ಉಡುಪಿ | ಪುರಸಭೆ ಕಟ್ಟಡದೊಳಗೆ ಸಿಬ್ಬಂದಿ ಕೆಲಸ ಮಾಡುತ್ತಿದ್ದಾಗಲೇ ನೌಕರನೊಬ್ಬ ಬೀಗ ಜಡಿದು ತೆರಳಿದ ಘಟನೆ ಉಡುಪಿ ಜಿಲ್ಲೆಯ ಕಾಪು ಪುರಸಭೆ ಕಟ್ಟಡದಲ್ಲಿ ನಡೆದಿದೆ. ಇದರಿಂದಾಗಿ ಸಿಬ್ಬಂದಿ ಕೆಲ ಕಾಲ ಲಾಕ್ ಆಗಿ ಆತಂಕಗೊಂಡಿದ್ದಾರೆ.
ಕಾಪು ಪುರಸಭೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಯೋಜನಾ ಪ್ರಾಧಿಕಾರದ ಕಚೇರಿಗೆ ತೆರಳಲು ಒಂದೇ ದ್ವಾರ ಇದ್ದು, ಪ್ರತಿದಿನ ಸಂಜೆ 5.30 ರಿಂದ 6 ಗಂಟೆಯೊಳಗೆ ಪುರಸಭೆ ಸಿಬ್ಬಂದಿ ಬಾಗಿಲಿಗೆ ಬೀಗ ಹಾಕುವ ಪದ್ಧತಿ ಇದೆ. ಸಾಮಾನ್ಯವಾಗಿ ಬೀಗ ಹಾಕುವ ಮೊದಲು ಒಳಗೆ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ಮಾಹಿತಿ ನೀಡಲಾಗುತ್ತದೆ.
ಆದರೆ, ನಿಯಮಿತವಾಗಿ ಬೀಗ ಹಾಕುವ ನೌಕರ ಮಂಗಳವಾರ ಅನಾರೋಗ್ಯದಿಂದ ರಜೆ ಮಾಡಿದ್ದ. ಈ ಹಿನ್ನೆಲೆ ಮತ್ತೊಬ್ಬ ಸಿಬ್ಬಂದಿ ಬೀಗ ಹಾಕಿದ್ದಾನೆ. ಇದರಿಂದ ಪ್ರಥಮ ಮಹಡಿಯಲ್ಲಿ ಕೆಲಸ ಮಾಡುತ್ತಿದ್ದ ಯೋಜನಾ ಪ್ರಾಧಿಕಾರದ ಸಿಬ್ಬಂದಿ ಲಾಕ್ ಆಗಿದ್ದಾರೆ.
ಕೆಲಸ ಮುಗಿಸಿ ಹೊರಬರಲು ಬಂದ ಸಿಬ್ಬಂದಿ ಮುಖ್ಯದ್ವಾರದ ಬಳಿ ಬೀಗ ಹಾಕಿರುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ತಕ್ಷಣವೇ ಪೊಲೀಸರಿಗೆ ಕರೆ ಮಾಡಿ, ಪುರಸಭೆ ಮುಖ್ಯಾಧಿಕಾರಿಗೂ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ತಕ್ಷಣ ಪುರಸಭೆ ನೌಕರರು ಸ್ಥಳಕ್ಕೆ ಬಂದು ಬೀಗ ತೆರೆಯುವ ಮೂಲಕ ಒಳಗಿದ್ದ ಸಿಬ್ಬಂದಿಯನ್ನು ಸುರಕ್ಷಿತವಾಗಿ ಹೊರಗೆ ಕಳುಹಿಸಿದ್ದಾರೆ.
ಇದನ್ನೂ ಓದಿ : ಬೆಂಗಳೂರಲ್ಲಿ ಮನಕಲಕುವ ಘಟನೆ.. ಸ್ಕೂಲ್ ಬಸ್ ಹರಿದು ಸ್ಥಳದಲ್ಲೇ ಪ್ರಾಣ ಬಿಟ್ಟ ಕಂದಮ್ಮಗಳು!



















