ಬಳ್ಳಾರಿ : ಬಳ್ಳಾರಿಯ ಸಚಿವ ಜನಾರ್ದನ ರೆಡ್ಡಿ ನಿವಾಸದ ಎದುರು ನಡೆದ ಬ್ಯಾನರ್ ಗಲಾಟೆ ವೇಳೆ ನಡೆದ ಗುಂಡಿನ ಚಕಮಕಿ ಪ್ರಕರಣಕ್ಕೆ ಇದೀಗಾ ಮಹತ್ವದ ತಿರುವು ಸಿಕ್ಕಿದೆ. ಈ ಘರ್ಷಣೆಯಲ್ಲಿ ಗುಂಡು ಹಾರಿಸಿದ್ದು ಸತೀಶ್ ರೆಡ್ಡಿ ಜೊತೆಗಿದ್ದ ಗನ್ ಮ್ಯಾನ್ಗಳೇ ಎಂಬ ಸಂಶಯ ಈಗಾ ಖಚಿತವಾಗುತ್ತಿದೆ. ಇದರ ಬೆನ್ನಲ್ಲಿಯೇ ಪಂಜಾಬ್ ಮೂಲದ ಇಬ್ಬರು ಗನ್ ಮ್ಯಾನ್ಗಳನ್ನು ಪೊಲೀಸರು ಬಂಧಿಸಿದ್ದಾರೆ.
ಈ ಘಟನೆ ನಡೆದ ಸಂದರ್ಭದಲ್ಲಿ ಯಾರ ಗನ್ನಿಂದ ಬುಲೆಟ್ ಹಾರಿತು ಎಂಬ ಯಕ್ಷಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಂತಾಗಿದೆ. ಬಲಜಿತ್ ಸಿಂಗ್ ಮತ್ತು ಗುರುಚರಣ್ ಸಿಂಗ್ ಎಂಬ ಇಬ್ಬರು ಗನ್ ಮ್ಯಾನ್ಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದರು. ಇವರಿಬ್ಬರೂ ಪಂಜಾಬ್ ಮೂಲದವರಾಗಿದ್ದು, ಇವರ ಹಿನ್ನೆಲೆ ಹಾಗೂ ಯಾವ ಉದ್ದೇಶಕ್ಕಾಗಿ ಗುಂಡು ಹಾರಿಸಲಾಯಿತು ಎಂಬ ಬಗ್ಗೆ ತನಿಖೆ ತೀವ್ರಗೊಂಡಿದೆ. ಸತೀಶ್ ರೆಡ್ಡಿ ಅವರ ಜೊತೆಗಿದ್ದ ಒಟ್ಟು 6 ಜನ ಗನ್ ಮ್ಯಾನ್ಗಳಲ್ಲಿ ನಾಲ್ವರು ಘಟನಾ ಸ್ಥಳದಲ್ಲಿ ಹಾಜರಿದ್ದರು ಎನ್ನಲಾಗಿದೆ.
ನಗರ ಡಿವೈಎಸ್ಪಿ ಚಂದ್ರಕಾಂತ ನಂದಾರೆಡ್ಡಿ ಹಾಗೂ ಬ್ರೂಸ್ಪೇಟೆ ಸಿಪಿಐ ಮಹಾಂತೇಶ್ ನೇತೃತ್ವದಲ್ಲಿ ತನಿಖೆ ಚುರುಕುಗೊಳಿಸಿತ್ತು. ಗನ್ ಮ್ಯಾನ್ಗಳೂ ಸೇರಿದಂತೆ ಘಟನೆಯಲ್ಲಿ ಭಾಗಿಯಾಗಿದ್ದ ಸುಮಾರು 45 ಜನರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು. ವಿಚಾರಣೆ ಎದುರಿಸುತ್ತಿರುವವರಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳ ಬೆಂಬಲಿತ ಯುವಕರಿದ್ದರು. ಸತೀಶ್ ರೆಡ್ಡಿ ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಬಳಿ ಇರುವ ಉಳಿದ ಇಬ್ಬರು ಗನ್ ಮ್ಯಾನ್ಗಳ ಮೇಲೂ ಪೊಲೀಸರು ನಿಗಾ ಇಟ್ಟಿದ್ದರು. ಸದ್ಯ ಬಂಧಿತ ಗನ್ ಮ್ಯಾನ್ಗಳಿಂದ ಹೆಚ್ಚಿನ ಮಾಹಿತಿ ಪಡೆಯಲಾಗುತ್ತಿದ್ದು, ಅಧಿಕೃತ ಪೊಲೀಸ್ ಪ್ರಕಟಣೆ ಹೊರಬೀಳುವುದೊಂದೇ ಬಾಕಿ ಇದೆ.
ಇದನ್ನೂಓದಿ: ಬೈಕ್ಗೆ ಹಿಂಬದಿಯಿಂದ ಲಾರಿ ಡಿಕ್ಕಿ | ಸವಾರ ಸಾವು



















