ಬೆಂಗಳೂರು: ಯುಗಾದಿಗೂ ಮುನ್ನ ರಕ್ತ ಚಂದ್ರಗ್ರಹಣ ಮಂಗಳವಾರ (ಮಾ.3) ಗೋಚರಿಸಲಿದೆ. ಗ್ರಹಣದ 6 ಗಂಟೆ ಮುಂಚೆಯೇ ಸೂತಕದ ಛಾಯೆ ಆವರಿಸಲಿದೆ. ಹೀಗಾಗಿ ಅಂದು ಬೆಂಗಳೂರಿನ ವಿವಿಧ ದೇವಾಲಯಗಳಲ್ಲಿ ಪೂಜಾ, ದರ್ಶನದ ಸಮಯ ಬದಲಾಗಿದೆ.
ಗ್ರಹಣ ದಿನ ಯಾವ ದೇವಾಲಯದಲ್ಲಿ ಏನು ಕಾರ್ಯಕ್ರಮ?
ಬನಶಂಕರಿ ದೇಗುಲ
ಕೇತುಗ್ರಸ್ತ ಚಂದ್ರಗ್ರಹಣದ ಹಿನ್ನಲೆ ಬನಶಂಕರಿ ದೇಗುಲದಲ್ಲಿ ಪೂಜಾ, ದರ್ಶನದ ಸಮಯ ಬದಲಾಗಿದೆ. ಗ್ರಹಣದೋಷಕ್ಕೆ ಯಾವ್ದೇ ವಿಶೇಷ ಪೂಜೆಗಳು ಇರೋದಿಲ್ಲ. ಗ್ರಹಣ ಮುಗಿದ ಮೇಲೆ ಸಂಜೆ 7 ಘಂಟೆಯ ಬಳಿಕ ನಿತ್ಯ ಪೂಜೆ ನಡೆಯಲಿದೆ.
ಗವಿಗಂಗಾಧರೇಶ್ವರ ದೇವಸ್ಥಾನ
ಅಂದು ಬೆಂಗಳೂರಿನ ಗವಿಗಂಗಾಧರ ದೇಗುಲ ಬೆಳಗ್ಗೆ 9 ಗಂಟೆಗೆ ಬಂದ್ ಆಗಲಿದ್ದು, ಸಂಜೆ 7.45 ರ ಬಳಿಕವೇ ದೇಗುಲ ಒಪನ್ ಆಗಲಿದೆ. ಹೋಳಿ ಹುಣ್ಣಿಮೆಯಂದೇ ಗ್ರಹಣ ಇರುವುದರಿಂದ ಅಗ್ನಿ ಅವಘಡದಂತಹ ಭೀಕರ ಘಟನೆಗಳು ಸಂಭವಿಸಬಹುದು ಎಂದು ಗವಿಗಂಗಾಧರದ ಪ್ರಧಾನ ಅರ್ಚಕ ಸೋಮಸುಂದರ ದೀಕ್ಷಿತ ಅವರು ಮುನ್ಸೂಚನೆ
ಕಾಡುಮಲ್ಲೇಶ್ವರ ದೇವಸ್ಥಾನ
ಕಾಡು ಮಲ್ಲೇಶ್ವರ ದೇವಾಲಯದಲ್ಲಿ ಗ್ರಹಣ ಸಂಬಂಧ ಪೋಸ್ಟರ್ ಅಂಟಿಸಲಾಗಿದೆ. ಅಂದು ಮಧ್ಯಾಹ್ನ 3.10 ರಿಂದ 6.47 ಚಂದ್ರಗ್ರಹಣ ಹಿನ್ನೆಲೆ ಬೆಳಗ್ಗೆ 11 ಗಂಟೆಗೆ ದೇವಾಲಯದ ಬಾಗಿಲು ಮುಚ್ಚಲಾಗುವುದು. ರಾತ್ರಿ 7.30ಕ್ಕೆ ದೇವಾಲಯದ ಬಾಗಿಲು ತೆರೆಯಲಾಗುತ್ತೆ. ಕೆಲ ನಿರ್ಧಿಷ್ಟ ರಾಶಿಯವರು ಗ್ರಹಣದ ಬಳಿಕ ಶಾಂತಿ ಹೋಮ ಮಾಡಿಸಬೇಕೆಂದು ಪೋಸ್ಟರ್ನಲ್ಲಿ ತಿಳಿಸಿದ್ದಾರೆ. ಅದಕ್ಕೆಂದೇ ಗ್ರಹಣದ ಮರುದಿನ ಕಾಡು ಮಲ್ಲೇಶ್ವರ ದೇವಾಲಯದಲ್ಲಿ ನವಗ್ರಹ ಶಾಂತಿ ಹೋಮ ನಡೆಯಲಿದೆ. ಆ ದಿನ ಅಕ್ಕಿ, ಹುರುಳಿಕಾಳು ದಾನ ನೀಡುವಂತೆ ಭಕ್ತರಿಗೆ ತಿಳಿಸಿದ್ದಾರೆ.ನೀಡಿದ್ದಾರೆ. ಇನ್ನೂ, ದೇಗುಲದಲ್ಲಿ ಲೋಕಕಲ್ಯಾಣಕ್ಕಾಗಿ ಮಾರ್ಚ್ 4 ರಂದು ಗ್ರಹಣ ಶಾಂತಿ ಹೋಮ ನಡೆಸಲು ಸಿದ್ಧತೆಗಳನ್ನ ಮಾಡಿಕೊಳ್ಳಲಾಗಿದೆ.
ದೊಡ್ಡ ಗಣಪತಿ ದೇವಸ್ಥಾನ
ಬೆಂಗಳೂರಿನ ಐತಿಹಾಸಿಕ ಪ್ರಸಿದ್ಧ ದೊಡ್ಡ ಗಣೇಶ ದೇಗುಲದಲ್ಲಿಯೂ ಮಂಗಳವಾರ ದೇವರ ದರ್ಶನದಲ್ಲಿ ಸಮಯ ಬದಲಾವಣೆ ಆಗಿರಲಿದೆ. ಗ್ರಹಣ ಪ್ರಯುಕ್ತ ದೇವರ ದರ್ಶನದ ಸಮಯ ಬದಲಾವಣೆ ಮಾಡಲಾಗಿದೆ. ಸಂಜೆ 5.30 ರ ಬದಲಾಗಿ ಗ್ರಹಣ ಮೋಕ್ಷವಾದ ಬಳಿಕ 7.45ಕ್ಕೆ ದೇವಸ್ಥಾನ ಭಕ್ತರಿಗಾಗಿ ಒಪನ್ ಆಗಲಿದೆ.
ಬಂಡೆ ಮಹಾಕಾಳಿ
ಕೇತುಗ್ರಸ್ತ ಚಂದ್ರಗ್ರಹಣ ದಿನದಂದು ಪ್ರಸಿದ್ಧ ದೇಗುಲ ಬಂಡೆ ಮಹಾಕಾಳಿ ದೇವಸ್ಥಾನ ಓಪನ್ ಇರಲಿದೆ. ಗ್ರಹಣ ಪ್ರಾರಂಭದ ಸಮಯಕ್ಕೆ ವಿಶೇಷ ಹೋಮ, ಪೂಜೆ ನಡೆಯಲಿದೆ. ಬಂಡೆ ಮಹಾಕಾಳಿ ದೇಗುಲದಲ್ಲಿ ಹಿಂದಿನಿಂದಲೂ ಈ ಪದ್ಧತಿ ನಡೆಸಿಕೊಂಡು ಬಂದಿದ್ದೇವೆ. ಹೀಗಾಗಿ ಭಕ್ತರು ಕೂಡ ಚಂದ್ರಶಾಂತಿ ಹೋಮದಲ್ಲಿ ಭಾಗಿಯಾಗಬಹುದು. ಯಾರಿಗೂ ಬಲವಂತವಿಲ್ಲ ಎಂದು ದೇವಸ್ಥಾನ ಮಂಡಳಿ ಕಾರ್ಯದರ್ಶಿ ಶಶಿಕುಮಾರ್ ತಿಳಿಸಿದ್ದಾರೆ. ದೇವಿ ದರ್ಶನಕ್ಕೆ ಭಕ್ತಾಧಿಗಳಿಗೆ ಮುಕ್ತ ಅವಕಾಶವಿದೆ. ಗ್ರಹಣ ಸಂದರ್ಭದಲ್ಲಿ ಬಂಡೆಮಹಾಕಾಳಿ ತಾಯಿಗೆ ತುಪ್ಪದಿಂದ ಲೇಪನ ಮಾಡಲಾಗುತ್ತೆ. ಮರುದಿನ ಕುಂಭಸ್ನಾನ ಮಾಡಲಾಗುತ್ತೆ ಎಂದರು.



















