ವಿಜಯೇಂದ್ರ ಮತ್ತು ಯಡಿಯೂರಪ್ಪ ವಿರುದ್ಧ ಬಹಿರಂಗವಾಗಿಯೇ ಸಮರ ಸಾರಿದ್ದ ಬಸನಗೌಡ ಪಾಟೀಲ್ ಮಾತಾಡಿದ ತಪ್ಪಿಗೆ ಬೆಲೆ ತೆತ್ತಿದ್ದಾರೆ. ತಡವಾಗಿಯಾದರೂ ಬಿಜೆಪಿ ಹೈಕಮಾಂಡ್ ಯತ್ನಾಳ್ ರ ಆಟಾಟೋಪಕ್ಕೆ ಬರೆ ಎಳೆದಿದೆ. ಈ ಮೂಲಕ ವಿಜಯೇಂದ್ರ ನಾಯಕತ್ವಕ್ಕೆ ಬಹುಪರಾಕ್ ಎಂದಿದೆ. ಹೀಗಿರುವಾಗ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವ ವಾತಾವರಣವನ್ನು ವಿಜಯೇಂದ್ರ ಸರಿ ಮಾಡುವ ಹೊಣೆ ಹೊತ್ತಿದ್ದಾರೆ. ಹೀಗಾಗಿಯೇ ಭಿನ್ನರ ಗುಂಪನ್ನು ವಿಶ್ವಾಸಕ್ಕೆ ಪಡೆದು ಪಕ್ಷ ಮುನ್ನಡೆಸೋ ಕಾರ್ಯಕ್ಕೀಗ ವಿಜಯೇಂದ್ರ ಮುಂದಾಗಿದ್ದಾರೆ.
ಭಿನ್ನ ಬಣದ ಮೊದಲ ಹಂತದ ನಾಯಕರೊಟ್ಟಿಗೆ ಚರ್ಚೆ
ಯತ್ನಾಳ್ ಉಚ್ಚಾಟನೆ ಬೆನ್ನಲ್ಲೇ ಹೈಕಮಾಂಡ್ ಬಂಡಾಯ ನಾಯಕರಿಗೆ ಸ್ಪಷ್ಟ ಸಂದೇಶವನ್ನಂತೂ ರವಾನಿಸಿದೆ. ಈ ಮೂಲಕ ಪಕ್ಷದಲ್ಲಿ ವರಿಷ್ಠರ ತೀರ್ಮಾನವೇ ಅಂತಿಮ ಎನ್ನುವುದನ್ನು ಋಜುವಾತು ಮಾಡಿದೆ. ಅಷ್ಟೇ ಅಲ್ಲಾ ಅಧ್ಯಕ್ಷರ ಬದಲಾವಣೆಯ ಭಿನ್ನರ ಬೇಡಿಕೆಗೂ ಸೊಪ್ಪು ಹಾಕಿಲ್ಲ. ಈ ನಡುವೆ ಉಚ್ಚಾಟನೆ ಛಡಿಯೇಟು. ಅಪಶೃತಿ ಹಾಡಿದವರಲ್ಲೂ ಆತಂಕ ಹೆಚ್ಚಿಸಿದೆ. ಮುಂದೆ ತಮಗೂ ಕಠಿಣ ಶಿಕ್ಷೆ ನಿಶ್ಚಿತವಾ ಅನ್ನೋ ಭೀತಿ ಎದುರಾಗಿದೆ. ಇದೇ ಪಕ್ವ ಸಮಯ ಅಂತಾ ಅರಿತಿರುವ ವಿಜಯೇಂದ್ರ ಈಗ ಭಿನ್ನ ನಾಯಕರ ಮೊದಲ ಹಂತದ ಮುಖಂಡರನ್ನೇ ಮನವೊಲಿಸಿ ಜೊತೆಗಿಟ್ಟುಕೊಂಡು ಮುಂದಕ್ಕೆ ಸಾಗೋ ಕೆಲಸ ಶುರುಮಾಡಿದ್ದಾರೆ.
ಜನಾಕ್ರೋಶ ಯಾತ್ರೆಯಿಂದ ಹೆಚ್ಚಿದ ವಿಜಯೇಂದ್ರ ಬಲ!
ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ನೀತಿ ವಿರುದ್ಧ ಬಿಜೆಪಿ ಜನಾಕ್ರೋಶ ಯಾತ್ರೆ ಹಮ್ಮಿಕೊಂಡಿತ್ತು. ವಿಜಯೇಂದ್ರ ಸಾರಥ್ಯದ ಈ ಸಾಂಘಿಕ ಹೋರಾಟ ನಿಜಕ್ಕೂ ಫಲ ನೀಡಿದೆ. ಭಿನ್ನರ ಬಣದ ಎರಡನೇ ಹಂತದ ನಾಯಕರು ಯಾತ್ರೆಯಲ್ಲಿ ಭಾಗಿಯಾಗುವ ಮೂಲಕ ಶಾಂತವಾಗಿದ್ದರೆ, ಇತ್ತ ತಟಸ್ಥ ಬಣವೂ ವಿಜಯೇಂದ್ರ ನಾಯಕತ್ವದ ಪರ ಧ್ವನಿ ಎತ್ತಿದೆ. ಈಗಾಗಲೇ ಭಿನ್ನರ ಬಣದ ನಾಯಕರೊಟ್ಟಿಗೆ ತೆರೆಮರೆಯಲ್ಲಿ ಮಾತುಕತೆಗಳು ನಡೆದಿದ್ದು ಶೀಘ್ರವೇ ಎಲ್ಲವೂ ಹಾದಿಗೆ ಬರುತ್ತೆ ಎನ್ನಲಾಗುತ್ತಿದೆ. ಈ ನಡುವೆ ಖುದ್ದು ಹೈಕಮಾಂಡ್ ಕೂಡಾ ಈ ತಿಂಗಳ ಅಂತ್ಯ ಇಲ್ಲವೇ ಮೇ ಮೊದಲ ವಾರದಲ್ಲಿ ಪಕ್ಷದ ರಾಜ್ಯಾಧ್ಯಕ್ಷರ ವಿಚಾರವನ್ನೂ ಇತ್ಯರ್ಥ ಮಾಡುವುದಾಗಿ ಸ್ಪಷ್ಟಪಡಿಸಿದೆ. ಹೀಗಾಗಿ ಮುಂದಿನ ತಿಂಗಳ ಹೊತ್ತಿಗೆ ಕೇಸರಿ ಪಡಸಾಲೆಯಲ್ಲಿ ಎಲ್ಲವೂ ಒಂದು ಹಂತಕ್ಕೆ ಬರುವ ಲಕ್ಷಣಗಳು ಗೋಚರಿಸುತ್ತಿವೆ.