ನವದೆಹಲಿ: ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಪರಂಪರೆಯನ್ನು ಅಳಿಸಿಹಾಕುವುದು ಮಾತ್ರವಲ್ಲ, ದೇಶದ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಬುನಾದಿಯನ್ನೇ ನಾಶಪಡಿಸುವುದು ಆಡಳಿತಾರೂಢ ಬಿಜೆಪಿಯ ಮುಖ್ಯ ಉದ್ದೇಶವಾಗಿದೆ ಎಂದು ಕಾಂಗ್ರೆಸ್ ಸಂಸದೆ ಸೋನಿಯಾ ಗಾಂಧಿ ಅವರು ಗಂಭೀರ ಆರೋಪ ಮಾಡಿದ್ದಾರೆ. ದೆಹಲಿಯ ಜವಾಹರ್ ಭವನದಲ್ಲಿ ಶುಕ್ರವಾರ ನಡೆದ ‘ನೆಹರೂ ಸೆಂಟರ್ ಇಂಡಿಯಾ’ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ನೆಹರೂ ಅವರನ್ನು ಅವಮಾನಿಸಲು ಮತ್ತು ಅವರ ವ್ಯಕ್ತಿತ್ವಕ್ಕೆ ಕಳಂಕ ತರಲು ವ್ಯವಸ್ಥಿತ ಸಂಚು ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಶ್ಲೇಷಣೆ ಸ್ವಾಗತಾರ್ಹ, ಆದರೆ ದುರುದ್ದೇಶಪೂರಿತ ದಾಳಿ ಸಲ್ಲದು:
ನೆಹರೂ ಅವರ ಕೊಡುಗೆಗಳ ಬಗ್ಗೆ ವಿಶ್ಲೇಷಣೆ ಮತ್ತು ಟೀಕೆಗಳನ್ನು ಸ್ವಾಗತಿಸುತ್ತೇವೆ. ಆದರೆ, ಇತಿಹಾಸವನ್ನು ತಿರುಚುವ, ಅವರ ಮಾತುಗಳನ್ನು ತಪ್ಪಾಗಿ ಬಿಂಬಿಸುವ ಮತ್ತು ದುರುದ್ದೇಶಪೂರಿತವಾಗಿ ಅವರನ್ನು ನಿಂದಿಸುವ ಪ್ರಯತ್ನಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದು ಸೋನಿಯಾ ಗಾಂಧಿ ಕಟುವಾಗಿ ನುಡಿದರು. ಆಡಳಿತಾರೂಢ ಪಕ್ಷದವರು (ಬಿಜೆಪಿ) ನೆಹರೂ ಅವರನ್ನು ಗುರಿಯಾಗಿಸಿಕೊಂಡು ಅವರ ಬಹುಮುಖಿ ವ್ಯಕ್ತಿತ್ವವನ್ನು ಕೀಳಾಗಿ ತೋರಿಸಲು ‘ಯೋಜನೆ’ ಹಾಕಿಕೊಂಡಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಅಥವಾ ಸಂವಿಧಾನ ರಚನೆಯಲ್ಲಿ ಯಾವುದೇ ಪಾತ್ರವಿಲ್ಲದವರು ಇಂದು ಇತಿಹಾಸವನ್ನು ತಿರುಚಲು ಹೊರಟಿದ್ದಾರೆ ಎಂದು ಅವರು ಪರೋಕ್ಷವಾಗಿ ಬಿಜೆಪಿ ಮತ್ತು ಆರ್ಎಸ್ಎಸ್ ವಿರುದ್ಧ ಹರಿಹಾಯ್ದರು.
ಮಹಾತ್ಮ ಗಾಂಧಿ ಹತ್ಯೆಯ ಸಿದ್ಧಾಂತದ ಪ್ರಸ್ತಾಪ:
ತಮ್ಮ ಭಾಷಣದಲ್ಲಿ ಮಹಾತ್ಮ ಗಾಂಧಿಯವರ ಹತ್ಯೆಯ ಬಗ್ಗೆಯೂ ಪ್ರಸ್ತಾಪಿಸಿದ ಸೋನಿಯಾ, “ಯಾವ ಸಿದ್ಧಾಂತವು ದ್ವೇಷದ ವಾತಾವರಣವನ್ನು ಸೃಷ್ಟಿಸಿ ಗಾಂಧೀಜಿಯವರ ಹತ್ಯೆಗೆ ಕಾರಣವಾಯಿತೋ, ಅದೇ ಸಿದ್ಧಾಂತದ ಅನುಯಾಯಿಗಳು ಇಂದು ಹಂತಕರನ್ನು ವೈಭವೀಕರಿಸುತ್ತಿದ್ದಾರೆ. ಇದು ಕೋಮು ದ್ವೇಷ ಮತ್ತು ಸಂಕುಚಿತ ಮನೋಭಾವದ ಸಿದ್ಧಾಂತ,” ಎಂದು ಕಿಡಿಕಾರಿದರು.
ಇತ್ತೀಚೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, “ನೆಹರೂ ಅವರು ಬಾಬರಿ ಮಸೀದಿಯನ್ನು ಸಾರ್ವಜನಿಕ ಹಣದಲ್ಲಿ ಪುನರ್ನಿರ್ಮಿಸಲು ಬಯಸಿದ್ದರು, ಆದರೆ ಸರ್ದಾರ್ ಪಟೇಲ್ ಅದನ್ನು ತಡೆದರು,” ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ರಾಜಕೀಯ ವಲಯದಲ್ಲಿ ದೊಡ್ಡ ವಿವಾದವನ್ನೇ ಹುಟ್ಟುಹಾಕಿತ್ತು. ಈ ಹಿನ್ನೆಲೆಯಲ್ಲಿ ಸೋನಿಯಾ ಗಾಂಧಿ ಅವರ ಇಂದಿನ ಹೇಳಿಕೆ ಮಹತ್ವ ಪಡೆದುಕೊಂಡಿದೆ. ನೆಹರೂ ವಿರುದ್ಧದ ಈ ವ್ಯವಸ್ಥಿತ ಅಭಿಯಾನವನ್ನು ಎದುರಿಸುವುದು ಸುಲಭವಲ್ಲದಿದ್ದರೂ, ನಮಗೆ ಬೇರೆ ದಾರಿಯಿಲ್ಲ, ನಾವು ಎದ್ದು ನಿಲ್ಲಲೇಬೇಕು ಎಂದು ಅವರು ಕರೆ ನೀಡಿದರು.
ಇದನ್ನೂ ಓದಿ: ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡ ಮೇಲೆ ಹೆಚ್ಡಿಕೆ ಮನುವಾದಿ ಆಗಿದ್ದಾರೆ | ಸಿಎಂ ವಾಗ್ದಾಳಿ



















