ಕಾಪು : ಪಡುಕುತ್ಯಾರು ಆನೆಗುಂದಿ ಮಹಾಸಂಸ್ಥಾನದ ಪೀಠಾಧೀಶ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿಯವರ 21ನೇ ವರ್ಷದ ಚಾತುರ್ಮಾಸ್ಯ ವ್ರತಾಚರಣೆ ಜು. 10 ರಂದು ಪಡುಕುತ್ಯಾರಿನ ಮೂಲಮಠದಲ್ಲಿ ನಡೆಯಲಿದೆ ಎಂದು ಆನೆಗುಂದಿ ಪ್ರತಿಷ್ಠಾನ ಮತ್ತು ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಅಧ್ಯಕ್ಷ ವಿ. ಶ್ರೀಧರ ಆಚಾರ್ಯ ವಡೇರ ಹೋಬಳಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜು. 10ರಿಂದ ಸೆ. 7ರವರೆಗೆ ವ್ರತಾಚರಣೆಯ ಕಾರ್ಯಕ್ರಮಗಳು ನಡೆಯಲಿವೆ. ಜು. 10ರಂದು ಚಾತುರ್ಮಾಸ್ಯ ಆರಂಭಗೊಳ್ಳಲಿದ್ದು ಜು. 22ರಂದು ಜಗದ್ಗುರುಗಳ ಜನ್ಮವರ್ಧಂತಿ, ಸೆ. 7ರಂದು ಚಾತುರ್ಮಾಸ್ಯ ಸಮಾರೋಪ ಸಮಾರಂಭ ನಡೆಯಲಿದೆ. ಮಾತೃವಂದನೆ, ಯುವ ಗೋಷ್ಠಿ ಮತ್ತು ವಿಚಾರ ಸಂಕಿರಣ, ರಾಶಿ ಪೂಜೆ, ವಿಶ್ವಕರ್ಮ ಯಜ್ಞವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ, ಉಪ ತಹಸೀಲ್ದಾರ್ ಲೋಕೇಶ್ ಆಚಾರ್ ಕಂಬಾರು, ನಿತ್ಯವೂ ಬೆಳಗ್ಗೆ ಮತ್ತು ಸಂಜೆ ದುರ್ಗಾ ನಮಸ್ಕಾರ ಪೂಜೆ ಸಂಕಲ್ಪ, ಭಜನೆ, ಗುರುಪಾದುಕಾ ಪೂಜೆ, ಆಶೀರ್ವಚನ, ಗುರುಗಳ ಸಂದರ್ಶನ ಮತ್ತಿತರ ಕಾರ್ಯಕ್ರಮಗಳಿವೆ ಎಂದರು.
ಸಮಾಜದ ಪ್ರತಿ ಮನೆಯವರಿಂದಲೂ ಗುರುಪಾದುಕಾ ಪೂಜೆ ನಡೆಸುವಂತೆ ಸಂಕಲ್ಪಿಸಿದ್ದು, 10 ಸಾವಿರಕ್ಕೂ ಹೆಚ್ಚು ಸಂಖ್ಯೆಯಲ್ಲಿ ಪಾದಪೂಜೆ ಸೇವೆ ನಿರೀಕ್ಷಿಸಲಾಗುತ್ತಿದೆ. ರವಿವಾರ, ಗುರುವಾರಗಳಂದು ಭಕ್ತಾದಿಗಳ ಅನುಕೂಲಕ್ಕೆ ನಿರಂತರ ಗುರು ಪಾದುಕಾ ಪೂಜೆ ಇರಲಿದೆ. ನಿತ್ಯವೂ ಬೆಳಗ್ಗೆ 8 ಕ್ಕೆ ಮತ್ತು ಸಂಜೆ 5.30ಕ್ಕೆ ದುರ್ಗಾ ನಮಸ್ಕಾರ ಪೂಜೆ ನಡೆಯಲಿದೆ.
ಜು. 22ರಂದು ಗುರುಗಳ ಜನ್ಮ ವರ್ಧಂತಿಯಂದು ಅವರ ತುಲಾಭಾರ ಸೇವೆ ನಡೆಯಲಿದೆ. ಅದೇ ದಿನ ಸಮಾಜದ ಯುವ ಸಾಧಕರಿಗೆ ಗೌರವಾರ್ಪಣೆ, ಶೇ. 95 ಕ್ಕಿಂತ ಹೆಚ್ಚು ಅಂಕಗಳಿಸಿದ ಎಸೆಸಲ್ಸಿ, ಪಿಯುಸಿ, ಪದವಿ, ಸ್ನಾತಕೋತ್ತರ, ಪಿಎಚ್ಡಿ ಪದವಿ ಪಡೆದ ವಿದ್ಯಾರ್ಥಿಗಳನ್ನು ಅಭಿನಂದನೆ ನಡೆಯಲಿದೆ ಎಂದು ತಿಳಿಸಿದರು.
ಯುವಜನರಿಗಾಗಿ ಪಂಚಶಿಲ್ಪಗಳ ಪ್ರಾಮುಖ್ಯ, ಯಾಂತ್ರೀಕರಣ ನಾವೀನ್ಯತೆ, ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವ ಅಗತ್ಯದ ಬಗ್ಗೆ ಅರಿವು ಮೂಡಿಸುವ ಕುರಿತಾದ ವಿಚಾರಗೋಷ್ಠಿ ಕೂಡ ನಡೆಯಲಿದೆ ಎಂದು ಹೇಳಿದರು.