ಚಿಕ್ಕಬಳ್ಳಾಪುರ: 8ನೇ ತರಗತಿ ಓದಿದ್ದ ಕ್ರಿಮಿನಲ್ ಕಿಲಾಡಿಯೊಬ್ಬ ಹಿರಿಯ ಅಧಿಕಾರಿಗೆ ಬ್ಲ್ಯಾಕ್ ಮೇಲ್ ಮಾಡಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
ಲೋಕಾಯುಕ್ತ ಅಧಿಕಾರಿ (Lokayukta Officer) ಎಂದು ಹೇಳಿಕೊಂಡು ಮಹಿಳಾ ಅಧಿಕಾರಿಯನ್ನೇ ಬ್ಲ್ಯಾಕ್ ಮೇಲ್ ಮಾಡಿದ್ದಾನೆ. ಈಗ ಪೊಲೀಸರ (Chikkaballapura Police) ಅತಿಥಿಯಾಗಿಯಾಗಿದ್ದಾನೆ. ಚನ್ನಕೇಶವ ರೆಡ್ಡಿ (24) ಬಂದಿತ ಆರೋಪಿ. ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆಯ ಚಿರುವುಮುನೆಪ್ಪಗಾರಿಪಲ್ಲಿಯ ನಿವಾಸಿಯಾಗಿರುವ ಈತ, ಗೌರಿಬಿದನೂರು ನಗರಸಭೆಯ ಪೌರಾಯುಕ್ತೆ ಗೀತಾ ಮೊಬೈಲ್ ನಂಬರ್ ಗೆ ಕರೆ ಮಾಡಿ, ನಾನು ಬೆಂಗಳೂರು ಲೋಕಾಯುಕ್ತ ಸಂಸ್ಥೆಯ ಅಧಿಕಾರಿ. ನಿಮ್ಮ ನಗರಸಭೆಯಲ್ಲಿ ಲಕ್ಷಾಂತರ ರೂಪಾಯಿ ಅವ್ಯವಹಾರ ಮಾಡಿದ್ದೀರಿ. ನಿಮ್ಮ ಮೇಲೆ ಲೋಕಾಯುಕ್ತ ಕೇಂದ್ರ ಕಚೇರಿಗೆ ದೂರು ಬಂದಿದೆ. ನಿಮ್ಮ ಕಚೇರಿ ಮೇಲೆ ದಾಳಿ ಮಾಡುತ್ತೇವೆ ಎಂದು ಹೆದರಿಸಿದ್ದಾನೆ. ಒಂದು ವೇಳೆ ರೇಡ್ ಮಾಡಬಾರದು ಅಂದರೆ, ನಾವು ಹೇಳಿದಷ್ಟು ದುಡ್ಡನ್ನು ಅರ್ಧ ಗಂಟೆಯಲ್ಲಿ ಕೊಡಬೇಕು ಅಂತಾ ಹೆದರಿಸಿದ್ದಾನೆ.
ವಂಚಕನ ಮಾತುಗಳಿಗೆ ಹೆದರದ ಪೌರಾಯುಕ್ತೆ ಗೀತಾ ಚಿಕ್ಕಬಳ್ಳಾಪುರ ಲೋಕಾಯುಕ್ತ ಸಂಸ್ಥೆಯ ಎಸ್ಪಿಯೊಂದಿಗೆ ಮಾತನಾಡಿ, ಗೌರಿಬಿದನೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ಕೈಗೊಂಡ ಪೊಲೀಸರು 10 ತಿಂಗಳ ನಂತರ ಆರೋಪಿಯನ್ನು ಬಂಧಿಸಿದ್ದಾರೆ.
ಈ ಕಿಲಾಡಿಗಳು ಯಾರದ್ದೋ ಹೆಸರಿನಲ್ಲಿ ಸಿಮ್ ಕಾರ್ಡ್ ಪಡೆದು ಅಧಿಕಾರಿಗಳನ್ನು ಹೆದರಿಸುತ್ತಿದ್ದ ಎಂಬುವುದು ತನಿಖೆಯಿಂದ ತಿಳಿದು ಬಂದಿದೆ.