ಬೆಂಗಳೂರು: ಸಿಲಿಕಾನ್ ಸಿಟಿ(Bengaluru) ಯಲ್ಲಿ ವ್ಯಾಪಕ ಮಳೆ ಸುರಿಯುತ್ತಿದ್ದ ಮಧ್ಯೆಯೇ ಎಲೆಕ್ಟ್ರಿಕ್ ಬಿಎಂಟಿಸಿ ಬಸ್ (Electric BMTC Bus) ಹೊತ್ತಿ ಉರಿದ ಘಟನೆ ನಡೆದಿದೆ.
ಸೋಮವಾರ ರಾತ್ರಿ 11:30ರ ವೇಳೆಗೆ ಬಿಎಂಟಿಸಿ ಬಸ್ ಹೊತ್ತಿ ಉರಿದ ಘಟನೆ ನಡೆದಿದೆ. ಘಟನೆಯಲ್ಲಿ ಬಸ್ ಸಂಪೂರ್ಣ ಬೆಂಕಿಗಾಹುತಿ ಆಗಿದೆ. ಎಲೆಕ್ಟ್ರಿಕ್ ಬಸ್ ನಾಗಾವರ ಕಡೆಯಿಂದ ಹೆಬ್ಬಾಳ ಕಡೆಗೆ ತೆರಳುತ್ತಿತ್ತು. ಹೆಬ್ಬಾಳದ BWSSB ಹತ್ತಿರ ಸರ್ವಿಸ್ ರಸ್ತೆಗೆ ಬರುತ್ತಿದ್ದಂತೆ ಏಕಾಏಕಿ ಬಸ್ ನಲ್ಲಿ ಹೊಗೆ ಕಾಣಿಸಿಕೊಂಡಿದೆ. ಕೂಡಲೇ ಚಾಲಕ ಹಾಗೂ ನಿರ್ವಾಹಕರು ಬಸ್ನಿಂದ ಪ್ರಯಾಣಿಕರನ್ನು ಕೆಳಗಿಳಿಸಿದ್ದಾರೆ. ಪ್ರಯಾಣಿಕರು ಕೆಳಗಿಳಿಯುತ್ತಿದ್ದಂತೆ ಏಕಾಏಕಿ ಬಸ್ ಹೊತ್ತಿ ಉರಿದಿದೆ.
ಜೋರು ಮಳೆಯಿಂದಾಗಿ ಬಸ್ ನ ಇಂಜಿನ್ ಗೆ ನೀರು ಹೋಗಿ ಶಾರ್ಟ್ ಸರ್ಕ್ಯೂಟ್ ಆಗಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ವಾಹನ ಅಧಿಕಾರಿಗಳು, ಬಿಎಂಟಿಸಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪರಿಣಾಮ ಟ್ರಾಫಿಕ್ ಜಾಮ್ ಉಂಟಾಯಿತು. ಬೆಂಕಿ ನಂದಿಸಿ, ವಾಹನವನ್ನು ಬೇರೆಡೆ ಸ್ಥಳಾಂತರ ಮಾಡುವವರೆಗೂ ಟ್ರಾಫಿಕ್ ಉಂಟಾಗಿತ್ತು. ಎರಡು ಗಂಟೆಗಳ ಕಾಲ ವಾಹನಗಳು ನಿಂತಲ್ಲೇ ನಿಂತಿದ್ದವು. ಸುಮಾರು 8 ಕಿಲೋ ಮೀಟರ್ನಷ್ಟು ಟ್ರಾಫಿಕ್ ಜಾಮ್ ಉಂಟಾಗಿತ್ತು. ಸ್ಥಳೀಯ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಯಿಂದ ಬಸ್ ತೆರವು ಕಾರ್ಯ ನಡೆಸಿದರು.