ರಾಯಚೂರು: ನಕಲಿ ಖಾತೆ ತೆರೆದು, ನಕಲಿ ಚಿನ್ನಾಭರಣ ಇಟ್ಟು ಕೋಟಿ ಕೋಟಿ ವಂಚಿಸಿದ್ದ ಬ್ಯಾಂಕ್ ನ ಮ್ಯಾನೇಜರ್ ನನ್ನು ರಾಯಚೂರು ಪೊಲೀಸರು (Raichur Police) ಬಂಧಿಸಿರುವ ಘಟನೆ ನಡೆದಿದೆ.
ಆತನಿಗೆ ಸಪೋರ್ಟ್ ಮಾಡುತ್ತಿದ್ದ ಆಂಧ್ರ ಪ್ರದೇಶದ ಮತ್ತೊಬ್ಬ ಬ್ಯಾಂಕ್ ಉದ್ಯೋಗಿಯನ್ನು ಕೂಡ ವಶಕ್ಕೆ ಪಡೆಯಲಾಗಿದೆ. ನಗರದ ಬ್ಯಾಂಕ್ ಆಫ್ ಮಹಾರಾಷ್ಟ್ರ (Bank of Maharashtra) ಶಾಖೆಯ ಮ್ಯಾನೇಜರ್ ನರೇಂದ್ರ ರೆಡ್ಡಿ ತಾಂತ್ರಿಕವಾಗಿ ಯಾಮಾರಿಸಿ ಕೋಟಿ ಕೋಟಿ ರೂ. ವಂಚಿಸಿ ಸಿಕ್ಕಿ ಬಿದ್ದಿದ್ದಾನೆ.
ಬಂಧಿತ ಆರೋಪಿ, ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ 105 ನಕಲಿ ಖಾತೆ ಓಪನ್ ಮಾಡಿದ್ದ. ಆ ಪೈಕಿ 29 ಖಾತೆಗಳಿಗೆ ಹಣ ವರ್ಗಾವಣೆ ಮಾಡಿ ಹಣ ಎಗರಿಸಿದ್ದಾನೆ. ಆ ಅಕೌಂಟ್ ಗಳಿಂದ ನಕಲಿ ಗೋಲ್ಡ್ ತಾನೇ ಇಟ್ಟು ಅಸಲಿ ಗೋಲ್ಡ್ ಲೋನ್ ಮಂಜೂರು ಮಾಡಿಕೊಂಡು ನಕಲಿ ಖಾತೆಗಳಿಗೆ ವರ್ಗಾಯಿಸಿದ್ದಾನೆ. ನಂತರ ಅಸಲಿ ಗೋಲ್ಡ್ ಲೋನ್ ಹೊಂದಿದವರಿಗೂ ಮೋಸ ಮಾಡಿ ಬರೋಬ್ಬರಿ 10 ಕೋಟಿ 97 ಲಕ್ಷ ರೂ. ವಂಚಿಸಿದ್ದಾನೆ ಎನ್ನಲಾಗಿದೆ.
ಕೊನೆಗೆ ಆಡಿಟ್ ಸಂದರ್ಭದಲ್ಲಿ ಈತನ ಖತರ್ನಾಕ್ ಕೆಲಸ ಹೊರ ಬಿದ್ದಿದೆ. ಆಗ ಹಿರಿಯ ಅಧಿಕಾರಿಗಳು ರಾಯಚೂರಿನ ಸಿಇಎನ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದರು. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಆಸಾಮಿ ವೇಷ ಬದಲಾಯಿಸಿಕೊಂಡು ತಲೆ ಮರೆಸಿಕೊಂಡಿದ್ದ. ಆದರೂ ಪೊಲೀಸರು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.