ಬೆಂಗಳೂರು : ಸಿಲಿಕಾನ್ ಸಿಟಿಯ ರಸ್ತೆಗಳಲ್ಲಿ ಸಂಚರಿಸುವಾಗ ಪಾದಚಾರಿಗಳೇ ಆಗಲಿ, ಬೈಕ್ ಸವಾರರೇ ಆಗಲಿ ಸ್ವಲ್ಪ ಯಾಮಾರಿದ್ರೂ ಪ್ರಾಣಕ್ಕೆ ಸಂಚಕಾರ ಕಟ್ಟಿಟ್ಟ ಬುತ್ತಿ. ಇದಕ್ಕೆ ಸಾಕ್ಷಿ ಎನ್ನುವಂತೆ ಹೆಬ್ಬಾಳದ ಆರ್.ಟಿ. ನಗರದಲ್ಲಿ ಒಂದು ಭೀಕರ ಘಟನೆ ನಡೆದಿದೆ. ಹಾರಾಡುತ್ತಿದ್ದ ಗಾಳಿಪಟದ ದಾರವೊಂದು ಯುವಕನ ಕಾಲನ್ನೇ ಸೀಳಿರುವ ಘೋರ ಘಟನೆ ಜೂನ್ 31ರಂದು ನಡೆದಿದೆ.
ನಾಗಾರ್ಜುನ ಎಂಬ ಯುವಕ ಜಿಬಿಎ ಕಸದ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಅಂದು ಬೆಳಗ್ಗೆ ತನ್ನ ಕೆಲಸ ಮುಗಿಸಿ ಮನೆಗೆ ವಾಪಸ್ ಹೋಗುತ್ತಿದ್ದಾಗ, ರಸ್ತೆಯಲ್ಲಿ ಗಾಳಿಪಟದ ದಾರವೊಂದು ಬೈಕ್ ಸವಾರನೊಬ್ಬನಿಗೆ ಅಡ್ಡ ಸಿಕ್ಕಿರುವುದನ್ನು ನಾಗಾರ್ಜುನ ಗಮನಿಸಿದ್ದಾನೆ. ಅದನ್ನು ಬಿಡಿಸಿ ಸಹಾಯ ಮಾಡೋಣ ಎಂದು ನಾಗಾರ್ಜುನ ಮುಂದಾಗಿದ್ದಾನೆ. ನಾಗಾರ್ಜುನ ದಾರವನ್ನು ಬಿಡಿಸಲು ಹೋದಾಗಲೇ ವಿಧಿಯ ಆಟ ಬೇರೆಯೇ ಇತ್ತು. ರಸ್ತೆಯಲ್ಲಿ ವೇಗವಾಗಿ ಬಂದ ಕಾರಿಗೆ ಆ ದಾರ ಸಿಲುಕಿ ನಾಗಾರ್ಜುನ ಅವರ ಕಾಲಿಗೆ ಬಿಗಿಯಾಗಿ ಸುತ್ತಿಕೊಂಡಿದೆ. ಕಾರಿನ ಎಳೆತಕ್ಕೆ ದಾರವು ಹರಿತವಾದ ಚಾಕುವಿನಂತೆ ನಾಗಾರ್ಜುನ ಕಾಲನ್ನು ಸೀಳಿದೆ.
ಈ ಭೀಕರ ಘಟನೆಯಲ್ಲಿ ನಾಗಾರ್ಜುನ ಕಾಲಿನ ಮೂರು ಪ್ರಮುಖ ನರಗಳು ಕಟ್ ಆಗಿವೆ. ಸದ್ಯ ನಾಗಾರ್ಜುನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪೂರ್ಣ ಪ್ರಮಾಣದಲ್ಲಿ ಚೇತರಿಸಿಕೊಳ್ಳಲು ಕನಿಷ್ಠ ನಾಲ್ಕು ತಿಂಗಳು ಬೇಕಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಯಾರೋ ಹಾರಿಸಿದ ಗಾಳಿಪಟ, ಮತ್ಯಾರೋ ಮಾಡಿದ ತಪ್ಪಿಗೆ ಇಂದು ಬಡ ಕುಟುಂಬದ ಯುವಕ ಆಸ್ಪತ್ರೆ ಸೇರುವಂತಾಗಿದೆ. ಈ ಇಡೀ ಘಟನೆಯ ಭೀಕರ ದೃಶ್ಯಗಳು ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಇದನ್ನೂ ಓದಿ : ಬೆಂಗಳೂರಿನಲ್ಲಿ ಸಿನಿಮಾ ಸ್ಟೈಲ್ ದರೋಡೆ | ಯುವಕನಿಗೆ ಲಾಂಗ್ ಬೀಸಿ 31 ಲಕ್ಷ ದೋಚಿದ ರಾಬರ್ಸ್!


















