ರಾಯಚೂರು: ಹಿಂದುಳಿದ ಸಮುದಾಯದ ವ್ಯಕ್ತಿ, ಕುರಿ ಕಾಯುತ್ತಿದ್ದವನು 2 ಬಾರಿ ಸಿಎಂ ಆದನಲ್ಲಾ ಎಂದು ಬಿಜೆಪಿಗೆ (BJP) ಹೊಟ್ಟೆ ಉರಿಯುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಕಿಡಿಕಾರಿದ್ದಾರೆ.
ರಾಯಚೂರಿನ (Raichur) ಮಾನ್ವಿಯಲ್ಲಿ ನಡೆದ ಕಾಂಗ್ರೆಸ್ ʻಸ್ವಾಭಿಮಾನಿʼ ಸಮಾವೇಶ ಉದ್ಧೇಶಿಸಿ ಮಾತನಾಡಿದ ಅವರು, ವಿರೋಧ ಪಕ್ಷದವರು ಸುಮ್ ಸುಮ್ಮನೆ ಟೀಕೆ ಮಾಡುತ್ತಿದ್ದಾರೆ. ಗ್ಯಾರಂಟಿ ಕೊಟ್ಟ ಮೇಲೆ ಖಜಾನೆ ಖಾಲಿಯಾಗಿದೆ ಎಂದು ಹೇಳುತ್ತಿದ್ದಾರೆ. ಇದು ಎಂತ ಹಸಿ ಸುಳ್ಳು. ಖಜಾನೆ ಖಾಲಿಯಾಗಿದ್ದರೆ, ಇಲ್ಲಿ ಕೋಟ್ಯಂತರ ರೂಪಾಯಿ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಲು ಆಗುತ್ತಿಲ್ಲ ಎಂದು ಹೇಳಿದ್ದಾರೆ.
ನಿಮ್ಮ ಮೂಲಕ ಅವರಿಗೆ ತಕ್ಕ ಉತ್ತರ ಕೊಡುತ್ತೇವೆ. ದೇವರಾಜು ಅರಸು ಬಳಿಕ 5 ವರ್ಷ ಅಧಿಕಾರ ಪೂರ್ಣಗೊಳಿಸಿದ ಸಿಎಂ ಅಂದ್ರೆ ಅದು ನಾನು. 5 ವರ್ಷಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿ ಮಾಡಿದ್ದೇನೆ. ಯಾರೊಬ್ಬರು ಇನ್ನೊಬ್ಬರ ಮನೆ ಮುಂದೆ ಹೋಗಿ ಕೈ ಒಡ್ಡಬಾರದು. ಭಿಕ್ಷುಕರು ಈ ರಾಜ್ಯದಲ್ಲಿ ಇರಬಾರದು ಎಂದು ಅನ್ನಭಾಗ್ಯ ಯೋಜನೆ ಜಾರಿಗೆ ತಂದಿದ್ದೇನೆ.
ಕುಮಾರಸ್ವಾಮಿ ಸಿಎಂ ಆಗಿದ್ದಾಗ ಈ ರಾಜ್ಯಕ್ಕೆ ಏನೂ ಮಾಡಲಿಲ್ಲ. 1 ವರ್ಷ 2 ತಿಂಗಳಲ್ಲಿ ಏನೂ ಕೆಲಸ ಮಾಡಲಿಲ್ಲ. ʻಕೊಟ್ಟ ಕುದುರೆ ಏರದವನು ವೀರನೂ ಅಲ್ಲಾ ಶೂರನೂ ಅಲ್ಲಾʼ ಎಂದು ವ್ಯಂಗ್ಯವಾಡಿದ್ದಾರೆ.
ಹಿಂದೆ ಕುಮಾರಸ್ವಾಮಿ ಸಿಎಂ ಆಗಿದ್ದಾಗ 17 ಜನ ಶಾಸಕರನ್ನು ಬಿಜೆಪಿಯವರು ಕೊಂಡುಕೊಂಡು ಸರ್ಕಾರ ರಚಿಸಿದರು. ಒಬ್ಬೊಬ್ಬರಿಗೆ 25 ಲಕ್ಷ ರೂ. ಖರ್ಚು ಮಾಡಿದರು. ಯಡಿಯೂರಪ್ಪ, ಬೊಮ್ಮಾಯಿ ಸಿಎಂ ಆದರು. ಆನಂತರ ಅವರನ್ನೆಲ್ಲ ತಿರಸ್ಕರಿಸಿ ಜನರು ನಮ್ಮನ್ನು ಆಶೀರ್ವದಿಸಿದರು. ಜೆಡಿಎಸ್ ಗೆ ಯಾವಾಗಲೂ ಜನ ಬೆಂಬಲ ಆಶಿರ್ವಾದ ಇರಲಿಲ್ಲ. ನಾವು ಗೆದ್ದ ಮೇಲೆ 5 ಗ್ಯಾರೆಂಟಿ ಕೊಡುತ್ತೇವೆ ಎಂದು ಹೇಳಿದ್ದೇವು. ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ. ನುಡಿದಂತೆ ನಡೆದಿದ್ದೇವೆ ಎಂದು ಹೇಳಿದ್ದಾರೆ.