ಹಾಸನ : ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರು ಕುಟುಂಬ ಸಮೇತರಾಗಿ ಬಂದು ಹಾಸನಾಂಬ ದೇವಿ ದರ್ಶನ ಪಡೆದಿದ್ದಾರೆ. ಈ ಬಾರಿ ಮೈಸೂರು ದಸರಾ ಉದ್ಘಾಟನೆ ಮಾಡಿ ಎಲ್ಲರ ಗಮನ ಸೆಳೆದಿದ್ದ ಬಾನು ಮುಷ್ತಾಕ್, ಇದೀಗ ಹಾಸನಾಂಬೆ ದರ್ಶನ ಪಡೆದು ಆಶೀರ್ವಾದ ಪಡೆದಿದ್ದಾರೆ.
ಆ ಬಳಿಕ ಮಾತನಾಡಿದ ಅವರು, ಇದೇನು ಮೊದಲ ಬಾರಿಗೆ ಹಾಸನಾಂಬೆಯ ದರ್ಶನವನ್ನು ನಾನು ಪಡೆಯುತ್ತಿಲ್ಲ. ನಮ್ಮ ಮನೆ ಮುಂದಿನ ಬೀದಿಯಲ್ಲಿದ್ದು, ಚಿಕ್ಕಂದಿನಿಂದಲೂ ತಾಯಿಯ ಕೈ ಬೆರಳು ಹಿಡಿದುಕೊಂಡು ದೇವಿ ದರ್ಶನಕ್ಕೆ ಬರುತ್ತಿದ್ದೆ. ಆಗ ಯಾರಿಗೂ ಅದು ಗೊತ್ತಾಗುತ್ತಿರಲಿಲ್ಲ. ಇದು ಭಾವೈಕ್ಯತೆಯ ಸ್ಥಳವಾಗಿದ್ದು ಮುಸ್ಲಿಂ ಸಮುದಾಯದವರೂ ಬಹಳಷ್ಟು ಮಂದಿ ಹಿಂದೆ ಇಲ್ಲಿಗೆ ಬರುತ್ತಿದ್ದರು. ಈಗಲೂ ಕೆಲವರು ಬರುತ್ತಾರೆ ಎಂದು ಬಾನು ಮುಷ್ತಾಕ್ ತಿಳಿಸಿದ್ದಾರೆ.
ಹಾಸನದ ಮುಸ್ಲಿಂ ಕುಟುಂಬದಲ್ಲಿ ಜನಿಸಿದ ಬಾನು ಮುಷ್ತಾಕ್ ಚಿಕ್ಕ ವಯಸ್ಸಿನಿಂದಲೇ ಸಾಹಿತ್ಯ ಮತ್ತು ಸಾಮಾಜಿಕ ಕಾರ್ಯದಲ್ಲಿ ತೊಡಗಿದ್ದರು. ಪತ್ರಕರ್ತೆಯಾಗಿ, ನ್ಯಾಯವಾದಿಯಾಗಿ ಮತ್ತು ಹೋರಾಟಗಾರ್ತಿಯಾಗಿ ಅವರು ಕರ್ನಾಟಕದಲ್ಲಿ ಮೂಲಭೂತವಾದಿ ಚಿಂತನೆಗಳು ಮತ್ತು ಸಾಮಾಜಿಕ ಅನ್ಯಾಯಗಳ ವಿರುದ್ಧ ಹೋರಾಡಿದ್ದಾರೆ. ಇದೀಗ ಹಾಸನಾಂಬೆ ದೇವಿಯ ದರ್ಶನ ಪಡೆಯುವ ಮೂಲಕ ಅವರು ತಮ್ಮ ಭಕ್ತಿಯನ್ನು ಸಾರಿದ್ದಾರೆ.