ಮಂಡ್ಯ : ತವರು ಮನೆಗೆ ಹೋದ ಪತ್ನಿ ಹಾಗೂ ಮಗುವಿನ ಮತಾಂತರಕ್ಕೆ ಯತ್ನಿಸಿದ್ದಾರೆಂದು ಆರೋಪಿಸಿ ಪತಿ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದಾರೆ.
ಜಿಲ್ಲೆಯ ಮಂಡ್ಯದ ಮದ್ದೂರಿನಲ್ಲಿ ಈ ಘಟನೆ ನಡೆದಿದೆ. ಕಳೆದ 7 ವರ್ಷಗಳ ಹಿಂದೆ ವೆಂಕಟೇಶನ್ ಹಾಗೂ ಆರೀಫ್ ಪ್ರೀತಿಸಿ ಮದುವೆಯಾಗಿದ್ದರು. ಮದ್ದೂರು ಮೂಲದ ವೆಂಕಟೇಶನ್ ಹಾಗೂ ಸೋಮವಾರ ಪೇಟೆಯ ಅಬ್ಬೂರು ಗ್ರಾಮದ ಆರೀಫ್ ಬೇರೆ ಬೇರೆ ಧರ್ಮದವರಾದರೂ ಪ್ರೀತಿಸಿ ಮದುವೆಯಾಗಿದ್ದರು. ಮದುವೆಯಾದ ನಂತರ ಆರೀಫ್, ಖುಷಿ ಎಂದು ತನ್ನ ಹೆಸರು ಬದಲಾಯಿಸಿಕೊಂಡಿದ್ದರು. ಆನಂತರ ಇಬ್ಬರೂ ಪರಸ್ಪರ ಅನ್ಯೋನ್ಯದಿಂದ ವಾಸಿಸುತ್ತಿದ್ದರು.
ಆದರೆ, ಇತ್ತೀಚೆಗೆ ತಾಯಿಯ ಆರೋಗ್ಯ ಸರಿ ಇಲ್ಲ ಎಂದು ಖುಷಿ ತನ್ನ ಮಗುವಿನೊಂದಿಗೆ ತವರು ಮನೆಗೆ ಹೋಗಿದ್ದರು. ಆನಂತರ ಗಂಡನ ಮನೆಗೆ ತಾಯಿ ಹಾಗೂ ಮಗನನ್ನು ಕಳಿಸಿಲ್ಲ. ಇತ್ತೀಚೆಗೆ ಗಂಡನಿಗೆ ಕರೆ ಮಾಡಿದ್ದ ಖುಷಿ, ಬಂಧನದಲ್ಲಿಟ್ಟಿರುವ ಬಗ್ಗೆ ಮಾಹಿತಿ ನೀಡಿದ್ದರು. ಅಲ್ಲದೇ, ಒತ್ತಾಯಪೂರ್ವಕವಾಗಿ ಇಸ್ಲಾಂಗೆ ಮತಾಂತರ ಆಗುವಂತೆ ಪೀಡಿಸುತ್ತಿದ್ದಾರೆ ಎಂದು ಆರೋಪಿಸಿದ್ದರು ಎನ್ನಲಾಗಿದೆ. ಮಗುವಿಗೆ ಮುಂಜಿ ಮಾಡಲು ಕೂಡ ತಯಾರಿ ನಡೆಸಿರುವುದಾಗಿ ಪತಿಗೆ ಮಾಹಿತಿ ನೀಡಿದ್ದಾಳೆ. ಹೀಗಾಗಿ ಪತಿ ವೆಂಕಟೇಶನ್ ಮದ್ದೂರು ಪೊಲೀಸರು ದೂರು ನೀಡಿದ್ದಾರೆ. ಆದರೆ, ದೂರು ಕೊಟ್ಟರೂ ಪೊಲೀಸರು ದೂರು ದಾಖಲು ಮಾಡಿಳ್ಳುತ್ತಿಲ್ಲ ಎಂದು ಆರೋಪಿಸಿ ಮದ್ದೂರು ಪೊಲೀಸ್ ಠಾಣೆ ಮುಂದೆ ವೆಂಕಟೇಶನ್ ಧರಣಿ ಕುಳಿತಿದ್ದಾರೆ. ಸದ್ಯ ವೆಂಕಟೇಶನ್ ಗೆ ಹಿಂದು ಸಂಘಟನೆಗಳು ಪ್ರತಿಭಟನೆಗೆ ಸಾಥ್ ನೀಡಿವೆ.