ಬಾಂಬ್ ಸ್ಫೋಟದ ಸಂಚನ್ನು ಪೊಲೀಸರು ವಿಫಲಗೊಳಿಸಿದ್ದಾರೆ. ಆಂಧ್ರ ಪ್ರದೇಶ ಹಾಗೂ ತೆಲಂಗಾಣ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಇಬ್ಬರು ಶಂಕಿತ ಐಸಿಸ್ ಉಗ್ರರನ್ನು ಬಂಧಿಸಿದ್ದಾರೆ. ವಿಜಯನಗರಂ ನಿವಾಸಿ ಸಿರಾಜ್ ಮತ್ತು ಹೈದರಾಬಾದ್ ನಿವಾಸಿ ಸಮೀರ್ ಎಂಬವರನ್ನು ಬಂಧಿಸಲಾಗಿದ್ದು, ಇವರು ನಗರದಲ್ಲಿ ಡಮ್ಮಿ ಸ್ಫೋಟ ನಡೆಸಲು ಸಜ್ಜಾಗಿದ್ದರು ಎಂದು ಮೂಲಗಳು ತಿಳಿಸಿವೆ.
ಈ ಸಂಚಿನ ಭಾಗವಾಗಿ ಸಿರಾಜ್ ವಿಜಯನಗರಂನಿಂದ ಸ್ಫೋಟಕಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದ. ಸೌದಿ ಅರೇಬಿಯಾದಲ್ಲಿರುವ ಐಸಿಸ್ ಹ್ಯಾಂಡ್ಲರ್ ಗಳು ಇವರಿಬ್ಬರಿಗೂ ಸೂಕ್ತ ನಿರ್ದೇಶನಗಳನ್ನು ನೀಡುತ್ತಿದ್ದರು. ಹೈದರಾಬಾದ್ನಲ್ಲಿ ದಾಳಿ ನಡೆಸಲು ಸೂಚನೆಯನ್ನೂ ಇವರೇ ನೀಡಿದ್ದರು. ಅವರ ಸೂಚನೆಯಂತೆ ಸಿರಾಜ್ ಮತ್ತು ಸಮೀರ್ ಕಾರ್ಯನಿರ್ವಹಿಸುತ್ತಿದ್ದರು. ಇಬ್ಬರನ್ನೂ ಈಗ ವಶಕ್ಕೆ ಪಡೆಯಲಾಗಿದೆ.
ಇತ್ತೀಚೆಗೆ ನಡೆದಿದ್ದ ಪಹಲ್ಗಾಮ್ ಉಗ್ರರ ದಾಳಿಯ ನಂತರ ಭದ್ರತಾ ಪಡೆಗಳು ಕೇವಲ ಜಮ್ಮು ಕಾಶ್ಮೀರ ಮಾತ್ರವಲ್ಲದೇ ಹಲವು ರಾಜ್ಯಗಳಲ್ಲಿ ವ್ಯಾಪಕ ಶೋಧ ಕಾರ್ಯ ನಡೆಸುತ್ತಿದ್ದಾರೆ. ಉಗ್ರರ ಉಪಸ್ಥಿತಿಯ ಬಗ್ಗೆ ಗುಪ್ತಚರ ವರದಿ ಆಧರಿಸಿ ಕ್ರಮ ಕೈಗೊಳ್ಳುತ್ತಿದ್ದಾರೆ.
ಶುಕ್ರವಾರವಷ್ಟೇ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಪಾಕಿಸ್ತಾನಿ ಮೂಲದ ಖಲಿಸ್ತಾನಿ ಉಗ್ರ ಹರ್ವಿಂದ್ ಸಿಂಗ್ ಅಲಿಯಾಸ್ ರಿಂಡಾನೊಂದಿಗೆ ಸಂಪರ್ಕ ಹೊಂದಿರುವ ಗ್ಯಾಂಗ್ ಸ್ಟರ್ ಹ್ಯಾಪಿ ಪಾಸ್ಸಿಯನ್ ಗೆ ಸೇರಿರುವ ಪಂಜಾಬ್ನ 15 ಸ್ಥಳಗಳ ಮೇಲೆ ದಾಳಿ ನಡೆಸಿತ್ತು. ಕಳೆದ ವರ್ಷ ಡಿಸೆಂಬರ್ನಲ್ಲಿ ಗುರುದಾಸ್ಪುರದ ಪೊಲೀಸ್ ಠಾಣೆ ಮೇಲೆ ನಡೆದ ಗ್ರೆನೇಡ್ ದಾಳಿಯಲ್ಲಿ ರಿಂಡಾನ ಪಾತ್ರವಿತ್ತು.