ಆನೇಕಲ್: ಬಾರ್ ನಲ್ಲಿ ಕ್ಷುಲ್ಲಕ ಕಾರಣಕ್ಕೆ ಶುರುವಾಗಿದ್ದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ನಡೆದಿದೆ.
ಬನ್ನೇರುಘಟ್ಟ (Bannerughatta) ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಚಗಯ್ಯನದೊಡ್ಡಿಯಲ್ಲಿ ಈ ಘಟನೆ ನಡೆದಿದೆ. ಕೆಂಚಗಯ್ಯನದೊಡ್ಡಿ ನಿವಾಸಿ ಸುರೇಶ್ ಕೊಲೆಯಾಗಿರುವ ವ್ಯಕ್ತಿ ಎನ್ನಲಾಗಿದೆ. ಕಾಂತರಾಜು ಹಾಗೂ ಆತನ ಗ್ಯಾಂಗ್ ನಿಂದ ಹತ್ಯೆಯಾಗಿದೆ ಎನ್ನಲಾಗಿದೆ.
ಕೊಲೆಯಾಗಿರುವ ಸುರೇಶ್ ಗ್ಯಾರೇಜ್ ನಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಶುಕ್ರವಾರ ಮದ್ಯ ಸೇವಿಸಲು ಬಾರ್ ಗೆ ಹೋಗಿದ್ದ ವೇಳೆ ಈ ಘಟನೆ ನಡೆದಿದೆ. ಬಾರ್ ನಲ್ಲಿ ಆರೋಪಿ ಕಾಂತರಾಜು ಹಾಗೂ ಆತನ ಗ್ಯಾಂಗ್ ಜೋರಾಗಿ ಮಾತನಾಡಿದ್ದಾರೆ. ಆಗ ಸುರೇಶ್ ನಿಧಾನವಾಗಿ ಮಾತನಾಡಲು ಹೇಳಿದ್ದಾರೆ. ಸುರೇಶ್ ಹಾಗೂ ಗ್ಯಾಂಗ್ ಮಧ್ಯೆ ಮಾತಿಗೆ ಮಾತು ಬೆಳೆದಿದೆ. ಅದು ವಿಕೋಪಕ್ಕೆ ತೆರಳಿ ಕೊಲೆಯಲ್ಲಿ ಅಂತ್ಯವಾಗಿದೆ. ಆರೋಪಿಗಳು ಪರಾರಿಯಾಗಿದ್ದಾರೆ. ಈ ಕುರಿತು ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.