ ಶೈಲಿಯಲ್ಲಿ ಅಪಹರಿಸಿ, ಕಿರಣ್ ಎಂಬಾತನ ತೋಟದ ಮನೆಯಲ್ಲಿ ಕಟ್ಟಿಹಾಕಿ ಹಲ್ಲೆ ನಡೆಸಿದ್ದಾರೆ. ಎರಡು ದಿನಗಳ ಕಾಲ ಹಲ್ಲೆಗೊಳಪಡಿಸಿದ ಬಳಿಕ ಮಾರ್ಚ್ 12ರಂದು ಕೊಲೆಗೈದು, ಶವವನ್ನು ಮಾರ್ಚ್ 13ರ ಮುಂಜಾನೆ ಅರಸೀಕೆರೆ ತಾಲ್ಲೂಕಿನ ಜೇನುಕಲ್ ಸಿದ್ದೇಶ್ವರ ಸ್ವಾಮಿ ಬೆಟ್ಟದ ಬಳಿ ಸುಟ್ಟು ಬಿಟ್ಟಿದ್ದರು.
ಮಾರ್ಚ್ 10ರಿಂದ ಮಗ ಕಾಣೆಯಾಗಿದ್ದ ಹಿನ್ನೆಲೆಯಲ್ಲಿ ವರುಣ್ ತಾಯಿ ಕಲಾವತಿ ಮಾರ್ಚ್ 15ರಂದು ಗಂಡಸಿ ಠಾಣೆಯಲ್ಲಿ ದೂರು ನೀಡಿದ್ದರು. ನಂತರ, ಪ್ರಕರಣದ ತನಿಖೆ ವೇಳೆ ವರುಣ್ನ ಕೊಲೆ ಸಿಕ್ಕು ಬಿಚ್ಚು ಬಿದ್ದಿತು. ಮಾರ್ಚ್ 19ರಂದು ದುದ್ದಾ ಠಾಣೆಯಲ್ಲಿ ಕೊಲೆ ಕೇಸ್ ದಾಖಲಾಗಿದ್ದು, ಸತೀಶ್, ಉಮರ್, ವಿಜಯ್, ಚೇತನ್ ಮತ್ತು ಮನುನನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿ ಶಶಾಂಕ್ ಸೇರಿದಂತೆ ಇನ್ನೂ ಕೆಲವರ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ವರುಣ್ನಿಂದ ಗಾಂಜಾ ಖರೀದಿಗೆ ಶಶಾಂಕ್ 7 ಸಾವಿರ ರೂಪಾಯಿ ನೀಡಿ, ಗಾಂಜಾ ಕೊಡದಿದ್ದ ಕಾರಣ ಈ ಹತ್ಯೆ ನಡೆದಿದೆ ಎನ್ನಲಾಗುತ್ತಿದೆ. ಇದೇ ಕುರಿತು ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರೆಸಿದ್ದಾರೆ.
ಆರು ತಿಂಗಳ ಹಿಂದೆ ತಂದೆ ಮೃತಪಟ್ಟ ಕಾರಣ ಬೆಂಗಳೂರಿಗೆ ತೆರಳಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ವರುಣ್ ಯುಗಾದಿ ಪ್ರಯುಕ್ತ ಊರಿಗೆ ಬಂದಿದ್ದ. ಬೈಕ್ ರಿಪೇರಿ ಮಾಡುವ ನೆಪದಲ್ಲಿ ಮನೆಬಿಟ್ಟು ಹೊರಟ ವರುಣ್ ವಾಪಸ್ ಬಾರದೇ ಕಾಣೆಯಾಗಿದ್ದನು. ತನಿಖೆಯಲ್ಲಿ ಶವ ಸುಟ್ಟಿರುವುದಕ್ಕೂ ಸಂಬಂಧಿಸಿದ ಸಾಕ್ಷಿಗಳು ಸಿಕ್ಕಿದ್ದು, ಅದರ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಎಸ್ಪಿ ತಿಳಿಸಿದ್ದಾರೆ.


















