ಬೆಂಗಳೂರು: ಕೆಎಸ್ ಸಿಎಗೆ ಬಿಬಿಎಂಪಿ ಶಾಕ್ ನೀಡಿದ್ದು, ನೋಟಿಸ್ ಜಾರಿ ಮಾಡಿದೆ.
11 ಅಮಾಯಕರ ನೆತ್ತರು ಹರಿಯಲು ಕಾರಣವಾಗಿದ್ದ ಕೆಎಸ್ ಸಿಎಗೆ ಈಗ ಒಂದಾದ ಮೇಲೊಂದರಂತೆ ಶಾಕ್ ಎದುರಾಗುತ್ತಿದೆ. ಕೆಎಸ್ ಸಿಎ ಹಲವಾರು ವರ್ಷಗಳಿಂದ ಜಾಹೀರಾತು ತೆರಿಗೆ ಕಟ್ಟದೆ ಬಿಬಿಎಂಪಿ ಕಾಯ್ದೆ ಉಲ್ಲಂಘನೆ ಮಾಡಿದೆ ಎನ್ನಲಾಗಿದೆ. ಬಿಬಿಎಂಪಿ ಕಾನೂನಿನ ಪ್ರಕಾರ ಕ್ರೀಡಾಂಗಣದ ಒಳಗಡೆ ಅಥವಾ ಹೊರಗಡೆ ಜಾಹೀರಾತು ಹಾಕಿದರೆ ತೆರಿಗೆ ಕಟ್ಟಬೇಕು.
ಆದರೆ, ಕಳೆದ ಹಲವು ವರ್ಷಗಳಿಂದ ಮ್ಯಾಚ್ ನಡೆಯುವಾಗ ಎಲ್ ಇಡಿ ಸೇರಿದಂತೆ ಅನೇಕ ಜಾಹೀರಾತು ಬೋರ್ಡ್ ಗಳನ್ನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಳವಡಿಸಲಾಗಿದೆ. ಆದರೆ ತೆರಿಗೆ ಮಾತ್ರ ಕಟ್ಟಿರಲಿಲ್ಲ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ನೋಟಿಸ್ ನೀಡಿದೆ.
ಅನಧಿಕೃತವಾಗಿ ಜಾಹೀರಾತು ಅಳವಡಿಕೆ ಮಾಡಿದ್ದೀರಿ. ಆದರೆ, ಪಾಲಿಕೆಯಿಂದ ಜಾಹೀರಾತು ಅಳವಡಿಕೆಗೆ ಅನುಮತಿ ಪಡೆದಿಲ್ಲ. ಇದು ಕಾನೂನು ಬಾಹಿರ. ಈ ಬಗ್ಗೆ ಈಗಾಗಲೇ ನೋಟಿಸ್ ಕೊಟ್ಟಿದ್ದರೂ ಉತ್ತರ ನೀಡಿಲ್ಲ. ಇದರಿಂದಾಗಿ ಬಿಬಿಎಂಪಿಗೆ ಹತ್ತರೂ ಕೋಟಿ ರೂ. ನಷ್ಟವಾಗಿದೆ ಎಂದು ನೋಟಿಸ್ ನಲ್ಲಿ ಉಲ್ಲೇಖಿಸಲಾಗಿದೆ.
ಕಳೆದ ಮೂರ್ನಾಲ್ಕು ವರ್ಷಗಳಿಂದ ಕೆಎಸ್ ಸಿಎ ಗೆ ನೋಟಿಸ್ ನೀಡಿದರೂ ಉತ್ತರ ನೀಡದ ಕೆಎಸ್ ಸಿಎಗೆ ಈಗ ಶಾಕ್ ಎದುರಾಗಿದ್ದು, ಬಿಬಿಎಂಪಿ ಶುಲ್ಕ ಪಾವತಿಗೆ ಪಟ್ಟು ಹಿಡಿದಿದೆ. ಜಾಹೀರಾತು ಶುಲ್ಕದ ಜೊತೆ ದಂಡದ ಪ್ರಯೋಗಕ್ಕೆ ಕೂಡ ಬಿಬಿಎಂಪಿ ಮುಂದಾಗಿದೆ. ಜಾಹೀರಾತು ಶುಲ್ಕ ಪಾವತಿ ಮಾಡದಿದ್ದರೆ ಕಾನೂನು ರೀತಿ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆಯನ್ನು ಕೂಡ ಬಿಬಿಎಂಪಿ ನೀಡಿದೆ.