ನವದೆಹಲಿ: ಗಗನಯಾನ ಯೋಜನೆಯ ಅಂಗವಾಗಿ ಭಾರತೀಯ ಗಗನಯಾತ್ರಿ, ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರು(Shubhanshu Shukla) ಮೇ 29ರಂದು ನಭಕ್ಕೆ ನೆಗೆಯಲು ಸಿದ್ಧರಾಗಿದ್ದಾರೆ. ಅಮೆರಿಕದ ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಉಡ್ಡಯನವಾಗಲಿರುವ ಸ್ಪೇಸ್ಎಕ್ಸ್ ಫಾಲ್ಕನ್ ರಾಕೆಟ್ ಮೂಲಕ ಸಂಚರಿಸಿ, ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ತಲುಪಲಿದ್ದಾರೆ. ಇದು ಇಸ್ರೋ, ನಾಸಾ ಹಾಗೂ ಇಎಸ್ಎ ಸಂಸ್ಥೆಗಳ ಜಂಟಿ ಗಗನಯಾನ ಯೋಜನೆಯಾಗಿದೆ. ಒಟ್ಟು 14 ದಿನಗಳ ಯೋಜನೆ ಇದಾಗಿದ್ದು, ಇದರಲ್ಲಿ ಅಮೆರಿಕ, ಪೋಲೆಂಡ್ ಮತ್ತು ಹಂಗೇರಿಯ ಗಗನಯಾತ್ರಿಗಳು ಭಾಗವಾಗಿದ್ದಾರೆ.
ಮೇ 29ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ತಲುಪಲಿರುವ ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಕರ್ನಾಟಕದ 4 ಪ್ರಯೋಗಗಳು ಸೇರಿದಂತೆ ಒಟ್ಟು 7 ಪ್ರಯೋಗಗಳನ್ನು ಐಎಸ್ಎಸ್ನಲ್ಲಿ ಮಾಡಲಿದ್ದಾರೆ. ಈ ಮೂಲಕ ಹಲವು ರೀತಿಯ ಅಧ್ಯಯನಗಳನ್ನು ಕೈಗೊಳ್ಳಲಿದ್ದಾರೆ ಎಂದು ಮೂಲಗಳು ಹೇಳಿವೆ.
ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ)ಯ ಸಹಯೋಗದೊಂದಿಗೆ 2 ಪ್ರತ್ಯೇಕ ಪ್ರಯೋಗಗಳನ್ನು ಶುಭಾಂಶು ಶುಕ್ಲಾ ಕೈಗೊಳ್ಳಲಿದ್ದಾರೆ. ಆ ಪೈಕಿ ಮೊದಲನೆಯದು, ಬಾಹ್ಯಾಕಾಶದಲ್ಲಿ ವಾಟರ್ ಬಿಯರ್ಗಳೆಂಬ ಸೂಕ್ಷ್ಮ ಜೀವಿಗಳ ಬದುಕುಳಿಯುವಿಕೆ ಮತ್ತು ಸಂತಾನೋತ್ಪತ್ತಿಯನ್ನು ಅಧ್ಯಯನ ನಡೆಸುವುದು. ಟಾರ್ಡಿಗ್ರೇಡ್ ಎಂದು ಕರೆಯಲ್ಪಡುವ ಈ ನೀರಿನ ಕರಡಿಗಳು ಸೂಕ್ಷ್ಮ ಗುರುತ್ವಾಕರ್ಷಣೆಗೆ ಹೇಗೆ ಹೊಂದಿಕೊಳ್ಳುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ಇದಾಗಿದೆ. ಎಂಥದ್ದೇ ಕಠಿಣ ವಾತಾವರಣಕ್ಕೂ ಒಗ್ಗಿಕೊಂಡು ಬದುಕುವಂಥ ವಿಶೇಷ ಸಾಮರ್ಥ್ಯ ಈ ಟಾರ್ಡಿಗ್ರೇಡ್ ಗಳಿವೆ. ಇವುಗಳು ಬಾಹ್ಯಾಕಾಶದಲ್ಲಿ ಹೇಗೆ ಬಾಳುತ್ತವೆ, ಬೆಳೆಯುತ್ತವೆ, ಮತ್ತೆ ಹುಟ್ಟುತ್ತವೆ ಎಂಬ ಬಗ್ಗೆ ಅಧ್ಯಯನ ಕೈಗೊಳ್ಳುವುದು ವಿಜ್ಞಾನಿಗಳ ಉದ್ದೇಶವಾಗಿದೆ. ಇದಲ್ಲದೇ, ಬಾಹ್ಯಾಕಾಶದಲ್ಲಿ ಎಲೆಕ್ಟ್ರಾನಿಕ್ ಪರದೆಗಳಲ್ಲಿ ಮಾನವನ ಸಂವಾದ ವಿಶ್ಲೇಷಿಸುವ ಅಧ್ಯಯನವನ್ನೂ ಶುಭಾಂಶು ಶುಕ್ಲಾ ಕೈಗೊಳ್ಳಲಿದ್ದಾರೆ.
ಇದಲ್ಲದೇ ಬೆಂಗಳೂರಿನ ಇನ್ಸ್ಟೆಮ್ ಸಂಸ್ಥೆಯ ಸಹಯೋಗದೊಂದಿಗೆ ಸಪ್ಲಿಮೆಂಟ್ಗಳು ಅಂದರೆ ಪೂರಕ ಆಹಾರಗಳು ಬಾಹ್ಯಾಕಾಶದಲ್ಲಿ ಮಾನವನ ಮಾಂಸಖಂಡ ಬೆಳವಣಿಗೆಯ ಮೇಲೆ ಬೀರುವ ಪರಿಣಾಮ ಹಾಗೂ ಧಾರವಾಡದ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಬಾಹ್ಯಾಕಾಶದಲ್ಲಿ ತರಕಾರಿ ಬೀಜಗಳ ಮೊಳಕೆಗಳ ಬಗ್ಗೆಯೂ ಅಧ್ಯಯನ ನಡೆಸಲಿದ್ದಾರೆ. ಇದರ ಜೊತೆಗೆ ದೆಹಲಿಯ ಎನ್ಐಪಿಜಿಆರ್ನ ಸೈನೋ ಬ್ಯಾಕ್ಟೀರಿಯಾಗಳ ಬೆಳವಣಿಗೆ ಹಾಗೂ ತಿನ್ನಬಲ್ಲ ಹಾವಸೆ ಸಸ್ಯಗಳ ಅಧ್ಯಯನ ಹಾಗೂ ಕೇರಳದ ಐಐಎಸ್ಟಿ ಹಾಗೂ ಕೃಷಿ ವಿವಿ ಸಯಯೋಗದಲ್ಲಿ ಆಹಾರ ಬೆಳೆಗಳ ಬಗ್ಗೆಯೂ ಅಧ್ಯಯನ ಕೈಗೊಳ್ಳಲಿದ್ದಾರೆ.