ನವದೆಹಲಿ: ವಿಧೇಯಕಕ್ಕೆ ಅಂಕಿತ ಹಾಕಲು ರಾಜ್ಯಪಾಲರಿಗೆ ಕಾಲಮಿತಿ ಹೇರಬಹುದೇ? ಎಂಬ ಪ್ರಶ್ನೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸುಪ್ರೀಂ ಕೋರ್ಟ್ ಮುಂದಿಟ್ಟಿದ್ದಾರೆ.
ತಮಿಳುನಾಡಿನಲ್ಲಿ ಅಂಕಿತಕ್ಕೆ ಬಾಕಿ ಉಳಿದಿದ್ದ ವಿಧೇಯಕಗಳಿಗೆ(States vs Governor) ಸಂಬಂಧಿಸಿದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಕಳೆದ ತಿಂಗಳು, ರಾಜ್ಯಪಾಲರು ಹಾಗೂ ರಾಷ್ಟ್ರಪತಿಗಳಿಗೆ ವಿಧೇಯಕ ಕುರಿತು ನಿರ್ಧರಿಸಲು ಕಾಲಮಿತಿಯನ್ನು ನಿಗದಿಪಡಿಸಿ ಐತಿಹಾಸಿಕ ತೀರ್ಪು ನೀಡಿತ್ತು. ಇದೀಗ ಸ್ವತಃ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸುಪ್ರೀಂ ಕೋರ್ಟ್ಗೆ ಪತ್ರ ಬರೆದು, ಈ ರೀತಿ ಕಾಲಮಿತಿ ಹೇರಬಹುದೇ ಎಂದು ಪ್ರಶ್ನಿಸಿದ್ದಾರೆ.
ಸಂವಿಧಾನದ 143ನೇ ವಿಧಿಯ ಅನ್ವಯ ರಾಷ್ಟ್ರಪತಿ ಮುರ್ಮು ಅವರು ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ನ ಅಭಿಪ್ರಾಯವನ್ನು ಕೇಳಿದ್ದಾರೆ. ಸಂವಿಧಾನದ ಈ ವಿಧಿಯು ಕಾನೂನಾತ್ಮಕ ವಿಚಾರಗಳು ಅಥವಾ ಸಾರ್ವಜನಿಕ ಮಹತ್ವದ ವಿಚಾರಗಳು ಎದ್ದಾಗ ನ್ಯಾಯಾಲಯವನ್ನು ಸಂಪರ್ಕಿಸುವ ಅಧಿಕಾರವನ್ನು ರಾಷ್ಟ್ರಪತಿಗಳಿಗೆ ನೀಡುತ್ತದೆ.
ಅದರಂತೆ ಸುಪ್ರೀಂ ಕೋರ್ಟ್ಗೆ ಹಲವು ಪ್ರಶ್ನೆಗಳನ್ನು ಕೇಳಿರುವ ಮುರ್ಮು, “ಸಂವಿಧಾನದಡಿ ರಾಷ್ಟ್ರಪತಿಗಳು/ರಾಜ್ಯಪಾಲರಿಗೆ ಇರುವ ಅಧಿಕಾರವನ್ನು ಅದೇ ಸಂವಿಧಾನದ 142ನೇ ವಿಧಿಯಡಿ ತನಗಿರುವ ಅಧಿಕಾರ ಬಳಸಿಕೊಂಡು ಸುಪ್ರೀಂ ಕೋರ್ಟ್ ಬದಲಿಸಲು ಸಾಧ್ಯವೇ? ರಾಜ್ಯಗಳು ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್ನ ವಿಶೇಷಾಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆಯೇ, ರಾಷ್ಟ್ರಪತಿ ಅಥವಾ ರಾಜ್ಯಪಾಲರಿಗೆ ಕಾಲಮಿತಿಯನ್ನು ಕೋರ್ಟ್ ನಿಗದಿಪಡಿಸಲು ಹೇಗೆ ಸಾಧ್ಯ, ಸಂವಿಧಾನದ 200ನೇ ವಿಧಿಯಡಿ ವಿಧೇಯಕಗಳು ಸಲ್ಲಿಕೆಯಾದಾಗ ರಾಜ್ಯಪಾಲರ ಮುಂದಿರುವ ಸಾಂವಿಧಾನಿಕ ಆಯ್ಕೆಗಳೇನು, ಸಂವಿಧಾನದ 361ನೇ ವಿಧಿಯೇ ರಾಷ್ಟ್ರಪತಿ ಅಥವಾ ರಾಜ್ಯಪಾಲರು ತಮ್ಮ ಕರ್ತವ್ಯ ಅಥವಾ ಅಧಿಕಾರ ಚಲಾವಣೆಯ ವಿಚಾರದಲ್ಲಿ ಯಾವುದೇ ನ್ಯಾಯಾಲಯಕ್ಕೆ ಉತ್ತರದಾಯಿಯಾಗಿರುವುದಿಲ್ಲ ಎಂದು ಹೇಳುತ್ತದೆಯಲ್ಲವೇ?” ಎಂದಿದ್ದಾರೆ.
ಏಪ್ರಿಲ್ ತಿಂಗಳಲ್ಲಿ ನ್ಯಾ.ಜೆ.ಬಿ.ಪಾರ್ದಿವಾಲಾ ಮತ್ತು ನ್ಯಾ.ಆರ್. ಮಹದೇವನ್ ಅವರ ನ್ಯಾಯಪೀಠವು, ಸಂವಿಧಾನದಡಿ ತಮಗಿರುವ ವಿಶೇಷಾಧಿಕಾರವನ್ನು ಬಳಸಿಕೊಂಡು, ರಾಜ್ಯಪಾಲರ ಅಂಕಿತ ಸಿಗದ 10 ವಿಧೇಯಕಗಳಿಗೆ ಅಂಗೀಕಾರ ನೀಡಿತ್ತು. ಅಲ್ಲದೇ ರಾಷ್ಟ್ರಪತಿಗಳು ಮತ್ತು ರಾಜ್ಯಪಾಲರು ಯಾವುದೇ ವಿಧೇಯಕವನ್ನು ತಮ್ಮಲ್ಲೇ ಉಳಿಸಿಕೊಳ್ಳುವಂತಿಲ್ಲ. 3 ತಿಂಗಳ ಒಳಗಾಗಿ ವಿಧೇಯಕ ಕುರಿತು ನಿರ್ಧಾರ ಕೈಗೊಳ್ಳಬೇಕು ಎಂದು ತೀರ್ಪು ನೀಡಿತ್ತು.