ಮಧ್ಯಪ್ರದೇಶದ ದೇವಾಸ್ನಲ್ಲಿ ಬೆಚ್ಚಿಬೀಳಿಸುವ ಪ್ರಕರಣ
ಫ್ರಿಡ್ಜ್ ಸ್ವಿಚ್ ಆಫ್ ಆಗಿದ್ದರಿಂದ ಕೊಲೆ ರಹಸ್ಯ ಬಯಲು
ಭೋಪಾಲ್: ದೇಶದಲ್ಲಿ ‘ಫ್ರಿಡ್ಜ್ ಮರ್ಡರ್’ಗಳ ಸರಣಿಗೆ ಮತ್ತೊಂದು ಸೇರ್ಪಡೆಯೆಂಬಂತೆ, ಮಧ್ಯಪ್ರದೇಶದ ದೇವಾಸ್ ನಲ್ಲಿ ವಿವಾಹಿತ ವ್ಯಕ್ತಿಯೊಬ್ಬ ತನ್ನ ಲಿವ್ ಇನ್ (ಸಹ ಜೀವನ) ಸಂಗಾತಿಯನ್ನು ಬರ್ಬರವಾಗಿ ಕೊಂದು, ಆಕೆಯ ದೇಹವನ್ನು 8 ತಿಂಗಳ ಕಾಲ ಫ್ರಿಡ್ಜ್ ನಲ್ಲಿ ಅಡಗಿಸಿಟ್ಟಿದ್ದ ಘಟನೆ ಬೆಳಕಿಗೆ ಬಂದಿದೆ.
ಆರೋಪಿ ಸಂಜಯ್ ಪಾಟೀದಾರ್ ಬಾಡಿಗೆಗೆ ಪಡೆದಿದ್ದ ಮನೆಯೊಂದರಲ್ಲಿ ಮಹಿಳೆಯ ಕೊಳೆತ ಮೃತದೇಹ ಪತ್ತೆಯಾಗಿದೆ. ಮಹಿಳೆಯು ಸೀರೆ ಹಾಗೂ ಆಭರಣಗಳನ್ನು ಧರಿಸಿದ್ದು, ಎರಡೂ ಕೈಗಳನ್ನು ಕಟ್ಟಿ ಹಾಕಿರುವ ಹಾಗೂ ಕುತ್ತಿಗೆಗೆ ಹಗ್ಗ ಬಿಗಿದ ಸ್ಥಿತಿಯಲ್ಲೇ ಶವ ಪತ್ತೆಯಾಗಿದೆ. ಮೃತ ಮಹಿಳೆಯನ್ನು ಪಿಂಕಿ ಪ್ರಜಾಪತಿ ಎಂದು ಗುರುತಿಸಲಾಗಿದೆ. ಕಳೆದ ವರ್ಷದ ಜೂನ್ ತಿಂಗಳಲ್ಲಿ ಈಕೆಯನ್ನು ಕೊಂದಿರುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಸಂಜಯ್ ಪಾಟೀದಾರ್ ಉಜ್ಜೈನ್ ನಿವಾಸಿಯಾಗಿದ್ದು, ಆತನಿಗೆ ಅದಾಗಲೇ ವಿವಾಹವಾಗಿತ್ತು. ಆದರೂ ಆತ 5 ವರ್ಷಗಳಿಂದ ಪಿಂಕಿ ಪ್ರಜಾಪತಿಯೊಂದಿಗೆ ಲಿವ್-ಇನ್ ಸಂಬಂಧ ಹೊಂದಿದ್ದ. ಪಿಂಕಿಯು ತನ್ನನ್ನು ವಿವಾಹವಾಗುವಂತೆ ಪೀಡಿಸಲಾರಂಭಿಸಿದ್ದೇ ಆಕೆಯ ಕೊಲೆಗೆ ಕಾರಣವಿರಬಹುದು ಎಂದು ಶಂಕಿಸಲಾಗಿದೆ. ಪಾಟೀದಾರ್ ತನ್ನ ಸ್ನೇಹಿತನ ನೆರವು ಪಡೆದು ಪಿಂಕಿಯನ್ನು ಕೊಂದಿರಬಹುದು ಎಂದೂ ಪೊಲೀಸರು ಅಂದಾಜಿಸಿದ್ದಾರೆ.
ಮೃತ ಪಿಂಕಿ 30ರ ಆಸುಪಾಸಿನ ಮಹಿಳೆಯಾಗಿದ್ದು, ಆಕೆಯನ್ನು ಕಳೆದ ವರ್ಷದ ಜೂನ್ ನಲ್ಲೇ ಹತ್ಯೆಗೈಯ್ಯಲಾಗಿದೆ. ಬಾಡಿಗೆ ಮನೆಯಿಂದ ವಿಪರೀತ ದುರ್ವಾಸನೆ ಬರಲಾರಂಭಿಸಿದ ಹಿನ್ನೆಲೆಯಲ್ಲಿ, ಅಕ್ಕಪಕ್ಕದ ನಿವಾಸಿಗಳು ಮನೆ ಮಾಲೀಕನಿಗೆ ವಿಷಯ ಮುಟ್ಟಿಸಿದ್ದರು. ಕೊನೆಗೆ ಮಾಲೀಕ ಮನೆಯ ಬೀಗ ತೆಗೆದು ಒಳಹೊಕ್ಕಾಗ ರೆಫ್ರಿಜರೇಟರ್ ನಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ಮನೆ ಮಾಲೀಕ ಧೀರೇಂದ್ರ ಶ್ರೀವಾಸ್ತವ್ ಅವರು ಇಂದೋರ್ ನಲ್ಲಿ ವಾಸಿಸುತ್ತಿದ್ದರು. 2023ರ ಜೂನ್ ನಲ್ಲೇ ಶ್ರೀವಾಸ್ತವ್ ಅವರು ತಮ್ಮ ಮನೆಯನ್ನು ಆರೋಪಿ ಪಾಟೀದಾರ್ ಗೆ ಬಾಡಿಗೆಗೆ ನೀಡಿದ್ದರು.
ವಿದ್ಯುತ್ ಪೂರೈಕೆ ಆಫ್ ಆಗಿದ್ದರಿಂದ ಕೊಲೆ ರಹಸ್ಯ ಬಯಲು:
ಇದಾದ 1 ವರ್ಷದ ಬಳಿಕ ಪಾಟೀದಾರ್ ಮನೆಯನ್ನು ಖಾಲಿ ಮಾಡಿದ್ದನಾದರೂ, ತನ್ನ ವಸ್ತುಗಳನ್ನು ಅದೇ ಮನೆಯಲ್ಲಿ ಅಧ್ಯಯನ ಕೊಠಡಿ ಮತ್ತು ಬೆಡ್ ರೂಂನಲ್ಲಿ ಉಳಿಸುವುದಾಗಿ ತಿಳಿಸಿದ್ದ. ಸದ್ಯಕ್ಕೆ ಈ ಎರಡು ಕೊಠಡಿಗಳಲ್ಲಿ ತನ್ನ ವಸ್ತುಗಳನ್ನು ಇಡುತ್ತೇನೆ. ಕೆಲವು ದಿನಗಳ ಬಳಿಕ ಖಾಲಿ ಮಾಡುತ್ತೇನೆ ಎಂದಿದ್ದ. ಅದಕ್ಕೆ ಮಾಲೀಕರು ಒಪ್ಪಿದ್ದರು. ಅದರಂತೆ, ಪಾಟೀದಾರ್ ಆಗಾಗ ಈ ಮನೆಗೆ ಬಂದು ಹೋಗುತ್ತಿದ್ದ. ಇತ್ತೀಚೆಗೆ ಮನೆ ಬಳಿ ಬಂದಿದ್ದ ಮಾಲೀಕ ಶ್ರೀವಾಸ್ತವ್ ಅವರು, ಪಾಟೀದಾರ್ ಇದ್ದ ಬಾಡಿಗೆ ಮನೆಯ ವಿದ್ಯುತ್ ಪೂರೈಕೆಯನ್ನು ಸ್ವಿಚ್ ಆಫ್ ಮಾಡಿ ಹೋಗಿದ್ದರು. ಹೀಗಾಗಿ, ಫ್ರಿಜ್ ಆಫ್ ಆಗಿ ಕೆಲಸ ಮಾಡುವುದನ್ನು ನಿಲ್ಲಿಸಿತ್ತು. ಪರಿಣಾಮ, ಒಳಗಿದ್ದ ಶವ ಕೊಳೆತು ವಾಸನೆ ಬರಲಾರಂಭಿಸಿತು. ಕೊಲೆ ರಹಸ್ಯ ಬಯಲಾಗಿದ್ದು ಹೀಗೆ ಎಂದು ಪೊಲೀಸ್ ಅಧಿಕಾರಿ ಅಮಿತ್ ಸೋಲಂಕಿ ತಿಳಿಸಿದ್ದಾರೆ.
2022ರ ಮೇ ತಿಂಗಳಲ್ಲಿ ದೆಹಲಿಯಲ್ಲಿ ಶ್ರದ್ಧಾ ವಾಕರ್ ಎಂಬ ಯುವತಿಯನ್ನೂ ಆಕೆಯ ಲಿವ್ ಇನ್ ಸಂಗಾತಿ ಅಫ್ತಾಬ್ ಪೂನಾವಾಲ ಎಂಬಾತ ಇದೇ ರೀತಿ ಹತ್ಯೆಗೈದು, ದೇಹದ ಭಾಗಗಳನ್ನು ತುಂಡರಿಸಿ, ಫ್ರಿಡ್ಜ್ ನಲ್ಲಿ ಇರಿಸಿದ್ದು ಭಾರೀ ಸುದ್ದಿಯಾಗಿತ್ತು. ಪ್ರಸ್ತುತ ಅಫ್ತಾಬ್ ದೆಹಲಿ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾನೆ.