ಬೆಂಗಳೂರು: ಬಳ್ಳಾರಿ ನಗರದಲ್ಲಿ ನಡೆದ ಗಲಾಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಕೊಲೆಯಾಗಿದ್ದು, ಇದಕ್ಕೆ ಬಿಜೆಪಿಯೇ ಕಾರಣ ಎಂದು ಡಿಸಿಎಂ ಡಿಕೆ ಶಿವಕುಮಾರ್ ನೇರ ಆರೋಪ ಮಾಡಿದ್ದಾರೆ. ಅಲ್ಲದೇ ನಮ್ಮ ಪಕ್ಷ ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ ಪರ ನಿಲ್ಲಲಿದೆ ಎಂದು ಹೇಳಿದರು.
ಬೆಂಗಳೂರಿನಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಸಿಎಂ, ಬಳ್ಳಾರಿ ಪ್ರಕರಣದಲ್ಲಿ ಕಾನೂನು ಪ್ರಕಾರ ಕ್ರಮ ಆಗುತ್ತದೆ. ನಾನು ನಮ್ಮ ಶಾಸಕನ ಪರ ನಿಲ್ಲುತ್ತೇವೆ ಎಂದು ಶಾಸಕ ನಾರಾ ಭರತ್ ರೆಡ್ಡಿ ಪರ ಬ್ಯಾಟ್ ಬೀಸಿದ್ದಾರೆ.
ಯಾರದ್ದೋ ಮನೆ ಮುಂದೆ ರಸ್ತೆಯಲ್ಲಿ ಬ್ಯಾನರ್ ಹಾಕಿದರೆ ಇವರಿಗೆ ಎನು ಸಮಸ್ಯೆ? ನಮ್ಮ ಮನೆ ಮುಂದೆ, ಸಿಎಂ ಮನೆ ಮುಂದೆ ಬಿಜೆಪಿಯವರು ಬ್ಯಾನರ್ ಹಾಕುತ್ತಾರೆ. ಅದು ಸಾರ್ವಜನಿಕ ರಸ್ತೆ. ಸಂಭ್ರಮದಿಂದ ಕಾರ್ಯಕ್ರಮ ಮಾಡಲು ನಾವು ಬ್ಯಾನರ್ ಹಾಕಿದ್ದು ಅಷ್ಟೇ. ಈ ಘಟನೆಯಿಂದ ನಮ್ಮ ಕಾರ್ಯಕರ್ತರನ್ನು ಕಳೆದುಕೊಂಡಿದ್ದೇವೆ ಇದಕ್ಕೆ ಬಿಜೆಪಿ ಕಾರಣ ಎಂದು ಆರೋಪ ಮಾಡಿದ್ದಾರೆ.
ಕಳೆದ ಲೋಕಸಭಾ, ವಿಧಾನಸಭೆಯ ಸೋಲನ್ನು ಬಿಜೆಪಿ ನಾಯಕರಿಗೆ ಅರಗಿಸಿಕೊಳ್ಳಲು ಆಗುತ್ತಾ ಇಲ್ಲ. ಬಳ್ಳಾರಿಗೆ ಜನಾರ್ದನ ರೆಡ್ಡಿ ಬರುವ ತನಕ ಒಂದು ಗಲಾಟೆ ಆಗಿರಲಿಲ್ಲ. ಈಗ ಶುರುವಾಗಿದೆ. ನಮ್ಮ ಶಾಸಕ ಗಲಾಟೆ ಕಂಟ್ರೋಲ್ ಮಾಡಲು ಹೋಗಿದ್ದರು.
ಜನಾರ್ದನ ರೆಡ್ಡಿ ಕೊಲೆಗೆ ಸಂಚು ರೂಪಿಸಿದ್ದಾರೆ ಎನ್ನುವ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಡಿಸಿಎಂ, ಅವೆಲ್ಲಾ ಸುಳ್ಳು. ಕೋಟೆ ಕಟ್ಟಿಕೊಂಡು ಕುಳಿತಿದ್ದಾರೆ. ಯಾರು ಕೊಲೆ ಮಾಡುತ್ತಾರೆ? ನೂರು ಜನ ಸೆಕ್ಯುರಿಟಿ ಇಟ್ಕೊಂಡಿದ್ದಾರೆ ಅದೆಲ್ಲಾ ಡ್ರಾಮಾ. ಜನರಿಗೆ ಇವರಿಂದ ಭಯ ಇದೆ ಎಂದು ಜನಾರ್ದನ ರೆಡ್ಡಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಘಟನೆ ಆದಾಗ ಶ್ರೀರಾಮುಲು ಕೂಡ ಫೋನ್ ಮಾಡಿದರು. ಎಸ್ಪಿಗೆ ನಾನೇ ಮಾತಾಡಿದೆ. ನಮಗೂ ಜವಾಬ್ದಾರಿ ಇದೆ. ಒಬ್ಬ ಕೆಪಿಸಿಸಿ ಅಧ್ಯಕ್ಷ ಆಗಿಯೂ ಜವಾಬ್ದಾರಿ ಇದೆ ಎಂದರು. ನ್ಯಾಯಾಂಗ ತನಿಖೆಗೆ ಬಿಜೆಪಿ ಬೇಡಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಾನೂನು ತನ್ನ ಕೆಲಸ ಮಾಡಲಿದೆ ಎಂದರು. ಗುಂಡು ಹಾರಿಸಿದ್ದು ಸರಿನಾ ಎಂಬ ಪ್ರಶ್ನೆಗೆ ತನಿಖೆ ಆಗುತ್ತಾ ಇದೆ ಉತ್ತರ ಸಿಗಲಿದೆ. ಅದಕ್ಕೆ ನಾವು ತನಿಖಾ ವರದಿ ಬರಲಿ ಅಂದಿರೋದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ; ಸಸ್ಪೆಂಡ್ ಬೆನ್ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ರಾ IPS ಪವನ್ ನೆಜ್ಜೂರು? ಸ್ನೇಹಿತರು ಹೇಳಿದ್ದೇನು?



















