ನವದೆಹಲಿ : ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರ ಮೇಲೆ ಬುಧವಾರ ಜಮ್ಮುವಿನಲ್ಲಿ ನಡೆದ ವಿಫಲ ಹತ್ಯೆ ಯತ್ನವು ಭಾರೀ ಸಂಚಲನಕ್ಕೆ ಕಾರಣವಾಗಿದೆ. ‘ಝೆಡ್ ಪ್ಲಸ್’ (Z+) ಭದ್ರತೆಯಿದ್ದರೂ, ದುಷ್ಕರ್ಮಿಯ ಗುಂಡಿನ ದಾಳಿಯಿಂದ ಫಾರೂಕ್ ಅಬ್ದುಲ್ಲಾ ಅವರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಈ ಕೃತ್ಯವೆಸಗಿದ ಆರೋಪಿಯನ್ನು ಬಂಧಿಸಲಾಗಿದ್ದು, ಆತನ ಸ್ಫೋಟಕ ಹೇಳಿಕೆಗಳು ಪೊಲೀಸರನ್ನು ಬೆಚ್ಚಿಬೀಳಿಸಿವೆ.

“20 ವರ್ಷಗಳಿಂದ ಈ ಕ್ಷಣಕ್ಕಾಗಿ ಕಾಯುತ್ತಿದ್ದೆ”
ಹತ್ಯೆಗೆ ಯತ್ನಿಸಿದ 65 ವರ್ಷದ ಆರೋಪಿ ಕಮಲ್ ಸಿಂಗ್ ಜಮ್ವಾಲ್, ತಾನು ಮಾಡಿದ ಕೃತ್ಯದ ಬಗ್ಗೆ ಯಾವುದೇ ಪಶ್ಚಾತ್ತಾಪ ಹೊಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ವಿಚಾರಣೆ ವೇಳೆ ಆತ, ತಾನು ಫಾರೂಕ್ ಅಬ್ದುಲ್ಲಾ ಅವರನ್ನು ಕೊಲ್ಲಲು ಕಳೆದ 20 ವರ್ಷಗಳಿಂದ ಕಾಯುತ್ತಿದ್ದೆ ಎಂದು ಹೇಳಿದ್ದಾನೆ. ಇದೊಂದು ‘ವೈಯಕ್ತಿಕ ಸೇಡು’ ಎಂದು ಬಣ್ಣಿಸಿರುವ ಆರೋಪಿ, “ಇಂದು ನನಗೆ ಅವರನ್ನು ಕೊಲ್ಲುವ ಅವಕಾಶ ಸಿಕ್ಕಿತ್ತು. ಆದರೂ ಅವರು ಬದುಕುಳಿದರು. ಇದರಲ್ಲಿ ನನ್ನದೇ ಆದ ಗುರಿಯಿತ್ತು” ಎಂದು ನಿರ್ಭಯವಾಗಿ ಉತ್ತರಿಸಿದ್ದಾನೆ. ಬಂಧನದ ವೇಳೆ ಮದ್ಯದ ಅಮಲಿನಲ್ಲಿದ್ದ ಆರೋಪಿಗೆ ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಆತ ‘ಜಾಗರಣ್ ಮಂಚ್’ ಎಂಬ ಅಪರಿಚಿತ ಸಂಘಟನೆಯೊಂದರ ಅಧ್ಯಕ್ಷನೆಂದು ಹೇಳಿಕೊಂಡಿದ್ದು, ತನಗೆ ಸೇರಿದ ಮೂರು ಅಂಗಡಿಗಳ ಬಾಡಿಗೆಯಿಂದ ಜೀವನ ಸಾಗಿಸುತ್ತಿರುವುದಾಗಿ ತಿಳಿಸಿದ್ದಾನೆ.
ಮದುವೆ ಸಮಾರಂಭದಲ್ಲಿ ಹೈಡ್ರಾಮಾ
ಜಮ್ಮುವಿನಲ್ಲಿ ನಡೆದ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಮುಖಂಡ ಬಿ.ಎಸ್. ಚೌಹಾಣ್ ಅವರ ಪುತ್ರಿಯ ವಿವಾಹ ಸಮಾರಂಭದಲ್ಲಿ ಈ ಘಟನೆ ನಡೆದಿದೆ. ಬಿಗಿ ಭದ್ರತೆಯ ನಡುವೆಯೂ ಆರೋಪಿ ಜಮ್ವಾಲ್, ಫಾರೂಕ್ ಅಬ್ದುಲ್ಲಾ ಅವರ ತೀರಾ ಸಮೀಪಕ್ಕೆ ತೆರಳಿ ತನ್ನ ಬಳಿಯಿದ್ದ ಪರವಾನಗಿ ಹೊಂದಿದ ಪಿಸ್ತೂಲ್ನಿಂದ ಗುಂಡು ಹಾರಿಸಿದ್ದಾನೆ. ಆದರೆ, ಗುರಿ ತಪ್ಪಿದ ಕಾರಣ ಅಬ್ದುಲ್ಲಾ ಅವರು ಪಾರಾಗಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ರಾಷ್ಟ್ರೀಯ ಭದ್ರತಾ ಪಡೆಯ (ಎನ್ಎಸ್ಜಿ) ಕಮಾಂಡೋಗಳು ಆತನನ್ನು ನಿಯಂತ್ರಿಸಿ ಪೊಲೀಸರಿಗೊಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೃತ್ಯಕ್ಕೆ ಬಳಸಲಾದ ಪಿಸ್ತೂಲನ್ನು ವಶಪಡಿಸಿಕೊಳ್ಳಲಾಗಿದೆ.
ಭದ್ರತಾ ಲೋಪದ ಬಗ್ಗೆ ಒಮರ್ ಅಬ್ದುಲ್ಲಾ ಕಳವಳ
ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ತಮ್ಮ ತಂದೆ ಪ್ರಾಣಾಪಾಯದಿಂದ ಪಾರಾಗಿದ್ದಕ್ಕೆ ದೇವರ ಕೃಪೆ ಕಾರಣ ಎಂದಿದ್ದಾರೆ. “ಲೋಡ್ ಮಾಡಿದ ಪಿಸ್ತೂಲ್ನೊಂದಿಗೆ ವ್ಯಕ್ತಿಯೊಬ್ಬ ಝೆಡ್ ಪ್ಲಸ್ ಭದ್ರತೆಯಿರುವ ಮಾಜಿ ಮುಖ್ಯಮಂತ್ರಿಯ ಇಷ್ಟು ಹತ್ತಿರ ಬಂದು ಗುಂಡು ಹಾರಿಸಲು ಹೇಗೆ ಸಾಧ್ಯವಾಯಿತು? ಇದೊಂದು ಭಾರಿ ಭದ್ರತಾ ಲೋಪವಾಗಿದ್ದು, ಈ ಬಗ್ಗೆ ಹಲವು ಪ್ರಶ್ನೆಗಳು ಮೂಡಿವೆ” ಎಂದು ಅವರು ತಮ್ಮ ‘ಎಕ್ಸ್’ ಖಾತೆಯಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ. ಸಮಾರಂಭದಲ್ಲಿ ಉಪಸ್ಥಿತರಿದ್ದ ಉಪಮುಖ್ಯಮಂತ್ರಿ ಸುರೀಂದರ್ ಚೌಧರಿ ಮತ್ತು ಸಿಎಂ ಸಲಹೆಗಾರ ನಾಸಿರ್ ಸೋಗಾಮಿ ಕೂಡ ಇದೊಂದು ಆಘಾತಕಾರಿ ಘಟನೆ ಎಂದಿದ್ದು, ಅದೃಷ್ಟವಶಾತ್ ಯಾರಿಗೂ ಗಾಯಗಳಾಗಿಲ್ಲ ಎಂದು ನಿಟ್ಟುಸಿರು ಬಿಟ್ಟಿದ್ದಾರೆ.
ಇದನ್ನೂ ಓದಿ : ಜಮ್ಮು ಕಾಶ್ಮೀರದ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಮೇಲೆ ಫೈರಿಂಗ್.. ಶಾಕಿಂಗ್ ವಿಡಿಯೋ ವೈರಲ್!



















