ಬೆಂಗಳೂರು: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿ ಹೈಕಮಾಂಡ್ ಉಚ್ಛಾಟನೆ ಮಾಡಿದೆ. ಇದಕ್ಕೆ ಹಲವರು ಸಂತಸ ವ್ಯಕ್ತಪಡಿಸಿದರೆ, ರೆಬೆಲ್ ನಾಯಕರು ಸಭೆ ನಡೆಸಿ, ನಿರ್ಧಾರ ಹಿಂಪಡೆಯುವಂತೆ ಮನವಿ ಮಾಡಿದ್ದಾರೆ. ಇದರ ಬೆನ್ನಲ್ಲೇ ಯತ್ನಾಳ್ ದೇವರ ಮೊರೆ ಹೋಗಿದ್ದಾರೆ.
ಈ ಎಲ್ಲ ಗೊಂದಲಗಳ ಮಧ್ಯೆಯೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಾಶಿ ವಿಶ್ವನಾಥನ ಮೊರೆ ಹೋಗಿದ್ದಾರೆ. ಬೆಂಗಳೂರಿನ ನವರಂಗ್ ಥಿಯೇಟರ್ ಬಳಿಯಿರುವ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಬೆಳಿಗ್ಗೆ ತೆರಳಿರುವ ಯತ್ನಾಳ್ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ರೆಬೆಲ್ಸ್ ನಾಯಕರು ಈಗಾಗಲೇ ಯತ್ನಾಳ್ ರಕ್ಷಣೆಗೆ ಮುಂದಾಗಿದ್ದಾರೆ. ಹೀಗಾಗಿ ಭಿನ್ನಮತೀಯ ಮುಖಂಡರು ಬೆಂಗಳೂರಿನಲ್ಲಿ ಹೈವೋಲ್ಟೇಜ್ ಸಭೆ ನಡೆಸಿದ್ದಾರೆ. ಉಚ್ಛಾಟನೆಯ ನಿರ್ಧಾರವನ್ನು ಹಿಂಪಡೆಯುವಂತೆ ಹೈಕಮಾಂಡ್ ಗೆ ಮನವಿ ಮಾಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಯತ್ನಾಳ್ ಉಚ್ಛಾಟನೆ ಭಿನ್ನಮತೀಯರಿಗೆ ನೋವು ತಂದಿದೆ. ಹೀಗಾಗಿ ಬೆಂಗಳೂರಿನಲ್ಲಿ ಶುಕ್ರವಾರ ಹೈವೋಲ್ಟೇಜ್ ಸಭೆ ನಡೆಸಿದ್ದಾರೆ.
ಈ ಸಭೆಯಲ್ಲಿ ಯತ್ನಾಳ್ ಕೂಡ ಭಾಗವಹಿಸಿದ್ದರು. ಶೋಕಾಸ್ ನೋಟಿಸ್ ಪಡೆದ ಬಿಪಿ ಹರೀಶ್ ಸಹ ಇದ್ದರು. ಇನ್ನುಳಿದಂತೆ ಶಾಸಕ ರಮೇಶ್ ಜಾರಕಿಹೊಳಿ, ಮಾಜಿ ಸಂಸದ ಜಿಎಂ ಸಿದ್ದೇಶ್ವರ, ಮಾಜಿ ಸಚಿವ ಕುಮಾರ್ ಬಂಗಾರಪ್ಪ, ಮಾಜಿ ಸಂಸದ ಪ್ರತಾಪ್ ಸಿಂಹ, ಎನ್ಆರ್ ಸಂತೋಷ್, ಮಾಜಿ ಸಂಸದ ಬಿವಿ ನಾಯಕ್ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.
