ಬೆಂಗಳೂರು: ವಾಟರ್ ಬೆಂಗಳೂರಿಗೆ ಬೋಟರ್ ಯೋಜನೆ ಜಾರಿಗೆ ತರಲು ಮುಂದಾಗಿರುವ ಬಿಬಿಎಂಪಿ ಹೊಸ ಇತಿಹಾಸ ಸೃಷ್ಟಿ ಮಾಡುತ್ತಿದೆ.
ಮಳೆಗಾಲ ಬಂತೆಂದರೆ ಸಾಕು ಬೆಂಗಳೂರಿಗರು ಮಳೆಯಲ್ಲಿ ಸಿಲುಕಿ ಬಿಡುತ್ತಾರೆ. ಮಳೆ ದಿಗ್ಬಂಧನ ಹಾಕಿ ಬಿಡುತ್ತದೆ. ಹೀಗಾಗಿ ಪಾಲಿಕೆ ಈ ಯೋಜನೆ ಜಾರಿಗೆ ತಂದಿದೆ. ಕಳೆದ ವಾರ ಸುರಿದ ಮುಂಗಾರು ಪೂರ್ವ ಮಳೆಗೆ ಇಡೀ ಬೆಂಗಳೂರಿನ ರಸ್ತೆಗಳು ನದಿಯಂತಾಗಿದ್ದವು. ಹಲವೆಡೆ ಮಳೆಯ ನೀರಿನಿಂದಾಗಿ ಜನರಿಗೆ ಹೊರಗೆ ಬಾರಲು ಆಗದೆ, ಮಳೆಯಲ್ಲೇ ಕುಳಿತುಕೊಳ್ಳುವಂತಾಗಿತ್ತು. ಸಾಯಿ ಲೇಔಟ್ ನಲ್ಲಿ ಮನೆಯಿಂದ ಸಾರ್ವಜನಿಕರನ್ನು ಹೊರ ತರಲು ಬೋಟ್ ಬಳಕೆ ಮಾಡಲಾಗಿತ್ತು. ಅಗ್ನಿಶಾಮಕ ದಳದ ಸಾಹಯದಿಂದ ಜನರನ್ನು ಮನೆಯಿಂದ ಹೊರ ತರಲು ಬೋಟ್ ವ್ಯವಸ್ಥೆ ಮಾಡಲಾಗಿತ್ತು. ಈಗ ಮಳೆಗಾಲದ ಸಂದರ್ಭದಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಬೋಟ್ ವ್ಯವಸ್ಥೆ ಮಾಡಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಬಿಬಿಎಂಪಿಯಿಂದ ಮಳೆಗಾಲಕ್ಕೆ ವಲಯವಾರು ಒಂದೊಂದು ಬೋಟ್ ಖರೀದಿಗೆ ಟೆಂಡರ್ ಕರೆಯಲಾಗಿದೆ. ಒಟ್ಟು 7 ಬೋಟ್ ಖರೀದಿಸಲು ಪಾಲಿಕೆ ನಿರ್ಧರಿಸಿದೆ. ಜೊತೆಗೆ ಲೈಪ್ ಜಾಕೆಟ್ ಕೂಡ ಖರೀದಿಸಲು ಬಿಬಿಎಂಪಿ ಟೆಂಡರ್ ಆಹ್ವಾನಿಸಿದೆ.
ಆದರೆ, ಪಾಲಿಕೆಯ ಈ ಯೋಜನೆಗೆ ಸಿಟಿ ಮಂದಿ ಫುಲ್ ಗರಂ ಆಗಿದ್ದಾರೆ. ಮೊದಲು ರಸ್ತೆ ಸರಿ ಮಾಡಿ, ರಾಜಕಾಲುವೆ ಹುಳು ಎತ್ತಿ. ನೀರು ಸರಾಗವಾಗಿ ಹರಿಯುವಂತೆ ಏನೆಲ್ಲ ಬೇಕೋ ಆ ಯೋಜನೆಗಳನ್ನು ಜಾರಿಗೆ ತನ್ನಿ. ಅದನ್ನು ಬಿಟ್ಟು ಬೋಟ್ ಖರೀದಿಸಲು ಮುಂದಾಗಿರುವುದು ಮುರ್ಖತನದ ಪರಮಾವಧಿ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.