ನವದೆಹಲಿ: ಶೈಕ್ಷಣಿಕ ಸುಧಾರಣೆಗಳ ಹೆಸರಿನಲ್ಲಿ ಹಿಂದಿಯನ್ನು ಹೇರಿಕೆ ಮಾಡುವ(Hindi Imposition) ಕೇಂದ್ರ ಸರ್ಕಾರದ ಪ್ರಯತ್ನಗಳ ಬಗ್ಗೆ ಅಲರ್ಟ್ ಆಗಿರಿ, ಅದನ್ನು ಪ್ರತಿರೋಧಿಸಲು ಸಜ್ಜಾಗಿ ಎಂದು ತಮಿಳುನಾಡು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ.
ಚೆನ್ನೈನ ನಂದನಂ ಸರ್ಕಾರಿ ಪುರುಷರ ಕಲಾ ಕಾಲೇಜಿನಲ್ಲಿ ಹೊಸ ಸಭಾಂಗಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ), ತ್ರಿಭಾಷಾ ಸೂತ್ರ ಮತ್ತು ನೀಟ್ನಂತಹ ನೀತಿಗಳನ್ನು ತಮಿಳು ಮತ್ತು ದ್ರಾವಿಡ ಮಾದರಿಯ ಆಡಳಿತವನ್ನು ದುರ್ಬಲಗೊಳಿಸಲು ಬಳಸಲಾಗುತ್ತಿದೆ ಎಂದು ಎಚ್ಚರಿಕೆ ನೀಡಿದರು.
ಮಾಜಿ ಮುಖ್ಯಮಂತ್ರಿ ದಿವಂಗತ ಎಂ.ಕರುಣಾನಿಧಿ ಅವರ ಹೆಸರಿನಲ್ಲಿ ಹೊಸದಾಗಿ ತೆರೆಯಲಾದ 1,000 ಆಸನಗಳ ಸಭಾಂಗಣದಲ್ಲಿ ನೆರೆದಿದ್ದ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಉದಯನಿಧಿ ಸ್ಟಾಲಿನ್, “ತಮಿಳುನಾಡಿನ ಅಡಿಪಾಯವೇ ತಮಿಳು. ಇಂದು, ತಮಿಳಿಗೆ ಅಪಾಯವನ್ನು ಸೃಷ್ಟಿಸಲು ಹಲವು ಪ್ರಯತ್ನಗಳು ನಡೆಯುತ್ತಿವೆ. ತ್ರಿಭಾಷಾ ನೀತಿ, ಎನ್ಇಪಿ ಮತ್ತು ನೀಟ್… ಇವೆಲ್ಲರೂ ಒಂದೇ ಗುರಿಗೆ ಇಟ್ಟಿರುವ ವಿಭಿನ್ನ ಹೆಸರುಗಳಾಗಿವೆ: ಆ ಗುರಿಯೇನೆಂದರೆ ತಮಿಳುನಾಡಿನಲ್ಲಿ ಹಿಂದಿ ಹೇರಿಕೆ” ಎಂದಿದ್ದಾರೆ.
ಉದಯನಿಧಿ ಅವರು ತಮ್ಮ ಭಾಷಣದಲ್ಲಿ ಇತಿಹಾಸವನ್ನು ಸ್ಮರಿಸುತ್ತಾ, ವಿದ್ಯಾರ್ಥಿಗಳ ನೇತೃತ್ವದಲ್ಲಿ 1965ರಲ್ಲಿ ನಡೆದ ಹಿಂದಿ ವಿರೋಧಿ ಆಂದೋಲನವನ್ನ ನೆನಪಿಸಿದರು. ರಾಜ್ಯದಲ್ಲಿ ತಮಿಳಿನ ಪ್ರಾಮುಖ್ಯತೆಯು ಉಳಿಯಲು ಆ ಚಳುವಳಿಯೇ ಕಾರಣವಾಯಿತು ಎಂದರು. “ನಿಮ್ಮ ಹಿರಿಯರು ಯಾವುದೇ ಪ್ರತಿಫಲವನ್ನು ನಿರೀಕ್ಷಿಸದೆ ಹೋರಾಡಿದರು. ಅವರ ಹೋರಾಟವೇ ತಮಿಳನ್ನು ರಕ್ಷಿಸಿತು. ಹಿಂದಿ ಹೇರಿಕೆಯನ್ನು ಅದರ ಎಲ್ಲಾ ಆಧುನಿಕ ರೂಪಗಳಲ್ಲಿ ವಿರೋಧಿಸುವ ಮೂಲಕ ಆ ಪರಂಪರೆಯನ್ನು ಮುಂದುವರಿಸುವುದು ನೀವು ಅವರನ್ನು ಗೌರವಿಸುವ ಅತ್ಯುತ್ತಮ ಮಾರ್ಗವಾಗಿದೆ” ಎಂದು ಅವರು ಕರೆ ನೀಡಿದರು.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ತಮಿಳುನಾಡಿನ ಶಿಕ್ಷಣ ವ್ಯವಸ್ಥೆಗೆ ಧಕ್ಕೆ ತರುವ ಉದ್ದೇಶಪೂರ್ವಕ ಸಂಚನ್ನು ಹೊಂದಿದೆ ಎಂದು ಉದಯನಿಧಿ ಟೀಕಿಸಿದರು. “ಪೆರಿಯಾರ್, ಅಣ್ಣಾದೊರೈ ಮತ್ತು ಕರುಣಾನಿಧಿ ಅವರಂತಹ ದ್ರಾವಿಡ ನಾಯಕರು ವಿದ್ಯಾರ್ಥಿಗಳನ್ನು ಬೀದಿಗಿಳಿಯಲು ಎಂದಿಗೂ ಪ್ರೋತ್ಸಾಹಿಸಲಿಲ್ಲ. ಶಿಕ್ಷಣಕ್ಕೆ ಆದ್ಯತೆ ನೀಡುವಂತೆ ಅವರು ಕೇಳಿಕೊಂಡರು” ಎಂದು ಅವರು ಹೇಳಿದರು. ಆದರೆ ಈಗ ಕೇಂದ್ರ ಸರ್ಕಾರವೇ ನೀಟ್ ಮತ್ತು ಹೊಸ ಶಿಕ್ಷಣ ನೀತಿಯ ಮೂಲಕ ವಿದ್ಯಾರ್ಥಿಗಳಿಗೆ ತೊಂದರೆ ನೀಡುತ್ತಿದೆ ಎಂದರು.
ಹಿಂದಿ ಹೇರಿಕೆಯ ಪರವಾಗಿ ಮಂಡಿಸಲಾಗುತ್ತಿರುವ ವಾದಗಳಿಂದ ದಾರಿ ತಪ್ಪದಂತೆ ಅವರು ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದರು. “ಅನೇಕರು ಇದೇ ಸತ್ಯ ಎಂಬಂತೆ ಮಾತನಾಡಿ ನಿಮ್ಮ ತಲೆ ಕೆಡಿಸಲು ಯತ್ನಿಸುತ್ತಾರೆ, ಆದರೆ ನೀವು ಜಾಗರೂಕರಾಗಿರಬೇಕು ಮತ್ತು ವಾಸ್ತವವನ್ನು ಅರ್ಥಮಾಡಿಕೊಳ್ಳಬೇಕು. ನೀವು ನಿಮ್ಮ ನಿಲುವಿನಲ್ಲಿ ದೃಢವಾಗಿದ್ದರೆ, ನಮ್ಮ ಶತ್ರುಗಳು ನಮ್ಮ ವಿರುದ್ಧ ಗೆಲ್ಲಲು ಸಾಧ್ಯವಿಲ್ಲ ಎಂದು ನೀವು ಅರಿತುಕೊಳ್ಳಬೇಕು” ಎಂದರು.