ಬೆಂಗಳೂರು: ರಾಜ್ಯ ಬಿಜೆಪಿಯ ಫೈರ್ ಬ್ರ್ಯಾಂಡ್ ನಾಯಕ ಅಂದರೆ ಅದು ಬಸನಗೌಡ ಪಾಟೀಲ್ ಯತ್ನಾಳ್. ತಮ್ಮ ಹರಿತ ಮಾತುಗಳಿಂದಲೇ ಚಿರಪರಿಚಿತರಾಗಿರುವ ನಾಯಕ ಇವತ್ತು ಸ್ವಪಕ್ಷದಿಂದಲೇ ಉಚ್ಛಾಟನೆಗೊಳಗಾಗಿದ್ದಾರೆ. ಯಡಿಯೂರಪ್ಪ ಮತ್ತು ಪುತ್ರ ವಿಜಯೇಂದ್ರ ವಿರುದ್ಧ ಬಂಡಾಯ ಸಾರಿರುವ ಯತ್ನಾಳ್, ಪುಂಖಾನುಪುಂಖವಾಗಿಯೇ ವಾಗ್ದಾಳಿ ನಡೆಸಿದ್ದರು.
ಅದರಲ್ಲೂ ವಿಜಯೇಂದ್ರ ಪಕ್ಷಾಧ್ಯಕ್ಷರಾಗುತ್ತಿದ್ದಂತೆ ಇನ್ನುಂದೆ ಹೆಜ್ಜೆ ಮುಂದೆ ಹೋಗಿದ್ದ ಯತ್ನಾಳ್, ಅಪ್ಪ-ಮಕ್ಕಳ ಪಕ್ಷ ಎನ್ನುವ ಮೂಲಕ ತಮ್ಮ ಸಮರ ಮುಂದುವರಿಸಿದ್ದರು. ಭ್ರಷ್ಟಾಚಾರ, ಕುಟುಂಬ ರಾಜಕಾರಣ.. ಹೀಗೆ ಸಾಲು ಸಾಲ ಆರೋಪಗಳನ್ನ ಯತ್ನಾಳ್ ಮಾಡುತ್ತಲೇ ಸಾಗಿದ್ದರು. ನಿಜಕ್ಕೂ ಪಕ್ಷದ ವರಿಷ್ಠರಿಗೇ ತಲೆ ನೋವಾಗಿದ್ದ ಯತ್ನಾಳ್ ವಿರುದ್ಧ ಶಿಸ್ತು ಕ್ರಮಕ್ಕೆ ವರ್ಷ ಕಾದು ಕಡೆಗೂ ಉಚ್ಛಾಟನೆ ಕ್ರಮ ಕೈಗೊಂಡಿದ್ದಾರೆ.
ಅರವಿಂದ್ ಬೆಲ್ಲದ್ ಗೆ ಜೆಪಿ ನಡ್ಡಾ ಬಿಗ್ ಟಾಸ್ಕ್!
ಹಾಗೆ ನೋಡಿದರೆ ರಾಜ್ಯ ಬಿಜೆಪಿಗೆ ಮೊದಲಿನಿಂದಲೂ ಲಿಂಗಾಯತರು ಬೆನ್ನೆಲುಬಾಗಿ ನಿಂತಿದ್ದಾರೆ. ಯಡಿಯೂರಪ್ಪ ಅವರನ್ನು ಸಮುದಾಯದ ಸರ್ವೋಚ್ಛ ನಾಯಕ ಅಂತಲೇ ಈ ಸಮುದಾಯ ತನ್ನ ಬೆಂಬಲ ಸೂಚಿಸುತ್ತಾ ಬಂದಿದೆ. ಅದರಲ್ಲೂ ಪಂಚಮಸಾಲಿ ಸಮುದಾಯ ಬಿಜೆಪಿ ಪಾಲಿಗೆ ಹಾಟ್ ಫೇವರೇಟ್. ಇಂತಹ ಸಮುದಾಯದ ಪ್ರತಿನಿಧಿಯೇ ಬಸನಗೌಡ ಪಾಟೀಲ್ ಯತ್ನಾಳ್.
ಆದರೀಗ ಯತ್ನಾಳ್ ರನ್ನು ಪಕ್ಷದಿಂದ ಹೊರ ಹಾಕಿದ್ದು ಪಂಚಮಸಾಲಿ ಸಮುದಾಯದ ಕೆಂಗಣ್ಣಿಗೆ ಗುರಿಯಾಗುತ್ತದೆಯೇ? ಎನ್ನುವುದು ಪಕ್ಷದ ವರಿಷ್ಠರಿಗೆ ಚಿಂತೆಯಾಗಿದೆ. ಹೀಗಾಗಿಯೇ ಅಖಾಡಕ್ಕೆ ಧುಮುಕಿರುವ ಜೆಪಿ ನಡ್ಡಾ, ಯತ್ನಾಳ್ ಗೆ ಪರ್ಯಾಯ ನಾಯಕನ ಬೆಳೆಸಲು ನಿರ್ಧರಿಸಿದ್ದಾರೆ. ಮೊದಲ ಹೆಜ್ಜೆಯಾಗಿ ದಿಢೀರ್ ಅರವಿಂದ್ ಬೆಲ್ಲದ್ ಗೆ ದೆಹಲಿಗೆ ಕರೆಸಿಕೊಂಡು ಚರ್ಚೆ ನಡೆಸಿದ್ದಾರೆ.
2ಎ ಮೀಸಲಾತಿ ಬೆನ್ನಲ್ಲೇ ಯತ್ನಾಳ್ ಅಸ್ತ್ರ!
ಈಗಾಗಲೇ ಕೂಡಲಸಂಗಮದ ಜಯಮೃತ್ಯುಂಜಯ ಶ್ರೀಗಳ ಸಾರಥ್ಯದಲ್ಲಿ ಪಂಚಮಸಾಲಿ ಸಮುದಾಯ 2ಎ ಮೀಸಲಾತಿಗೆ ಹೋರಾಟ ನಡೆಸುತ್ತಿದೆ. ಇದರ ಬೆನ್ನಲ್ಲೇ ಯತ್ನಾಳ್ ರನ್ನ ಹೊರ ಹಾಕಿದ್ದು ಕೂಡ ಈ ಸಮುದಾಯ ಕಣ್ಣು ಕೆಂಪಗಾಗಿಸಿದೆ. ಖುದ್ದು ಜಯಮೃತ್ಯುಂಜಯ ಶ್ರೀಗಳೇ ಯತ್ನಾಳ್ ಉಚ್ಛಾಟನೆಯನ್ನು ಕಠೋರವಾಗಿ ಖಂಡಿಸಿದ್ದಾರೆ. ಸರಿಸುಮಾರು 1 ಕೋಟಿಯಷ್ಟಿರುವ ಈ ಸಮುದಾಯದ ಶಕ್ತಿಯನ್ನು ಪಕ್ಷದಿಂದ ದೂರ ಮಾಡಿಕೊಳ್ಳೋ ಮನಸ್ಸು ದೆಹಲಿ ನಾಯಕರಿಗಿಲ್ಲ. ಉತ್ತರ ಕರ್ನಾಟಕದ ಪ್ರಬಲ ಸಮುದಾಯ ಪಕ್ಷದಿಂದ ದೂರವಾದರೆ, ತಪ್ಪು ಸಂದೇಶ ರವಾನೆಯಾಗುತ್ತದೆ ಎಂಬ ಆತಂಕವಿದೆ. ಹೀಗಾಗಿಯೇ ಪಂಚಮಸಾಲಿ ಸಮುದಾಯದ ಪರ್ಯಾಯ ನಾಯಕನನ್ನು ಬೆಳೆಸುವ ಅನಿವಾರ್ಯತೆ ಇದೆ.
ಹುಬ್ಬಳ್ಳಿ- ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ನಾಯಕ ಅರವಿಂದ್ ಬೆಲ್ಲದ್ ರನ್ನು ದೆಹಲಿಗೆ ಕರೆಸಿಕೊಂಡು ನಡ್ಡಾ ಸಮಾಲೋಚನೆ ನಡೆಸಿದ್ದಾರೆ. ಇದೇ ವೇಳೆ, ಹೊಸಟಾಸ್ಕ್ ಕೂಡಾ ನೀಡಿದ್ದಾರೆ. ಸಮುದಾಯದ ನಾಯಕರ ಸಿಟ್ಟು ಶಮನ ಮಾಡುವುದಲ್ಲದೆ, ಪಕ್ಷ ತಮ್ಮ ಪರವಾಗಿದೆ ಅನ್ನೋ ಭರವಸೆ ಮೂಡಿಸುವ ಹೊಣೆಗಾರಿಕೆಯನ್ನು ನೀಡಿದ್ದಾರೆ. ಹೀಗಾಗಿ ಅರವಿಂದ್ ಬೆಲ್ಲದ್ ಗೀಗ ಹೊಸ ಜವಾಬ್ದಾರಿ ಹೆಗಲೇರಿದ್ದು, ಅವರು ಅದನ್ನು ಹೇಗೆ ನಿಭಾಯಿಸ್ತಾರೆ? ಮತ್ತು ಒಂದಿಡೀ ಸಮುದಾಯವನ್ನು ಹೇಗೆ ತಮ್ಮೊಟ್ಟಿಗೆ ಕರೆದುಕೊಂಡು ಸಾಗುತ್ತಾರೆ ಎನ್ನುವುದು ದೊಡ್ಡ ಪ್ರಶ್ನೆಯಾಗಿದೆ.