ಬೆಂಗಳೂರು ಪಾತಕ ಲೋಕ ಇದ್ದಕ್ಕಿದ್ದಂತೆ ಕಳೆದ ರಾತ್ರಿ ಹೈ ಅಲರ್ಟ್ ಆಗಿಬಿಟ್ಟಿದೆ. ಜಿಟಿ ಜಿಟಿ ಮಳೆ, ಚುಮುಚುಮು ಚಳಿಗೆ ಮಗುಮ್ಮಾಗಿ ಮಲಗಿದಂತಿದ್ದ ಭೂಗತ ಲೋಕ ದಿಢೀರ್ ಎದ್ದು ಕೂತಿದೆ. ಸಿಲಿಕಾನ್ ಸಿಟಿಯಲ್ಲಿ ಈ ಮೂಲಕ ಬಹು ದಿನಗಳ ಬಳಿಕ ಮತ್ತೆ ಗುಂಡಿನ ಮೊರೆತ ಮಾರ್ದನಿಸಿದೆ. ಈ ಮೂಲಕ ಸಿಟಿಯಲ್ಲಿ ಅಂಡರ್ ವರ್ಡ್ ಇನ್ನೂ ಜೀವಂತವಾಗಿದೆಯಾ ಎನ್ನುವ ಪ್ರಶ್ನೆಯನ್ನು ಹುಟ್ಟು ಹಾಕಿದೆ.
ಮುತ್ತಪ್ಪ ರೈ ಪುತ್ರನ ಖೇಲ್ ಖತಂಗೆ ಸ್ಕೆಚ್!
ಮಂಗಳೂರಿನ ರೈ ಬೆಂಗಳೂರನ್ನು ಆಳಿದ್ದು ಇಂದಿಗೆ ಇತಿಹಾಸ. ಕರ್ನಾಟಕದ ಭೂಗತ ಪ್ರಪಂಚಕ್ಕೆ ಬಂದೂಕನ್ನು ಪರಿಚಯಿಸಿದ ಕೀರ್ತಿಯ ರೈ. ಪುತ್ರ ಇದೀಗ ಅದೇ ಬಂದೂಕಿನ ನಳಿಕೆಯ ಟಾರ್ಗೆಟ್ ಆಗಿದ್ದು ವಿಪರ್ಯಾಸವೇ ಸರಿ.
ಹೌದು! ಕಳೆದ ಮಧ್ಯ ರಾತ್ರಿ 11.30ರ ಸಮಯ…ಬೆಂಗಳೂರು ಮಗ್ಗುಲಲ್ಲೇ ಇರುವ ಬಿಡದಿ ಬಳಿ ಫೈರಿಂಗ್ ನಡೆದಿದೆ. ತಮ್ಮ ತೋಟದ ಮನೆಯಿಂದ ಹೊರ ಬರುತ್ತಿದ್ದ ರೈ ಕಿರಿಯ ಪುತ್ರ ರಿಕ್ಕಿ ರೈಯನ್ನು ಟಾರ್ಗೆಟ್ ಮಾಡಿ ಗುಂಡು ಹಾರಿಸಲಾಗಿದೆ. ರಸ್ತೆ ಪಕ್ಕದಲ್ಲೇ ಇರೋ ಖಾಲಿ ನಿವೇಶನದಲ್ಲಿ ಅವಿತು ಕುಳಿತಿದ್ದ ಶೂಟರ್ಸ್ ಏಕಾಏಕಿ ಗುಂಡಿನ ಮಳೆಗರೆದಿದ್ದಾರೆ. ಈ ವೇಳೆ, ರಿಕ್ಕಿ ಕೈ ಮತ್ತು ಮೂಗಿಗೆ ಗಾಯಗಳಾಗಿದ್ದು ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಚಾಲಕ ಮತ್ತು ಗನ್ ಮನ್ ಗೂ ಸಣ್ಣ ಪುಟ್ಟ ಗಾಯಗಳಾಗಿವೆ.
ರೈ ಪುತ್ರನ ಉಸಿರು ನಿಲ್ಲಿಸುವ ಹಗೆ ಯಾರಿಗಿದೆ?
ರಿಕ್ಕಿ ರೈ….ತಂದೆಯ ಮರಣಾನಂತರ ಸಮಸ್ತ ರಿಯಲ್ ಎಸ್ಟೇಟ್ ದಂಧೆಯನ್ನ ನೋಡಿಕೊಳ್ತಿದ್ದಾನೆ. ಈ ಭೂ ವ್ಯವಹಾರವೇ ಕಳೆದ ರಾತ್ರಿಯ ಗುಂಡಿನ ದಾಳಿಗೆ ಕಾರಣವಾ? ಎಂಬ ಗುಮಾನಿ ಪೊಲೀಸರನ್ನು ಕಾಡುತ್ತಿದೆ. ಬಿಡದಿ ಮನೆ ಮತ್ತು ಸದಾಶಿವನಗರದ ಅಪಾರ್ಟ್ ಮೆಂಟ್ ನಡುವೆ ಓಡಾಡಿಕೊಂಡಿರುವ ರೈ ಪುತ್ರನನ್ನು ಹೊಂಚು ಹಾಕಿ ಸಂಚು ಮಾಡಿ ಖೇಲ್ ಖತಂ ಮಾಡುವ ಮಸಲತ್ತು ಮಾಡಲಾಗಿತ್ತು. ಇನ್ನು ಈ ಗುಂಡಿನ ಹಿಂದೆ ರಾಕೇಶ್ ಮಲ್ಲಿಯ ಹೆಸರು ಕೇಳಿ ಬರುತ್ತಿದೆ. ಭೂ ವಹಿವಾಟಿನಲ್ಲೇ ರೈ ಮತ್ತು ಮಲ್ಲಿ ನಡುವೆ ವೈಮನಸ್ಸಿದ್ದು ಈ ಸುಪಾರಿ ಕಿಲ್ಲಿಂಗ್ ಪ್ಲ್ಯಾನ್ ನಡೀತಾ ಅನ್ನೋ ಪ್ರಶ್ನೆಗಳಿವೆ.
ರಿಕ್ಕಿ ರೈ ಚಿಕ್ಕಮ್ಮನ ಮೇಲೂ ಖಾಕಿಗೆ ಗುಮಾನಿ
ಮುತ್ತಪ್ಪ ರೈ ಗೆ ಇಬ್ಬರು ಪತ್ನಿಯರು..ಮೊದಲ ಪತ್ನಿಯ ಮಕ್ಕಳೇ ಈ ರಾಕಿ ಮತ್ತು ರಿಕ್ಕಿ ರೈ. ತಂದೆ ಸಾಯುವ ಮುನ್ನವೇ ತಮ್ಮಿಚ್ಛೆಯಂತೆ ವಿಲ್ ಬರೆಸಿಟ್ಟಿದ್ದರು. ಅದರನ್ವಯ ರಿಕ್ಕಿ, ರಾಕಿಗೆ ತಲಾ ಒಂದೂವರೆ ಸಾವಿರ ಕೋಟಿ ಆಸ್ತಿ ಬಂದರೆ, ಉಳಿದೆಲ್ಲವೂ ರೈ ಎರಡನೇ ಪತ್ನಿ ಅನುರಾಧ ಪಾಲಾಗಿತ್ತು. ಇದು ರಿಕ್ಕಿಯ ರಕ್ತ ಕುದಿಯುವಂತೆ ಮಾಡಿತ್ತು. ಚಿಕ್ಕಮ್ಮನ ವಿರುದ್ಧ ಭೂ ವ್ಯಾಜ್ಯ ವಿಚಾರದಲ್ಲಿ ರಿಕ್ಕಿ ಕೋರ್ಟ್ ಮೆಟ್ಟಿಲೇರಿದ್ದ. ಹಾಗಾಗಿ ಅನುರಾಧ ಕಡೆಯಿಂದ ರಿಕ್ಕಿ ಹತ್ಯೆಗೆ ಸಂಚು ರೂಪಿಸಲಾಗಿತ್ತಾ ಅನ್ನೋ ಬಗ್ಗೆಯೂ ವಿಚಾರಣೆ ನಡೆದಿದೆ.
ರೇಂಜ್ ರೋವರ್ ಗೆ ಬೆಂಕಿ ಇಟ್ಟಿದ್ದಕ್ಕೆ ಪ್ರತೀಕಾರವಾ
ಈ ಹಿಂದೆ ಸದಾಶಿವನಗರಲ್ಲಿ ರಿಕ್ಕಿ ರೈ ವಿರುದ್ಧ ಧಮ್ಕಿ ಹಾಗೂ ಹಲ್ಲೆ ಆರೋಪ ದಾಖಲಾಗಿತ್ತು. ಶ್ರೀನಿವಾಸ ನಾಯ್ಡು ಎಂಬುವವರ 3 ಕೋಟಿಯ ಕಾರಿಗೆ ರಿಕ್ಕಿ ರೈ ಸುಪಾರಿ ಕೊಟ್ಟು ಬೆಂಕಿ ಹಚ್ಚಿಸಿದ್ದ ಆರೋಪ ಇದೆ. ಅಲ್ಲದೇ, ಶ್ರೀನಿವಾಸ ನಾಯ್ಡು ಮೇಲೆ ಹಲ್ಲೆ ಕೂಡ ರಿಕ್ಕಿ ರೈ ಮಾಡಿಸಿದ್ದ. ರಿಚ್ಮಂಡ್ ಟೌನ್ ಕಾಜೆ ಬಾರ್ ಅಂಡ್ ಕಿಚನ್ ನಲ್ಲಿ ಶ್ರೀನಿವಾಸ್ ನಾಯ್ಡು ಮೇಲೆ ರಿಕ್ಕಿ ರೈ ಅಂಡ್ ಟೀಂ ಹಲ್ಲೆ ಮಾಡಿತ್ತು. ಈ ಹಗೆಯೇ ನಿನ್ನೆಯ ಗುಂಡಿನ ದಾಳಿಗೆ ಕಾರಣವಾ ಅನ್ನೋದಿನ್ನೂ ಅಸ್ಪಷ್ಟ.
ರಷ್ಯಾದಿಂದ ಬರುತ್ತಿದ್ದಂತೆ ನಡೀತು ಅಟ್ಯಾಕ್
ಹಾಗೆ ನೋಡಿದರೆ ಸಹೋದರ ರಾಕಿಯ ಸಮಸ್ತ ವಹಿವಾಟನ್ನೂ ಇದೇ ರಿಕ್ಕಿ ನೋಡಿಕೊಳ್ತಾನೆ. ಅಷ್ಟೇ ಅಲ್ಲಾ ರಷ್ಯಾ ಯುವತಿಯನ್ನು ವಿವಾಹವಾಗಿರುವ ರಿಕ್ಕಿ ಬಹುಕಾಲ ವಿದೇಶದಲ್ಲೇ ನೆಲೆಸಿರ್ತಾರೆ. ಆದರೆ ಮೊನ್ನೆಯಷ್ಟೇ ಭಾರತಕ್ಕೆ ಮರಳಿದ್ದ ರಿಕ್ಕಿ ಮೇಲೀಗ ಅಟ್ಯಾಕ್ ನಡೆದಿರೋದು ನಿಜಕ್ಕೂ ಆತಂಕ ಹೆಚ್ಚಿಸಿದೆ. ಇನ್ನು ರಿಕ್ಕಿ ಮೇಲೆ ಫೈರಿಂಗ್ ನಡೆದಿರೋದು ಶಾಟ್ ಗನ್ ನಿಂದ ಅನ್ನೋದು ಸ್ಪಷ್ಟ. ಹಾಗಂತಾ ಶಾರ್ಪ್ ಶೂಟರ್ಸ್ ಆಗಲಿ, ಸುಪಾರಿ ಹಂತಕರಾಗಲಿ ಇಂತಹ ಶಾಟ್ ಗನ್ ಬಳಸುವುದಿಲ್ಲ. ಹಾಗಾಗಿ ಇದು ರಿಕ್ಕಿ ತಂಡದಲ್ಲಿದ್ದ ಗನ್ ಮನ್ ಗಳಿಂದಲೇ ಆದ ಮಿಸ್ ಫೈರಾ ಅನ್ನುವುದು ಕೂಡ ಪೊಲೀಸರ ನಿದ್ದೆಗೆಡಿಸಿದೆ. ಅದೇನೇ ಇರಲಿ ನಡುರಾತ್ರಿಯ ಗುಂಡಿನ ಸದ್ದು ಬೆಂಗಳೂರು ಪಾತಕ ಜಗತ್ತಿನ ಕರಾಳ ಚಹರೆ ಮತ್ತೆ ತೆರೆದುಕೊಂಡಿದೆಯಾ ಅನ್ನೋ ಪ್ರಶ್ನೆ ಹುಟ್ಟು ಹಾಕಿದೆ.