ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾಗೆ ದಿನಗಣನೆ ಆರಂಭವಾಗಿದೆ. ಈ ಮಧ್ಯೆ ಅರಮನೆ ಮೈದಾನದ ಬಳಿ ಪಾರಿವಾಳಗಳಿಗೆ ಕಾಳು ಹಾಕುವುದಕ್ಕೆ ಬ್ರೇಕ್ ಹಾಕಲಾಗಿದೆ.
ಮೈಸೂರು ಅರಮನೆ (Mysuru Palace) ಮುಂಭಾಗದಲ್ಲಿ ಪಾರಿವಾಳಗಳಿಗೆ (Pigeon) ಕಾಳು ಹಾಕುವುದನ್ನು ನಿಲ್ಲಿಸಬೇಕೆಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ (Yaduveer Krishnadatta Chamaraja Wadiyar) ನೇತೃತ್ವದ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಆದರೆ, ಪಾರಿವಾಳಗಳಿಗೆ ಕಾಳು ಹಾಕುವುದರಿಂದ ದಸರಾ ಆನೆಗಳಿಗೆ (Dasara Elephants) ಸಂಕಷ್ಟ ಎದುರಾಗಿದೆ. ಅಲ್ಲದೇ, ಈಗ ಆಹಾರಕ್ಕೆ ಬ್ರೇಕ್ ಬಿದ್ದಿರುವುದರಿಂದಾಗಿ ಪಾರಿವಾಳಗಳು ಆನೆಗಳ ಆಹಾರಕ್ಕೆ ಮುಗಿ ಬಿದ್ದಿವೆ.
ಪಾರಿವಾಳಗಳಿಂದ ದಸರಾ ಗಜಪಡೆಗೆ ಕಿರಿ ಕಿರಿ ಉಂಟಾಗಿದೆ. ಆಹಾರಕ್ಕಾಗಿ ಪಾರಿವಾಳಗಳು ಆನೆಗಳ ಹಿಂದೆ ಮುಂದೆ ಸುತ್ತುತ್ತಿವೆ. ಆನೆಗಳು, ಮಾವುತರಿಗೆ ಪಾರಿವಾಳಗಳನ್ನು ಓಡಿಸುವುದೇ ತಲೆ ನೋವಾಗಿದೆ. ಇದರಿಂದಾಗಿ ಆನೆಗಳು ಕಿರಿಕಿರಿ ಅನುಭವಿಸುತ್ತಿವೆ. ಪಾರಿವಾಳಗಳನ್ನು ಓಡಿಸಿ ಮಾವುತ ಕಾವಾಡಿಗಳು ಹೈರಾಣಾಗುತ್ತಿದ್ದಾರೆ ಎಂದು ಸಮಿತಿ ಬೇಸರ ವ್ಯಕ್ತಪಡಿಸುತ್ತಿದೆ.
ಪಾರಿವಾಳಗಳ ಆಹಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡದೆ ದಿಢೀರ್ ಆಗಿ ಕಾಳು ಹಾಕುವುದನ್ನು ರದ್ದು ಮಾಡಲಾಗಿದೆ. ಪಾರಿವಾಳಗಳಿಗೆ ಪರ್ಯಾಯ ವ್ಯವಸ್ಥೆ ಮಾಡದಿದ್ದರೆ ಗಜಪಡೆಗೆ ಮತ್ತಷ್ಟು ಸಮಸ್ಯೆಯಾಗುವ ಸಾಧ್ಯತೆ ಇದೆ. ಪಾರಿವಾಳಗಳಿಂದ ಅಸ್ತಮ, ಅಲರ್ಜಿ, ಮಕ್ಕಳಿಗೆ ಸಮಸ್ಯೆ ಆಗುತ್ತದೆ. ಹೀಗಾಗಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕಿದೆ. ಚಾಮರಾಜ ಒಡೆಯರ್, ಅಂಬೇಡ್ಕರ್ ಪ್ರತಿಮೆಗಳಿಗೆ ಹಾನಿಯಾಗುತ್ತದೆ. ಪಾರಿವಾಳಗಳಿಗೆ ಕಾಳು ಹಾಕುವುದನ್ನು ನಿಲ್ಲಿಸುವುದಕ್ಕೆ ಕಾನೂನು ಆಗಬೇಕಿದೆ ಎಂದು ಹೇಳಿದ್ದಾರೆ.