ಬೆಂಗಳೂರು: ಡಾ. ಬಿ.ಆರ್. ಅಂಬೇಡ್ಕರ್ ಜನ್ಮದಿನಾಚರಣೆಯ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಏ. 11ರಂದು ಬೆಳಗ್ಗೆ 9.30ಕ್ಕೆ ವಿಧಾನಸೌಧದ ಮುಂಭಾಗದಲ್ಲಿ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ.
ಏ. 14 ರಂದು ಡಾ. ಬಿ.ಆರ್. ಅಂಬೇಡ್ಕರ್ ಜನ್ಮದಿನಾಚರಣೆ ಇರುವ ಹಿನ್ನೆಲೆಯಲ್ಲಿ “ಭೀಮ ಹೆಜ್ಜೆ” ಶೀರ್ಷಿಕೆಯಡಿಯಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನ ವಿಧಾನಸೌಧದ ಮುಂಭಾಗದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತಿದೆ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
500 ಬೈಕ್ ಗಳಲ್ಲಿ ಸವಾರರು ಮೂರು ದಿನಗಳ ಕಾಲ ಅಂಬೇಡ್ಕರ್ ತತ್ವ ಸಿದ್ಧಾಂತ ಪ್ರಚಾರ ಮಾಡುತ್ತ ಪ್ರಯಾಣ ನಡೆಸಲಿದ್ದಾರೆ. ಹೀಗಾಗಿ ನಾಳೆ ಸಾಂಕೇತಿಕವಾಗಿ ವಿಧಾನಸೌಧದ ಅಂಬೇಡ್ಕರ್ ಪ್ರತಿಮೆ ಮುಂಭಾಗ “ಭೀಮ ಹೆಜ್ಜೆ” ಗೆ ಚಾಲನೆ ನೀಡಲಾಗುತ್ತಿದೆ.
ಬೆಂಗಳೂರಿನ ಹೊರವಲಯದ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಿಂದ ಬೈಕ್ ರ್ಯಾಲಿ ಆರಂಭವಾಗಲಿದೆ. ನಾಳೆ ಬೆಂಗಳೂರಿನಿಂದ ಚಿತ್ರದುರ್ಗಕ್ಕೆ ಬೈಕ್ ರ್ಯಾಲಿ ಪ್ರಯಾಣ ಬೆಳೆಸಲಿದೆ. ನಾಡಿದ್ದು ಚಿತ್ರದುರ್ಗದಿಂದ ಹುಬ್ಬಳ್ಳಿಗೆ ಪ್ರಯಾಣ ಸಾಗಲಿದೆ. ಮೂರನೇ ದಿನ ಹುಬ್ಬಳ್ಳಿಯಿಂದ ನಿಪ್ಪಾಣಿಗೆ ಪ್ರಯಾಣ ಸಾಗಲಿದೆ. ನಿಪ್ಪಾಣಿಯಲ್ಲಿ ಏ. 15ರಂದು ಅಂಬೇಡ್ಕರ್ ಕುರಿತಾದ ಬೃಹತ್ ಸಮಾವೇಶ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಬಿಜೆಪಿಯ ನಾಯಕರು ಭಾಗಿಯಾಗಲಿದ್ದಾರೆ. “ಭೀಮ ಹೆಜ್ಜೆ” ಕಾರ್ಯಕ್ರಮದ ಸಂಪೂರ್ಣ ನಿರ್ವಹಣಾ ಜವಾಬ್ದಾರಿಯನ್ನು ಮಾಜಿ ಶಾಸಕ ಪಿ.ರಾಜೀವ್ ಹೆಗಲಿಗೆ ವಹಿಸಲಾಗಿದೆ.