ನವದೆಹಲಿ: ಅಯೋಧ್ಯೆಯ ಹನುಮಾನ್ ಗರ್ಹಿ ದೇವಾಲಯದಿಂದ ಹೊರಜಗತ್ತಿಗೆ ಕಾಲೇ ಇಡದ ಪ್ರಧಾನ ಅರ್ಚಕ ಮಹಂತ ಪ್ರೇಮ್ ದಾಸ್ ಅವರು ಅಕ್ಷಯ ತೃತೀಯ (ಏಪ್ರಿಲ್ 30) ದಿನದಂದು ಇದೇ ಮೊದಲ ಬಾರಿಗೆ ದೇವಾಲಯದ ಆವರಣದಿಂದ ಹೊರಬಂದು ಪಕ್ಕದಲ್ಲೇ ಇರುವ ರಾಮಮಂದಿರಕ್ಕೆ(Ayodhya Ram Temple) ಭೇಟಿ ನೀಡಲಿದ್ದಾರೆ. ಈ ಮೂಲಕ ಅವರು ಶತಮಾನಗಳಷ್ಟು ಹಳೆಯ ಸಂಪ್ರದಾಯಕ್ಕೆ ಅಂತ್ಯ ಹಾಡಲಿದ್ದಾರೆ. ಗಡ್ಡಿ ನಶೀನ್ ಎಂದು ಕರೆಯಲ್ಪಡುವ ಮುಖ್ಯ ಅರ್ಚಕ ಮಹಂತ ಪ್ರೇಮ್ ದಾಸ್ ಅವರಿಗೆ ಈಗ 70 ವರ್ಷ ವಯಸ್ಸು.
ಅಯೋಧ್ಯೆಯ 32 ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಹನುಮಾನ್ ಗರ್ಹಿಯ ಸಂಕೀರ್ಣ ಬಿಟ್ಟು ಅವರು ಈವರೆಗೆ ಹೊರಗೆ ಬಂದೇ ಇಲ್ಲ. 18ನೇ ಶತಮಾನದಲ್ಲಿ ದೇವಾಲಯದ ಸ್ಥಾಪನೆಯಾದಾಗಿನಿಂದಲೂ ಅದರ ಪ್ರಧಾನ ಅರ್ಚಕರು (ಗಡ್ಡಿ ನಶೀನ್) ತಮ್ಮ ಜೀವನದುದ್ದಕ್ಕೂ ದೇವಾಲಯದ ಸಂಕೀರ್ಣವನ್ನು ಬಿಟ್ಟು, ಹೊರಜಗತ್ತಿಗೆ ಕಾಲಿಡುವುದನ್ನು ನಿಷೇಧಿಸಲಾಗಿದೆ. ಇದು ಆ ದೇಗುಲದ ಪದ್ಧತಿಯೂ ಆಗಿದೆ.
“18 ನೇ ಶತಮಾನದಲ್ಲಿ ದೇವಾಲಯದ ಸ್ಥಾಪನೆಯೊಂದಿಗೆ ಪ್ರಾರಂಭವಾದ ಸಂಪ್ರದಾಯವು ಎಷ್ಟು ಕಟ್ಟುನಿಟ್ಟಾಗಿತ್ತು ಎಂದರೆ ‘ಗಡ್ಡಿ ನಶೀನ್’ ಸ್ಥಳೀಯ ನ್ಯಾಯಾಲಯಗಳ ಮುಂದೆಯೂ ಹಾಜರಾಗುವುದನ್ನು ನಿಷೇಧಿಸಲಾಗಿದೆ” ಎಂದು ಅಯೋಧ್ಯೆ ನಿವಾಸಿ ಪ್ರಜ್ವಲ್ ಸಿಂಗ್ ಹೇಳಿದ್ದಾರೆ.

ಆದರೆ, ಈಗ ಮಹಂತ ಪ್ರೇಮ್ ದಾಸ್ ಅವರು ಶ್ರೀರಾಮಜನ್ಮಭೂಮಿಯಲ್ಲಿ ತಲೆಎತ್ತಿರುವ ರಾಮಮಂದಿರಕ್ಕೆ ಭೇಟಿ ನೀಡಿ, ಬಾಲರಾಮನ ದರ್ಶನ ಪಡೆಯಬೇಕೆಂಬ ಮಹದಾಸೆಯನ್ನು ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಿರ್ವಾಣಿ ಅಖಾಡದ ಕೌನ್ಸಿಲ್ ಸದಸ್ಯರು ಸಭೆ ಸೇರಿ ಚರ್ಚಿಸಿ, ಪ್ರೇಮ್ ದಾಸ್ ಅವರಿಗೆ ದೇಗುಲದಿಂದ ಹೊರಬರಲು ಅನುಮತಿ ನೀಡಿದ್ದಾರೆ. ಈ ಮೂಲಕ ಶತಮಾನಗಳಷ್ಟು ಹಳೆಯ ನಿರ್ಬಂಧಕ್ಕೆ ತಿಲಾಂಜಲಿ ನೀಡಲು ಸಮಿತಿಯು ಸರ್ವಾನುಮತದ ನಿರ್ಧಾರ ಕೈಗೊಂಡಿದೆ.
“ಏಪ್ರಿಲ್ 30ರ ಅಕ್ಷಯ ತೃತೀಯದಂದು, ಗಡ್ಡಿ ನಶೀನ್ ಮಹಂತ ಪ್ರೇಮ್ ದಾಸ್ ಅವರು ಮೆರವಣಿಗೆಯಲ್ಲಿ ಸಾಗಿ ರಾಮಮಂದಿರದಲ್ಲಿ ಬಾಲರಾಮನ ದರ್ಶನ ಪಡೆಯಲಿದ್ದಾರೆ. ಹನುಮಾನ್ ಗರ್ಹಿಯಿಂದ ರಾಮಮಂದಿರದವರೆಗೆ ಸಾಗುವ ಈ ಮೆರವಣಿಗೆಯುದ್ದಕ್ಕೂ ಆನೆಗಳು, ಒಂಟೆಗಳು ಮತ್ತು ಕುದುರೆಗಳೂ ಭಾಗಿಯಾಗಲಿವೆ” ಎಂದು ನಿರ್ವಾಣಿ ಅಖಾಡದ ಮುಖ್ಯಸ್ಥ ಮಹಂತ್ ರಾಮ್ ಕುಮಾರ್ ದಾಸ್ ಹೇಳಿದ್ದಾರೆ.
ಈ ಅದ್ಧೂರಿ ಮೆರವಣಿಗೆಯಲ್ಲಿ ನಾಗಾ ಸಾಧುಗಳು, ಅವರ ಶಿಷ್ಯರು, ಸ್ಥಳೀಯ ಭಕ್ತರು ಮತ್ತು ವ್ಯಾಪಾರಿಗಳು ಭಾಗವಹಿಸಲಿದ್ದಾರೆ. ಇವರೆಲ್ಲರೂ ರಾಮ ಮಂದಿರದ ಕಡೆಗೆ ತೆರಳುವ ಮೊದಲು ಧಾರ್ಮಿಕ ಪುಣ್ಯ ಸ್ನಾನಕ್ಕಾಗಿ ಬೆಳಿಗ್ಗೆ 7 ಗಂಟೆಗೆ ಸರಯೂ ನದಿಯ ದಡಕ್ಕೆ ಆಗಮಿಸಲಿದ್ದಾರೆ.
ಈ ಐತಿಹಾಸಿಕ ಭೇಟಿಯು ಮಹಂತ ಪ್ರೇಮ್ ದಾಸ್ ಅವರಿಗೆ ಒಂದು ರೀತಿಯಲ್ಲಿ ವೈಯಕ್ತಿಕ ಮೈಲಿಗಲ್ಲು ಕೂಡ ಹೌದು. ಅದರ ಜೊತೆಗೆ ಅಯೋಧ್ಯೆಯಲ್ಲಿ ಅನುಸರಿಸಿಕೊಂಡು ಬರಲಾದ ದೀರ್ಘಕಾಲದ ಧಾರ್ಮಿಕ ಪದ್ಧತಿಗೆ ನೀಡಿದ ಅಪರೂಪದ ಬದಲಾವಣೆಯನ್ನೂ ಇದು ಪ್ರತಿನಿಧಿಸುತ್ತದೆ.