ಬೆಂಗಳೂರು: ರಾಜ್ಯದಲ್ಲಿ ಜೂ. 16ರಿಂದ ಬೈಕ್ ಟ್ಯಾಕ್ಸಿ (Bike Taxis) ಸೇವೆ ಬಂದ್ ಆಗಲಿದೆ.
ಹೈಕೋರ್ಟ್ (High Court) ಏಕಸದಸ್ಯ ಪೀಠ ನೀಡಿದ್ದ ಆದೇಶಕ್ಕೆ ತಡೆ ನೀಡಲು ದ್ವಿಸದಸ್ಯ ಪೀಠ ನಿರಾಕರಿಸಿದ್ದರಿಂದಾಗಿ ಜೂ.16ರಿಂದ ರಾಜ್ಯದಲ್ಲಿ (Karnataka) ಬೈಕ್ ಟ್ಯಾಕ್ಸಿಗಳು ರಾಜ್ಯದಲ್ಲಿ ಬಂದ್ ಆಗಲಿವೆ.
ಬೈಕ್ ಟ್ಯಾಕ್ಸಿ ರದ್ದುಪಡಿಸಿ ಏಕಸದಸ್ಯ ಪೀಠ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಮೇಲ್ಮನವಿಯನ್ನು ಹಂಗಾಮಿ ನ್ಯಾ. ಕಾಮೇಶ್ವರ ರಾವ್, ನ್ಯಾ. ಶ್ರೀನಿವಾಸ್ ಹರೀಶ್ ಕುಮಾರ್ ದ್ವಿಸದಸ್ಯ ಪೀಠದಲ್ಲಿ ವಿಚಾರಣೆ ನಡೆಯಿತು.
ಹೊಸ ನಿಯಮ ರೂಪಿಸದ ಕಾರಣ ತಡೆಯಾಜ್ಞೆ ಸಾಧ್ಯ ಇಲ್ಲ ಎಂದು ಪೀಠ ಹೇಳಿತು. ನ್ಯಾಯಾಲಯ 10 ದಿನಗಳ ಕಾಲ ವಿಚಾರಣೆಯನ್ನ ಮುಂದೂಡಿದೆ. ಏಪ್ರಿಲ್ 2 ರ ಆದೇಶದದಲ್ಲಿ, ಎಲ್ಲಾ ಬೈಕ್ ಟ್ಯಾಕ್ಸಿ ಸೇವೆಗಳನ್ನು ಆರು ವಾರಗಳ ಒಳಗೆ ಸ್ಥಗಿತಗೊಳಿಸಲು ಕೋರ್ಟ್ ಆದೇಶಿಸಿತ್ತು. ರ್ಯಾಪಿಡೋ, ಓಲಾ ಮತ್ತು ಉಬರ್ ಸೇರಿದಂತೆ ಬೈಕ್ ಟ್ಯಾಕ್ಸಿ ನಿರ್ವಾಹಕರು ಈ ಗಡುವನ್ನು ವಿಸ್ತರಿಸುವಂತೆ ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ವೇಳೆ ವಿನಂತಿಯನ್ನು ಪರಿಗಣಸಿದ್ದ ನ್ಯಾಯಾಧೀಶರು, ಅಂತಿಮವಾಗಿ ಬೈಕ್ ಟ್ಯಾಕ್ಸಿ ಕಾರ್ಯಾಚರಣೆಗಳನ್ನು ಮುಕ್ತಾಯಗೊಳಿಸುವ ಗಡುವನ್ನು ಜೂನ್ 15 ರವರೆಗೆ ವಿಸ್ತರಿಸಿದ್ದರು.