ಸಾಮಾಜಿಕ ಜಾಲತಾಣದಲ್ಲಿ ಗುರುತು ಮರೆಮಾಚಿಕೊಂಡು ಮಹಿಳಾ ಆಯೋಗದ ಅಧ್ಯಕ್ಷೆಗೆ ಅವಾಚ್ಯವಾಗಿ ನಿಂದಿಸಿದ್ದ ಯುವತಿಯನ್ನು ಬಂಧಿಸಲಾಗಿದೆ.
ಹಲಸೂರು ಗೇಟ್ ಪೊಲೀಸರು ಯುವತಿಯನ್ನು ಬಂಧಿಸಿದ್ದು, ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಗಿರೀಶ್ ಮಣ್ಣೆಣ್ಣವರ ಎಂಬಾತ ಮಹಿಳಾ ಆಯೋಗ ಹಾಗೂ ಆಯೋಗದ ಅಧ್ಯಕ್ಷರ ಕುರಿತು ಅವಾಚ್ಯವಾಗಿ ನಿಂದಿಸಿದ್ದ. ಮಹಿಳಾ ಆಯೋಗವನ್ನು ರೀಲ್ಸ್ ಆಯೋಗ ಎಂದಿದ್ದ. ದೆಹಲಿ ನಿರ್ಭಯಾ ಅತ್ಯಾಚಾರ ಪ್ರಕರಣ ಹಾಗೂ ಸೌಜನ್ಯ ಪ್ರಕರಣ ಉದಾಹರಿಸಿ ಹಲವಾರು ಆರೋಪಗಳನ್ನು ಮಾಡಿದ್ದ. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದರಿಂದ ಪ್ರಚೋದನೆಗೊಳಗಾದ ಯುವತಿಯೋರ್ವಳು ಮುಖ ಮರೆಮಾಚಿಕೊಂಡು ಮಹಿಳಾ ಆಯೋಗದ ಅಧ್ಯಕ್ಷರ ಬಗ್ಗೆ ಆ ವಿಡಿಯೋನಲ್ಲಿ ಕೆಟ್ಟದ್ದಾಗಿ ಕಮೆಂಟ್ ಮಾಡಿದ್ದಳು.
ಸಾರ್ವಜನಿಕ ಮಾನಹಾನಿಗೆ ಸಂಬಂಧಿಸಿದಂತೆ ಈ ಕುರಿತು ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಯುವತಿಯೋರ್ವಳನ್ನು ಬಂಧಿಸಿ, ತನಿಖೆ ನಡೆಸುತ್ತಿದ್ದಾರೆ. ಬಂಧಿತ ಯುವತಿ, ಪುರುಷನ ಹೆಸರಿನಲ್ಲಿ ಕಮೆಂಟ್ ಮಾಡಿ ಈಗ ಪೊಲೀಸರ ಅತಿಥಿಯಾಗಿದ್ದಾಳೆ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಯಾವುದೋ ಜೋಶ್ ನಲ್ಲಿ ಕಮೆಂಟ್ ಮಾಡುವವರಿಗೆ ಇದೊಂದು ಪಾಠವಾದಂತಿದೆ. ಯಾರೋ ವ್ಯಕ್ತಿ ಬಾಯಿ ಚಪಲಕ್ಕೆ, ಪ್ರಚಾರದ ಚಪಲಕ್ಕೆ ಕೆಟ್ಟದಾಗಿ ಏನೇನೋ ನಾಲಿಗೆ ಹರಿ ಬಿಟ್ಟು ಮಾತನಾಡಿದರೆ, ಅದರಿಂದ ಪ್ರಚೋದನೆಗೊಳಪಟ್ಟು ಮಾತನಾಡುವವರಿಗೆ ಶಿಕ್ಷೆ ತಪ್ಪಿದ್ದಲ್ಲ. ಹೀಗಾಗಿ ಪ್ರಚಾರದ ಗೀಳಿನ ಹಿಂದೆ ಹೋಗವರ ಬೆನ್ನು ಹತ್ತುವುದು ಎಷ್ಟು ಸೂಕ್ತ ಎಂಬುವುದನ್ನು ಸಾಮಾಜಿಕ ಜಾಲತಾಣ ಬಳಕೆದಾರರು ತಿಳಿದುಕೊಳ್ಳಬೇಕಿದೆ.