ಬಾಲ್ಯ ವಿವಾಹ ಅನ್ನೋದು ಶಿಕ್ಷಾರ್ಹ ಅಪರಾಧ. ಬಾಲ್ಯ ವಿವಾಹಕ್ಕೆ ನಿಷೇಧ ಹೇರಿದ್ದರು ಕೂಡ ಆಗಾಗ ಬಾಲ್ಯ ವಿವಾಹ ಬೆಳಕಿಗೆ ಬರುತ್ತವೆ. ಇದೀಗ ಆರತಕ್ಷತೆ ವೇಳೆ ಅಧಿಕಾರಿಗಳು ದೌಡಾಯಿಸಿ ದಾಳಿ ಮಾಡಿ ಬಾಲ್ಯ ವಿವಾಹಕ್ಕೆ ಬ್ರೇಕ್ ಹಾಕಿದ್ದಾರೆ.
ವಿಜಯಪುರ ಪಟ್ಟಣದ ಚನ್ನಪ್ಪ ಸುಬ್ಬಮ್ಮ ಕಲ್ಯಾಣ ಮಂಟಪದಲ್ಲಿ 17 ವರ್ಷದ ಯುವತಿಗೆ ಪೋಷಕರು ಬಾಲ್ಯ ವಿವಾಹ ಮಾಡುತ್ತಿದ್ದರು. ಆಗ ಮಕ್ಕಳ ಸಹಾಯವಾಣಿ 1098 ಗೆ ಖಚಿತ ಮಾಹಿತಿ ಮೆರೆಗೆ ದೂರು ಬಂದ ಹಿನ್ನೆಲೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಅಧಿಕಾರಿಗಳು ದಾಳಿ ನಡೆಸಿ ಬಾಲ್ಯ ವಿವಾಹವನ್ನು ತಡೆದು, ಅಪ್ರಾಪ್ತ ಯುವತಿಯನ್ನು ಮಹಿಳಾ ಸಾಂತ್ವಾನ ಕೇಂದ್ರಕ್ಕೆ ಕರೆದೊಯ್ದಿದ್ದಾರೆ.
ಕಲ್ಯಾಣ ಮಂಟಪ ಮಾಲೀಕರಿಂದಲೂ ನಿಯಮ ಉಲ್ಲಂಘಿಸಿ ಬಾಲ್ಯ ವಿವಾಹಕ್ಕೆ ಕಲ್ಯಾಣ ಮಂಟಪ ನೀಡಿದ ಆರೋಪ ಕೇಳಿ ಬಂದಿದ್ದು, ಪೋಷಕರು, ವರ ಮತ್ತು ಕಲ್ಯಾಣ ಮಂಟಪ ಮಾಲೀಕರ ವಿರುದ್ದ ಅಧಿಕಾರಿಗಳು ದೂರು ನೀಡುವ ಸಾಧ್ಯತೆ ಇದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ವಿಜಯಪುರ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ವಿಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣೆ ದಾಖಲಾಗಿದೆ.