ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ಮುಂಭಾಗದಲ್ಲಿ ಕಾಲ್ತುಳಿತಕ್ಕೆ 11 ಮಂದಿ ಕೊನೆಯುಸಿರೆಳೆದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ವಿಶೇಷ ಅಧಿವೇಶನ ಕರೆಯುವಂತೆ ಬಿಜೆಪಿ ಒತ್ತಾಯ ಮಾಡುತ್ತಿದೆ.
ರಾಜ್ಯ ಸರ್ಕಾರಕ್ಕೆ ವಿಶೇಷ ಅಧಿವೇಶನ ಕರೆಯುವಂತೆ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಒತ್ತಾಯಿಸಲಿದ್ದಾರೆ. ರಾಜ್ಯದಲ್ಲಿ ಘೋರ ದುರಂತವೊಂದು ನಡೆದಿದೆ. ಸರ್ಕಾರ ಸಂಭ್ರಮಾಚರಣೆಯ ನೆಪದಲ್ಲಿ ಎಲ್ಲರನ್ನೂ ಆಹ್ವಾನಿಸಿದೆ. ಖುದ್ದು ಮುಖ್ಯಮಂತ್ರಿ ಸಿದ್ಧರಾಮಯ್ಯನವರೇ ಆಹ್ವಾನ ಕೊಟ್ಟು, ಈಗ ಪ್ರಕರಣದಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಪ್ರಕರಣದ ಬಗ್ಗೆ ರಾಜ್ಯದ ಜನತೆಗೆ ಇಂಚಿಂಚೂ ಮಾಹಿತಿ ನೀಡಬೇಕು. ಬಲ ವಿಪಕ್ಷವಾಗಿ ನಾವು ವಿಶೇಷ ಅಧಿವೇಶನ ಕರೆಯುವಂತೆ ಒತ್ತಾಯಿಸುತ್ತಿದ್ದೇವೆ. ಸರ್ಕಾರ ಇದಕ್ಕೆ ಮನ್ನಣೆ ನೀಡಲೇಬೇಕು. ವಿಶೇಷ ಅಧಿವೇಶನ ಕರೆದು ಪ್ರಕರಣದ ಬಗ್ಗೆ ಎಲ್ಲಾ ಮಾಹಿತಿಯನ್ನು ಒದಗಿಸಬೇಕು ಎಂದು ಬಿಜೆಪಿ ಆಗ್ರಹಿಸುತ್ತಿದೆ.
ಸಂಭ್ರಮಾಚರಣೆ ತರಾತುರಿಯಲ್ಲಿ ಮಾಡಿದ್ದೇಕೆ? ಆಟಗಾರರಿಗೆ ವಿಶೇಷ ವಿಮಾನ ಏರ್ಪಾಟು ಮಾಡಿದವರು ಯಾರು? ವಿಧಾನಸೌಧದ ಆವರಣದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದವರು ಯಾರು? ಘಟನೆಯ ಬಳಿಕ ಮುಖ್ಯಮಂತ್ರಿಗಳು ಇದು ಸರ್ಕಾರದ ಕಾರ್ಯಕ್ರಮ ಅಲ್ಲ ಎಂದಿದ್ದೇಕೆ? ಸರ್ಕಾರದಲ್ಲಿರುವ ರಾಜಕಾರಣಿಗಳ ಮಕ್ಕಳು, ಮೊಮ್ಮಕ್ಕಳು, ಅಳಿಯಂದಿರು, ಸೊಸೆಯರು ವಿಧಾನಸೌಧದ ಆವರಣ ಪ್ರವೇಶಿಸಿದ್ದೇಕೆ? ಹೇಗೆ? ಅವರಿಗೆಲ್ಲಾ ಸೂಕ್ತ ಭದ್ರತೆ ಕೊಟ್ಟ ಸರ್ಕಾರ, ಅಮಾಯಕ 11 ಮಂದಿ ಕೊಲೆಗೈದಿದೆ. ಇದಕ್ಕೆಲ್ಲಾ ಸರಿಯಾದ ಉತ್ತರವನ್ನು ಸರ್ಕಾರ ನೀಡಬೇಕು. ಈ ನಿಟ್ಟಿನಲ್ಲಿ ವಿಶೇಷ ಅಧಿವೇಶನ ಕರೆಯಬೇಕೆಂದು ಆರ್. ಅಶೋಕ್ ಒತ್ತಾಯಿಸಲಿದ್ದಾರೆಂಬ ಮಾಹಿತಿ “ಕರ್ನಾಟಕ ನ್ಯೂಸ್ ಬೀಟ್” ಗೆ ಆರ್. ಅಶೋಕ್ರಿಂದಲೇ ಲಭ್ಯವಾಗಿದೆ. .