ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿದ್ದಾರೆಂಬ ಆರೋಪ ವಿಪ ಸದಸ್ಯ ಸಿ.ಟಿ. ರವಿ ಮೇಲಿದೆ. ಈ ಪ್ರಕರಣವನ್ನು ಈಗಾಗಲೇ ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ವಹಿಸಿದೆ. ಅದರಂತೆ ಸಿಐಡಿ ಅಧಿಕಾರಿಗಳು ತನಿಖೆ ಕೂಡ ಮುಂದುವರೆಸಿದ್ದಾರೆ. ಸರ್ಕಾರದ ನಿರ್ಧಾರಕ್ಕೆ ಸಭಾಪತಿ ಬಸವರಾಜ ಹೊರಟ್ಟಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಗೃಹ ಸಚಿವರಿಗೆ ಪತ್ರ ಬರೆದ ಸಭಾಪತಿ:
ಈ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿರುವ ಸರ್ಕಾರದ ಕ್ರಮಕ್ಕೆ ಹೊರಟ್ಟಿ ಆಕ್ಷೇಪಿಸಿ, ಗೃಹ ಸಚಿವ ಡಾ. ಜಿ. ಪರಮೇಶ್ವರ್ ಗೆ ಪತ್ರ ಬರೆದಿದ್ದಾರೆ. ಈ ಪ್ರಕರಣವನ್ನು ಯಾವ ಕಾರಣಕ್ಕೆ ಸಿಐಡಿಗೆ ವಹಿಸಲಾಗಿದೆ ಎಂಬುವುದು ಸ್ಪಷ್ಟವಾಗಿಲ್ಲ. ಸದನದಲ್ಲಿ ನಡೆದ ಘಟನೆಯ ಬಗ್ಗೆ ಚರ್ಚಿಸುವುದು, ಮುಕ್ತಾಯ ಮಾಡುವುದು, ತೀರ್ಮಾನಿಸುವುದರಲ್ಲಿ ಸದನಕ್ಕೆ ಸಾರ್ವಭೌಮತ್ವ ಅಧಿಕಾರ ಇರುತ್ತದೆ. ಡಿಸೆಂಬರ್ 19ರಂದು ನಡೆದ ಘಟನೆಗೆ ಸಂಬಂಧಿಸಿದಂತೆ ಪರಾಮರ್ಶಿಸಿಕೊಂಡು ಪೀಠದಿಂದ ತೀರ್ಪು ನೀಡಲಾಗಿದೆ ಎಂದು ಕೂಡ ಹೊರಟ್ಟಿ ಹೇಳಿದ್ದಾರೆ.
ಸಭಾಪತಿ ತೀರ್ಪು ಅಂತಿಮ:
ಸದನದೊಳಗೆ ಶಿಸ್ತು ಸಂರಕ್ಷಿಸುವುದು, ನಿಯಂತ್ರಿಸುವ ಅಧಿಕಾರ ಸಭಾಪತಿಗೆ ಪ್ರದತ್ತವಾಗಿದೆ. ಸಭಾಪತಿ ತೀರ್ಪೇ ಇದರಲ್ಲಿ ಅಂತಿಮ. ಶಾಸಕಾಂಗಕ್ಕೆ ಮತ್ತು ಸಭಾಪತಿಯವರಿಗೆ ಪ್ರದತ್ತವಾದ ವಿಶೇಷ ಅಧಿಕಾರಕ್ಕೆ ಚ್ಯುತಿ ಬರುವಂತೆ ಕಾರ್ಯಾಂಗವು ಪ್ರಕರಣವನ್ನು ಸಿಐಡಿಗೆ ವಹಿಸುವ ಮೂಲಕ ಸಾಂವಿಧಾನಿಕ ಘರ್ಷಣೆಗೆ ಅವಕಾಶ ಮಾಡಿಕೊಡುತ್ತಿದೆ ಎಂದು ಭಾಸವಾಗುತ್ತಿದೆ. ವಿನಾಕಾರಣ ಶಾಸಕಾಂಗ ಮತ್ತು ಕಾರ್ಯಾಂಗದ ನಡುವೆ ಸಂಘರ್ಷದ ಪ್ರಮೇಯ ನಿರ್ಮಾಣ ಆಗಬಾರದು. ಸದನದಲ್ಲಿ ನಡೆದ ಘಟನೆ ಸಭಾಪತಿಯವರ ಕಾರ್ಯವ್ಯಾಪ್ತಿಗೆ ನಿಹಿತವಾಗಿರುವುದು ತಮಗೆ ತಿಳಿದ ವಿಚಾರ. ಕಾರ್ಯಾಂಗ ಮತ್ತು ಶಾಸಕಾಂಗದ ನಾವಿಬ್ಬರೂ ಪರಸ್ಪರ ಗೌರವದೊಂದಿಗೆ ನಮ್ಮ ಕರ್ತವ್ಯ ನಿರ್ವಹಿಸಬೇಕಿದೆ. ತಾವೂ ಕೂಡ ಸಂವಿಧಾನದ ವಿವಿಧ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಉಳ್ಳವರು. ಸಂವಿಧಾನದ ಅಡಿಯಲ್ಲೇ ಕರ್ತವ್ಯ ನಿರ್ವಹಿಸುತ್ತೀರಿ ಎಂಬ ವಿಶ್ವಾಸ ಇದೆ. ಸಭಾಪತಿಯವರ ಹಕ್ಕುಗಳನ್ನು ಮತ್ತು ಸದನದ ಸಾರ್ವಭೌಮತ್ವ ಗಮನದಲ್ಲಿಟ್ಟುಕೊಂಡು ಈ ಪ್ರಕರಣವನ್ನು ನಿರ್ವಹಿಸುತ್ತೀರಿ ಎಂಬ ನಂಬಿಕೆ ಇದೆ ಎಂದು ಬಸವರಾಜ ಹೊರಟ್ಟಿ ಪತ್ರದಲ್ಲಿ ಉಲ್ಲೇಖಿಸಿ ಬರೆದಿದ್ದಾರೆ.