ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್ ಜೈಲು ಸೇರಿದ್ದಾರೆ. ಈಗ ಅವರು ಸೇರಿರುವ ಜೈಲಿನ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ದರ್ಶನ್ ಇದ್ದ ಜೈಲಿನಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವ ಕುರಿತು ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಅಧಿಕಾರಿಗಳು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ದಾಳಿ ನಡೆಸಿದ್ದಾರೆ. ಶನಿವಾರ ಬೆಳಗಿನ ಜಾವ ದಿಢೀರ್ ಎಂದು ಅಧಿಕಾರಿಗಳು ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದಾರೆ.

ಡ್ರಗ್ಸ್ ಮಾರಾಟ ಮತ್ತು ಭಯೋತ್ಪಾದಕ ಪ್ರಕರಣಗಳಲ್ಲಿ ಬಂಧಿತರಾಗಿರುವ ಶಂಕಿತ ಉಗ್ರರ ಸಭೆಗಳು ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಗಳು ನಡೆದಿರುವ ಕುರಿತು ಸಿಸಿಬಿ ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿತ್ತು. ಈ ಹಿನ್ನೆಲೆ ಜೈಲಿನ ಮೇಲೆ ಶನಿವಾರ ನಸುಕಿನ 4.30 ಗಂಟೆಗೆ ಡಿಸಿಪಿ ಅಬ್ದುಲ್ ಅಹದ್ ನೇತೃತ್ವದಲ್ಲಿ ನಾಲ್ವರು ಎಸಿಪಿಗಳನ್ನೊಳಗೊಂಡ 100ಕ್ಕೂ ಅಧಿಕ ಪೊಲೀಸರು ಹಠಾತ್ ಆಗಿ ದಾಳಿ ನಡೆಸಿದ್ದಾರೆ.
ಶಂಕಿತ ಉಗ್ರರು, ಸಜಾ ಬಂಧಿಗಳು ಹಾಗೂ ವಿಚಾರಣಾಧೀನ ಕೈದಿಗಳ ಬ್ಯಾರಕ್ ಗಳನ್ನು ನಾಲ್ಕು ಗಂಟೆಗಳ ಕಾಲ ಸಿಸಿಬಿ ಅಧಿಕಾರಿಗಳು ದಾಳಿ ಪರಿಶೀಲನೆ ನಡೆಸಿದ್ದಾರೆ. ಆದರೆ ದಾಳಿ ವೇಳೆ ಮಾರಕಾಸ್ತ್ರ ಹಾಗೂ ಮೊಬೈಲ್ ಗಳು ಪತ್ತೆಯಾಗಿಲ್ಲ ಎನ್ನಲಾಗಿದೆ.
ಜೈಲಿನ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ ಸಂದರ್ಭದಲ್ಲಿ ದರ್ಶನ್ ತಮ್ಮ ಸೆಲ್ ನಲ್ಲಿ ಗಾಢ ನಿದ್ರೆಯಲ್ಲಿದ್ದರು ಎನ್ನಲಾಗಿದೆ. ದರ್ಶನ್ ತಮ್ಮ ಸೆಲ್ ನಲ್ಲಿ ಬೆಡ್ ಶೀಟ್ ಹಾಸಿಕೊಂಡು ಸಾಧಾರಾಣ ವಿಚಾರಣಾ ಕೈದಿಯಂತೆ ಮಲಗಿದ್ದರು. ದಾಳಿ ವೇಳೆ ಅವರ ಸೆಲ್ ಗೂ ತೆರಳಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಆದರೆ ಆ ವೇಳೆ ದರ್ಶನ್ ನಿದ್ರೆಯಲ್ಲಿದ್ದ ಕಾರಣಕ್ಕೆ ಅವರನ್ನು ವಿಚಾರಣೆ ನಡೆಸಲಿಲ್ಲ. ಸೆಲ್ ನಲ್ಲಿ ನಿಯಮ ಬಾಹಿರ ವ್ಯವಸ್ಥೆ ಅಥವಾ ವಸ್ತು ಗಳು ಪತ್ತೆಯಾಗಲಿಲ್ಲ. ಹೀಗಾಗಿ ನಿದ್ರೆಯಲ್ಲಿದ್ದ ದರ್ಶನ್ ಗೆ ಅನಗತ್ಯ ತೊಂದರೆ ಕೊಡುವುದು ಬೇಡವೆಂದು ಸಿಬ್ಬಂದಿಗೆ ಅಧಿಕಾರಿಗಳು ಹೇಳಿದ್ದಾರೆ ಎನ್ನಲಾಗಿದೆ.