ಬೆಂಗಳೂರು: ಇಂಚರ ಪುಟ್ಟಣ್ಣ ಪ್ರೊಡಕ್ಷನ್ ಲಾಂಛನದಲ್ಲಿ ಪುಟ್ಟಣ್ಣ ಅವರು ನಿರ್ಮಿಸಿ, ಬರಗೂರು ರಾಮಚಂದ್ರಪ್ಪ ನಿರ್ದೇಶಿಸಿರುವಅಮೃತ ಮತಿ’ ಕನ್ನಡ ಚಿತ್ರವು ಈಗ ಅಮೆಜಾನ್ ಪ್ರೈಮ್ನ ಓ.ಟಿ.ಟಿ. ವೇದಿಕೆಯಲ್ಲಿ ಬಿಡುಗಡೆಯಾಗಿದೆ.

ಅಮೃತ ಮತಿ’ ಚಿತ್ರವು ಹದಿಮೂರನೇ ಶತಮಾನದ ಖ್ಯಾತ ಕನ್ನಡ ಕವಿ ಜನ್ನನ ಯಶೋಧರ ಚರಿತೆ’ ಕಾವ್ಯ ಪ್ರಸಂಗವನ್ನು ಆಧರಿಸಿ ರೂಪುಗೊಂಡಿದೆ. ಈ ಚಿತ್ರದಲ್ಲಿ ಮೂಲ ಕಥನವನ್ನು ಮರುಸೃಷ್ಟಿ ಮಾಡಿ ನಿರೂಪಿಸಿರುವುದು ಒಂದು ವಿಶೇಷ. ಕನ್ನಡ ಸಾಹಿತ್ಯದಲ್ಲಿ ಮರುಸೃಷ್ಟಿಯ ಪರಂಪರೆಯಿದ್ದು ಈ ಚಿತ್ರವು ಅದರ ಮುಂದುವರಿಕೆಯಗಿದೆ. ಬರಗೂರು ರಾಮಚಂದ್ರಪ್ಪ ನಿರ್ದೇಶನದ ಜೊತೆಗೆ ಚಿತ್ರಕತೆ, ಸಂಭಾಷಣೆ ಮತ್ತು ಗೀತರಚನೆ ಮಾಡಿದ್ದಾರೆ. ಪ್ರಸಿದ್ಧ ಕಲಾವಿದೆ ಹರಿಪ್ರಿಯ ಅವರುಅಮೃತ ಮತಿ’ಯ ಪಾತ್ರದಲ್ಲಿ ಮತ್ತು ಬಹುಭಾಷಾ ಕಲಾವಿದ ಕಿಶೋರ್ ಅವರು `ಯಶೋಧರ’ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಿರಿಯ ನಟ ಸುಂದರರಾಜ್, ಪ್ರಮೀಳಾ ಜೋಷಾಯ್, ತಿಲಕ್, ಅಂಬರೀಶ್ ಸಾರಂಗಿ, ವತ್ಸಲಾ ಮೋಹನ್, ಸುಪ್ರಿಯಾ ರಾವ್ ಮುಂತಾದವರು ತಾರಾಗಣದಲ್ಲಿದ್ದಾರೆ.
ಸುರೇಶ್ ಅರಸು ಅವರು ಸಂಕಲನ, ನಾಗರಾಜ್ ಆದವಾನಿಯವರು ಛಾಯಾಗ್ರಹಣ, ಶಮಿತಾ ಮಲ್ನಾಡ್ ಅವರು ಸಂಗೀತ ನಿರ್ದೇಶನ, ತ್ರಿಭುವನ್ ಅವರು ನೃತ್ಯ ಸಂಯೋಜನೆಯನ್ನು ನಿರ್ವಹಿಸಿದ್ದಾರೆ.