ಅಮರಾವತಿ: ತಿರುಪತಿ ತಿಮ್ಮಪ್ಪನ ದೇಗುಲಕ್ಕೆ ಉದ್ಯಮಿಯೊಬ್ಬರು ಬರೋಬ್ಬರಿ 140 ಕೋಟಿ ರೂ. ಮೌಲ್ಯದ 121 ಕೆ.ಜಿ ಚಿನ್ನವನ್ನು ಸೇವಾರ್ಥವಾಗಿ ಅರ್ಪಿಸಿದ್ದಾರೆಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ತಿಳಿಸಿದ್ದಾರೆ.
ವರದಿಗಾರರೊಂದಿಗೆ ಮಾತನಾಡಿದ ನಾಯ್ಡು, ‘ತಿಮ್ಮಪ್ಪನ ಭಕ್ತರೊಬ್ಬರು ಕಂಪನಿಯೊಂದನ್ನು ಸ್ಥಾಪಿಸಿ ಯಶಸ್ವಿಯಾಗಿದ್ದಾರೆ. ಕೃತಜ್ಞತೆಯ ಸಂಕೇತವಾಗಿ ದೇವರಿಗೆ ಚಿನ್ನವನ್ನು ದಾನ ಮಾಡಲು ನಿರ್ಧರಿಸಿದ್ದಾರೆ’ ಎಂದು ಹೇಳಿದ್ದಾರೆ.
‘ನನ್ನ ಕಂಪನಿಯ ಶೇ 60ರಷ್ಟು ಷೇರುಗಳನ್ನು ಮಾರಾಟ ಮಾಡುವ ಮೂಲಕ 6,000 ಕೋಟಿಯಿಂದ 7,000 ಕೋಟಿ ಗಳಿಸಿದ್ದೇನೆ. ವೆಂಕಟರಮಣ ಸ್ವಾಮಿ ಅನುಗ್ರಹದಿಂದಲೇ ನಾನು ಇಷ್ಟೊಂದು ಸಂಪತ್ತನ್ನು ಗಳಿಸಿದ್ದೇನೆ. ಕೃತಜ್ಞತೆಯ ಸೇವಾರ್ಥವಾಗಿ ವೆಂಕಟರಮಣನಿಗೆ ಚಿನ್ನವನ್ನು ಸೇವಾರ್ಥವಾಗಿ ನೀಡಲು ನಿರ್ಧರಿಸಿದ್ದೇನೆ’ ಎಂದು ಹೆಸರು ಉಲ್ಲೇಖಿಸಲು ಇಚ್ಛಿಸದ ಉದ್ಯಮಿ ತಿಳಿಸಿದ್ದಾರೆ.
‘ಪ್ರತಿದಿನ ವೆಂಕಟೇಶ್ವರ ಸ್ವಾಮಿಯ ವಿಗ್ರಹವನ್ನು 120 ಕೆ.ಜಿ ತೂಕದ ಚಿನ್ನದ ಆಭರಣಗಳಿಂದ ಅಲಂಕರಿಸಲಾಗುತ್ತದೆ ಎಂದು ಟಿಡಿಪಿ ಮುಖ್ಯಸ್ಥರು ಹೇಳಿದ್ದರು. ಹಾಗಾಗಿ ನಾನು 121 ಕೆ.ಜಿ ತೂಕದ ಚಿನ್ನವನ್ನು ಸೇವಾರ್ಥವಾಗಿ ದೇಗುಲಕ್ಕೆ ಅರ್ಪಿಸುತ್ತಿದ್ದೇನೆ’ ಎಂದು ಉದ್ಯಮಿ ಹೇಳಿದ್ದಾರೆ.
ತಿರುಪತಿಯ ಉಚಿತ ಅನ್ನದಾನ ಕಾರ್ಯಕ್ರಮಕ್ಕೆ ಬೆಂಗಳೂರಿನ ಉದ್ಯಮಿ ಕಲ್ಯಾಣ ರಾಮನ್ ಕೃಷ್ಣಮೂರ್ತಿ 1 ಕೋಟಿ ಹಾಗೂ ಕೆ.ಎಂ. ಶ್ರೀನಿವಾಸ ಮೂರ್ತಿ 148 ಗ್ರಾಂ ತೂಕದ, ಅಂದಾಜು 25 ಲಕ್ಷ ಮೌಲ್ಯದ ಚಿನ್ನದ ಪದಕ ಕೊಡುಗೆಯಾಗಿ ನೀಡಿದ್ದಾರೆ ಎಂದು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಪ್ರಕಟಣೆಯಲ್ಲಿ ತಿಳಿಸಿದೆ.


















