ನವದೆಹಲಿ: ಏಷ್ಯಾ ಕಪ್ 2025ರ ಭಾರತ-ಪಾಕಿಸ್ತಾನ ಪಂದ್ಯದ ನಂತರ, ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಯೂಸುಫ್ ಅವರು ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಅವರ ಬಗ್ಗೆ ನೀಡಿದ ಅವಹೇಳನಕಾರಿ ಹೇಳಿಕೆಯು ದೊಡ್ಡ ವಿವಾದವನ್ನು ಸೃಷ್ಟಿಸಿದೆ. ಟಿವಿ ಚರ್ಚೆಯೊಂದರಲ್ಲಿ ಅವರು ಸೂರ್ಯಕುಮಾರ್ ಅವರ ಹೆಸರನ್ನು ಉದ್ದೇಶಪೂರ್ವಕವಾಗಿ ತಪ್ಪಾಗಿ ಉಚ್ಚರಿಸಿ ‘ಹಂದಿ’ ಎಂದು ಕರೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಭಾರತದ ವಿರುದ್ಧ ಪಾಕಿಸ್ತಾನ ಹೀನಾಯವಾಗಿ ಸೋತ ನಂತರ, ಪಾಕಿಸ್ತಾನದ ಟಿವಿ ಚಾನೆಲ್ ಒಂದರಲ್ಲಿ ನಡೆದ ಚರ್ಚೆಯಲ್ಲಿ ಮೊಹಮ್ಮದ್ ಯೂಸುಫ್ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ, ನಿರೂಪಕರು ಸೂರ್ಯಕುಮಾರ್ ಯಾದವ್ ಅವರ ಹೆಸರನ್ನು ಸರಿಯಾಗಿ ಉಚ್ಚರಿಸಲು ಪ್ರಯತ್ನಿಸಿದರೂ, ಯೂಸುಫ್ ಪದೇ ಪದೇ ಅವರ ಹೆಸರನ್ನು ತಪ್ಪಾಗಿ ಉಚ್ಚರಿಸಿ, ಅಸಭ್ಯ ಪದವನ್ನು ಬಳಸಿದರು. ಅಷ್ಟಕ್ಕೆ ಸುಮ್ಮನಾಗದ ಅವರು, ಭಾರತ ತಂಡದ ಇತರ ಆಟಗಾರರನ್ನೂ ಟೀಕಿಸಿದರು. ಈ ವಿಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಕ್ರಿಕೆಟ್ ಅಭಿಮಾನಿಗಳು ಯೂಸುಫ್ ಅವರ ಕ್ರೀಡಾಸ್ಫೂರ್ತಿ ಇಲ್ಲದ ವರ್ತನೆಯನ್ನು ತೀವ್ರವಾಗಿ ಖಂಡಿಸಿದರು.
“ಯೂಸುಫ್ ಸಮರ್ಥನೆ ಮತ್ತು ಇರ್ಫಾನ್ ಪಠಾಣ್ ಪ್ರಸ್ತಾಪ”
ತಮ್ಮ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದಂತೆ, ಮೊಹಮ್ಮದ್ ಯೂಸುಫ್ ತಮ್ಮನ್ನು ಸಮರ್ಥಿಸಿಕೊಳ್ಳಲು ಮುಂದಾದರು. “ದೇಶಕ್ಕಾಗಿ ಉತ್ಸಾಹ ಮತ್ತು ಗೌರವದಿಂದ ಆಡುವ ಯಾವುದೇ ಕ್ರೀಡಾಪಟುವಿಗೆ ಅಗೌರವ ತೋರುವ ಉದ್ದೇಶ ನನಗಿರಲಿಲ್ಲ,” ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ಆದರೆ, ತಮ್ಮ ಸಮರ್ಥನೆಯಲ್ಲಿ ಅವರು ಭಾರತದ ಮಾಜಿ ವೇಗಿ ಇರ್ಫಾನ್ ಪಠಾಣ್ ಅವರನ್ನು ಎಳೆದು ತಂದರು. “ಹಿಂದೊಮ್ಮೆ ಇರ್ಫಾನ್ ಪಠಾಣ್ ಅವರು ಶಾಹಿದ್ ಅಫ್ರಿದಿ ಅವರನ್ನು ‘ನಾಯಿಯಂತೆ ಬೊಗಳುತ್ತಿದ್ದಾರೆ’ ಎಂದು ಹೇಳಿದಾಗ ಭಾರತೀಯ ಮಾಧ್ಯಮಗಳು ಮತ್ತು ಜನರು ಅವರನ್ನು ಏಕೆ ಹೊಗಳಿದ್ದರು? ಗೌರವ ಮತ್ತು ಘನತೆಯ ಬಗ್ಗೆ ಮಾತನಾಡುವ ಪ್ರತಿಯೊಬ್ಬರೂ ಅದನ್ನು ತಿರಸ್ಕರಿಸಬೇಕಾಗಿರಲಿಲ್ಲವೇ?” ಎಂದು ಅವರು ತಮ್ಮ ಎಕ್ಸ್ ಖಾತೆಯಲ್ಲಿ ಪ್ರಶ್ನಿಸುವ ಮೂಲಕ ವಿವಾದವನ್ನು ಮತ್ತೊಂದು ದಿಕ್ಕಿಗೆ ತಿರುಗಿಸಲು ಪ್ರಯತ್ನಿಸಿದರು.
“ವೈರಲ್ ಆದ ಯೂಸುಫ್ ಹಳೆಯ ವಿವಾಹದ ಚಿತ್ರ”
ಯೂಸುಫ್ ಅವರ ಈ ವಿವಾದಾತ್ಮಕ ಹೇಳಿಕೆ ಮತ್ತು ಸಮರ್ಥನೆಯ ಬೆನ್ನಲ್ಲೇ, ಸಾಮಾಜಿಕ ಜಾಲತಾಣಗಳಲ್ಲಿ ಅವರ ಹಳೆಯ ಕ್ರಿಶ್ಚಿಯನ್ ವಿವಾಹದ ಚಿತ್ರಗಳು ವೈರಲ್ ಆಗಲು ಪ್ರಾರಂಭಿಸಿದವು. ಮೊಹಮ್ಮದ್ ಯೂಸುಫ್ ಅವರು ಇಸ್ಲಾಂಗೆ ಮತಾಂತರಗೊಳ್ಳುವ ಮೊದಲು ಯೂಸುಫ್ ಯೋಹಾನ ಎಂಬ ಹೆಸರಿನಿಂದ ಕ್ರಿಶ್ಚಿಯನ್ ಆಗಿದ್ದರು. ಅವರು ತಮ್ಮ ಪತ್ನಿ ತಾನಿಯಾ ಅವರನ್ನು ವಿವಾಹವಾಗಿದ್ದರು. ನಂತರ, 2005ರಲ್ಲಿ ಈ ದಂಪತಿಗಳು ಇಸ್ಲಾಂಗೆ ಮತಾಂತರಗೊಂಡು, ತಮ್ಮ ಹೆಸರುಗಳನ್ನು ಮೊಹಮ್ಮದ್ ಯೂಸುಫ್ ಮತ್ತು ಫಾತಿಮಾ ಎಂದು ಬದಲಾಯಿಸಿಕೊಂಡರು.
ಪಾಕಿಸ್ತಾನದ ಮಾಜಿ ಆಟಗಾರ ಸಯೀದ್ ಅನ್ವರ್ ಅವರನ್ನೊಳಗೊಂಡ ‘ತಬ್ಲೀಘಿ ಜಮಾತ್’ನ ಧಾರ್ಮಿಕ ಪ್ರವಚನಗಳಿಂದ ಪ್ರೇರಿತನಾಗಿ, ತಾನು ಸ್ವಇಚ್ಛೆಯಿಂದ ಮತಾಂತರಗೊಂಡಿರುವುದಾಗಿ ಯೂಸುಫ್ ಈ ಹಿಂದೆ ಹೇಳಿದ್ದರು. ಇದೀಗ, ಅವರ ವಿವಾದಾತ್ಮಕ ಹೇಳಿಕೆಯ ಹಿನ್ನೆಲೆಯಲ್ಲಿ, ನೆಟ್ಟಿಗರು ಅವರ ವೈಯಕ್ತಿಕ ಜೀವನದ ಈ ಘಟನೆಯನ್ನು ಮತ್ತೆ ಮುನ್ನೆಲೆಗೆ ತಂದು, ಅವರ ವರ್ತನೆಯನ್ನು ಟೀಕಿಸುತ್ತಿದ್ದಾರೆ.



















