ಬೆಂಗಳೂರು: ದಕ್ಷಿಣ ಭಾರತದ ನಟ, ನಿರ್ದೇಶಕ ಮತ್ತು ನಿರ್ಮಾಪಕ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಈಗ ಕ್ಯಾಪ್ ತೊಟ್ಟಿದ್ದಾರೆ. ಸೀತಾ ಪಯಣ ಸಿನಿಮಾ ಮೂಲಕ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಕಥೆ, ಚಿತ್ರಕಥೆ ಬರೆದು, ತಮ್ಮದೇ ಹೋಮ್ ಬ್ಯಾನರ್ ಶ್ರೀ ರಾಮ್ ಫಿಲ್ಮ್ಸ್ ಇಂಟರ್ನ್ಯಾಷನಲ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.
ಸೀತಾ ಪಯಣದಲ್ಲಿ ಉಪೇಂದ್ರ ಅಣ್ಣನ ಮಗ ನಿರಂಜನ್ ನಾಯಕನಾಗಿ ನಟಿಸಿದರೆ, ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ನಾಯಕಿಯಾಗಿ ನಟಿಸಿದ್ದಾರೆ. ಈ ಹಿಂದೆ ‘ಜೈ ಹಿಂದ್’ ಮತ್ತು ‘ಅಭಿಮನ್ಯು’ ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದ ಅರ್ಜುನ್ ಸರ್ಜಾ, ಅದಾದ ಮೇಲೆ ಪ್ರೇಮಬರಹ ಚಿತ್ರಕ್ಕೂ ಆಕ್ಷನ್ ಕಟ್ ಹೇಳಿದ್ದರು. ಈಗ ಸೀತಾ ಪಯಣದ ಮೂಲಕ ಕ್ಯಾಪ್ ತೊಟ್ಟಿದ್ದಾರೆ.
‘ಸೀತಾ ಪಯಣ’, ಪ್ರೀತಿ ಮತ್ತು ಭಾವನಾತ್ಮಕ ಕಥೆಯ ಅಡಿಯಲ್ಲಿ ಸಾಗುವ ಪ್ರಯಾಣ ಇದಾಗಿದೆ. ಸೀತಾ ಪಯಣ ಸಿನಿಮಾಕ್ಕೆ ಬಾಲಮುರುಗನ್ ಛಾಯಾಗ್ರಹಣ ಮಾಡಿದ್ದಾರೆ. ದೃಶ್ಯಂ ಸಿನಿಮಾ ಖ್ಯಾತಿಯ ಸಂಕಲನಕಾರ ಆಯೂಬ್ ಖಾನ್ ಈ ಚಿತ್ರಕ್ಕೆ ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ. ಅನುಪ್ ರುಬೆನ್ಸ್ ಸೀತಾ ಪಯಣ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಭರತ್ ಜನನಿ ಎಂಬುವವರು ಕನ್ನಡದ ಹಾಡುಗಳಿಗೆ ಸಾಹಿತ್ಯ ನೀಡಿದ್ದಾರೆ.

ಅಭಿ ಮತ್ತು ಸೀತಾ ಎಂಬ ಹದಿಹರೆಯದವರ ಭಾವನಾತ್ಮಕ ಪಯಣವನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ. ನಿರಂಜನ್ ಮತ್ತು ಐಶ್ವರ್ಯ ಅರ್ಜುನ್ ಜೊತೆಗೆ ಪ್ರಕಾಶ್ ರೈ, ಸತ್ಯರಾಜ್ ಸೇರಿದಂತೆ ಹಲವರು ನಟಡಿಸಿದ್ದಾರೆ. ಅರ್ಜುನ್ ಸರ್ಜಾ ಕೂಡ ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಇವರೆಲ್ಲರ ಜತೆಗೆ ಕನ್ನಡದ ಹೆಸರಾಂತ ನಟರೊಬ್ಬರು ಈ ಚಿತ್ರದ ಭಾಗವಾಗಲಿದ್ದಾರೆ. ಈಗಾಗಲೇ ಚಿತ್ರದ ಡಬ್ಬಿಂಗ್ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಏಪ್ರಿಲ್ನಲ್ಲಿ ಈ ಚಿತ್ರ ತೆರೆಗೆ ಬರುವ ಸಾಧ್ಯತೆಗಳಿವೆ.
ಸೀತಾ ಪಯಣ ಸಿನಿಮಾ ಕನ್ನಡದ ಜತೆಗೆ ತೆಲುಗು ಮತ್ತು ತಮಿಳಿನಲ್ಲಿ ಸಿದ್ಧವಾಗಲಿದೆ. ನಟ ಅರ್ಜುನ್ ಸರ್ಜಾ ತಮ್ಮದೇ ಹೋಮ್ ಬ್ಯಾನರ್ ಶ್ರೀ ರಾಮ್ ಫಿಲ್ಮ್ಸ್ ಇಂಟರ್ನ್ಯಾಷನಲ್ ಅಡಿಯಲ್ಲಿ ಸೀತಾ ಪಯಣ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.