ಪಾಟ್ನಾ: ಬಿಹಾರ ವಿಧಾನಸಭೆ ಚುನಾವಣೆಗೆ ಇನ್ನು ಕೆಲವು ತಿಂಗಳು ಬಾಕಿಯಿರುವಂತೆಯೇ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜ್ಯದ ಜನತೆಗೆ ಬಂಪರ್ ಕೊಡುಗೆ ಘೋಷಿಸಿದ್ದಾರೆ. ರಾಜ್ಯದ ಸಾಮಾಜಿಕ ಭದ್ರತೆ ಪಿಂಚಣಿ ಯೋಜನೆಯ ಮೊತ್ತವನ್ನು ನಿತೀಶ್ ಪರಿಷ್ಕರಿಸಿದ್ದು, ಹಿರಿಯ ನಾಗರಿಕರು ಮತ್ತು ಅಂಗವಿಕಲರ ಪಿಂಚಣಿ ಮೊತ್ತವನ್ನು ತಿಂಗಳಿಗೆ 1,100 ರೂಪಾಯಿಗೆ ಏರಿಸಿದ್ದಾರೆ. ಈವರೆಗೆ ಈ ಮೊತ್ತವು ತಿಂಗಳಿಗೆ 400 ರೂಪಾಯಿಯಿತ್ತು.
ಜುಲೈ ತಿಂಗಳಿಂದಲೇ ಪರಿಷ್ಕೃತ ಮೊತ್ತವನ್ನು ಹಂಚಿಕೆ ಮಾಡಲಾಗುತ್ತದೆ ಎಂದೂ ಸಿಎಂ ನಿತೀಶ್ ಘೋಷಿಸಿದ್ದಾರೆ. ಈ ಘೋಷಣೆಯಿಂದಾಗಿ 1.96 ಕೋಟಿ ಫಲಾನುಭವಿಗಳಿಗೆ ಅನುಕೂಲ ಕಲ್ಪಿಸಲಿದೆ. ಪ್ರಧಾನಿ ನರೇಂದ್ರ ಮೋದಿಯವರ ಬಿಹಾರ ಭೇಟಿಯ ಬೆನ್ನಲ್ಲೇ ನಿತೀಶ್ ಕುಮಾರ್ ಈ ಘೋಷಣೆ ಮಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ನಿತೀಶ್ ಕುಮಾರ್ ಅವರು, ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಯಡಿ ರಾಜ್ಯದ ವಿಧವೆಯರು, ಹಿರಿಯ ನಾಗರಿಕರು ಮತ್ತು ವಿಕಲಾಂಗರು ಇನ್ನು ಮುಂದೆ ಪ್ರತಿ ತಿಂಗಳು 400 ರೂಪಾಯಿಯ ಬದಲಾಗಿ 1,100 ರೂಪಾಯಿಯನ್ನು ಪಡೆಯಲಿದ್ದಾರೆ. ಜುಲೈ ತಿಂಗಳಿಂದಲೇ ಎಲ್ಲ ಫಲಾನುಭವಿಗಳೂ ಪರಿಷ್ಕೃತ ಮೊತ್ತವನ್ನು ಪಡೆಯಲಿದ್ದಾರೆ. ಪ್ರತಿ ತಿಂಗಳ 10ನೇ ತಾರೀಕಿನಂದು ಪ್ರತಿಯೊಬ್ಬರ ಬ್ಯಾಂಕ್ ಖಾತೆಗಳಿಗೆ ಈ ಮೊತ್ತ ಜಮೆಯಾಗಲಿದೆ. ಈ ನಿರ್ಧಾರದಿಂದಾಗಿ 1,09,69,255 ಫಲಾನುಭವಿಗಳಿಗೆ ಅನುಕೂಲವಾಗಲಿದೆ ಎಂದಿದ್ದಾರೆ.
ಇದೇ ವೇಳೆ ನಿತೀಶ್ ಕುಮಾರ್ ಅವರ ಈ ಘೋಷಣೆ ಕುರಿತು ಪ್ರತಿಕ್ರಿಯಿಸಿರುವ ಬಿಹಾರದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರು, ರಾಜ್ಯದ ವಿಧವೆಯರು, ಹಿರಿಯ ನಾಗರಿಕರು ಮತ್ತು ವಿಕಲಾಂಗರ ಪಿಂಚಣಿ ಮೊತ್ತವನ್ನು ಮುಖ್ಯಮಂತ್ರಿಗಳು ಏರಿಕೆ ಮಾಡಿದ್ದಾರೆ. ಇದೊಂದು ಐತಿಹಾಸಿಕ ದಿನವಾಗಿದೆ. ಇದಕ್ಕಾಗಿ ನಾನು ಮುಖ್ಯಮಂತ್ರಿಯವರನ್ನು ಅಭಿನಂದಿಸುತ್ತೇನೆ ಎಂದು ಹೇಳಿದ್ದಾರೆ.
ಇದೇ ವರ್ಷದ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಬಿಹಾರ ವಿಧಾನಸಭೆ ಚುನಾವಣೆ ನಡೆಯಲಿದೆ.