ಬೆಂಗಳೂರು : ನಟಿ ತಾರಾ ಅನುರಾಧ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿ ಮಾಡಿ, ದಿವಂಗತ ನಟಿ ಸರೋಜಾದೇವಿ ಹೆಸರಿನಲ್ಲಿ ಪ್ರಶಸ್ತಿ ಸ್ಥಾಪಿಸಿ ಎಂದು ಮನವಿ ನೀಡಿದ್ದಾರೆ.
ಇತ್ತೀಚೆಗೆ ‘ಅಭಿನಯ ಸರಸ್ವತಿ’ ಬಿ. ಸರೋಜಾದೇವಿ ಇಹಲೋಕ ತ್ಯಜಿಸಿದ್ದರು. ಹಾಗಾಗಿ, ಸಿನಿಮಾದರಿಗೆ ರಾಜ್ಯ ಸರ್ಕಾರ ನೀಡುವ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಒಂದಕ್ಕೆ ಬಿ. ಸರೋಜಾದೇವಿ ಅವರ ಹೆಸರು ಇಡಬೇಕು ಎಂದು ಸಿಎಂ ಸಿದ್ದರಾಮಯ್ಯಗೆ ತಾರಾ ಮನವಿ ಪತ್ರ ನೀಡಿದ್ದಾರೆ.
ತಾರಾ ಪತ್ರದಲ್ಲಿ ಏನಿದೆ?
“ಈಗಾಗಲೇ ಕನ್ನಡ ಚಿತ್ರರಂಗದ ಪ್ರತಿಭೆಗಳಿಗೆ ರಾಜ್ಯ ಪ್ರಶಸ್ತಿಗಳನ್ನು ಚಿತ್ರರಂಗದ ಕೆಲವು ಮಹನೀಯರ ಹೆಸರನ್ನ ಇಟ್ಟು ಸರ್ಕಾರ ಗೌರವಿಸುತ್ತಿದ್ದೀರಿ. ಈಗ ಹೊಸತಾಗಿ ಅಭಿನಯ ಶಾರದೆ ಶ್ರೀಮತಿ ಜಯಂತಿ ಅಮ್ಮನವರ ಹೆಸರನ್ನು ಇಟ್ಟಿರುವುದಾಗಿ ತಿಳಿದು ಅತ್ಯಂತ ಸಂತೋಷವೆನಿಸಿತು ಅದಕ್ಕಾಗಿ ತಮ್ಮನ್ನು ಅಭಿನಂದಿಸುತ್ತೇನೆ” ಎಂದು ತಾರಾ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
“ನನ್ನದೊಂದು ಸಣ್ಣ ಮನವಿ ಏನೆಂದರೆ, ಪಂಚಭಾಷಾ ತಾರೆ ಪದ್ಮಶ್ರೀ, ಪದ್ಮಭೂಷಣ ಶ್ರೀಮತಿ ಬಿ. ಸರೋಜಾ ದೇವಿ ಅವರ ಹೆಸರಲ್ಲಿಯೂ ಕೂಡ ಈ ರಾಜ್ಯ ಪ್ರಶಸ್ತಿಗಳಲ್ಲಿ ಚಲನಚಿತ್ರ ರಂಗದಲ್ಲಿ ಸಾಧನೆಗೈದು, ಹಲವಾರು ವರ್ಷಗಳ ಸೇವೆ ಸಲ್ಲಿಸಿದ್ದು, ಅವರಿಂದ ಚಿತ್ರರಂಗಕ್ಕೆ ಹೆಸರಾಗಿದ್ದು, ಆದರೂ ಸಹ ಅವರು ಸಂಕಷ್ಟದಲ್ಲಿದ್ದರೆ ಅಂಥ ಕಲಾವಿದರನ್ನು ಸರ್ಕಾರ ಗುರುತಿಸಿ ಈ ತಾಯಿಯ ಹೆಸರಲ್ಲಿ ತಾವು ಪ್ರಶಸ್ತಿ ನೀಡಬೇಕೆಂದು ಕಳಕಳಿಯಿಂದ ಮನವಿ ಮಾಡುತ್ತೇನೆ” ಎಂದು ನಟಿ ತಾರಾ ಅನುರಾಧ ಮನವಿ ಮಾಡಿದ್ದಾರೆ.