ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಂಗಳೂರಿಗೆ ಆಗಮಿಸಿದ್ದು, ಇನ್ನೊಂದೆಡೆ ಬಿಜೆಪಿ ರೆಬೆಲ್ಸ್ ತಂಡದಿಂದ ಹೈ ವೋಲ್ಟೇಜ್ ಸಭೆ ನಡೆದಿದೆ.
ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ನಿವಾಸದಲ್ಲಿ ಇಂದು ಸಭೆ ನಡೆದಿದೆ. ಬಿಜೆಪಿಯಿಂದ ಈಗಾಗಲೇ 39 ಸಂಘಟನಾತ್ಮಕ ಜಿಲ್ಲಾ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದಿದೆ. ಇದರ ಬೆನ್ನಲ್ಲೇ ರೆಬೆಲ್ಸ್ ತಂಡ ಸಭೆ ನಡೆಸಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಕೇಂದ್ರ ಸಚಿವ ವಿ. ಸೋಮಣ್ಣ ಕೂಡ ಈ ಸಭೆಯಲ್ಲಿ ಭಾಗವಹಿಸಿದ್ದರು. ಬರೋಬ್ಬರಿ 2 ಗಂಟೆಗಳ ಕಾಲ ಈ ಸಭೆ ನಡೆಯಿತು.

ರಾಜ್ಯಕ್ಕೆ ಅಮಿತ್ ಶಾ ಭೇಟಿ ನೀಡುವ ಸಂದರ್ಭದಲ್ಲಿ ರೆಬೆಲ್ಸ್ ತಂಡ ಆಕ್ಟಿವ್ ಆಗಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಅಮಿತ್ ಶಾ ಅವರನ್ನು ಭೇಟಿ ಮಾಡಿ ವಿಜಯೇಂದ್ರ ಬದಲಾವಣೆಗೆ ಮನವಿ ನೀಡಲು ರೆಬೆಲ್ಸ್ ತಂಡ ನಿರ್ಧರಿಸಿದೆ ಎನ್ನಲಾಗುತ್ತಿದೆ. ಹೀಗಾಗಿಯೇ ಕೇಂದ್ರ ಸಚಿವ ಸೋಮಣ್ಣ ಕರೆದು ಸಭೆ ಮಾಡಿರಬಹುದು ಎನ್ನಲಾಗುತ್ತಿದೆ. ಈ ಸಭೆಯಲ್ಲಿ ಶಾಸಕ ರಮೇಶ್ ಜಾರಕಿಹೊಳಿ, ಮಾಜಿ ಸಚಿವ ಕುಮಾರ್ ಬಂಗಾರಪ್ಪ, ಶಾಸಕ ಬಿ.ಪಿ ಹರೀಶ್, ಜೆಡಿಎಸ್ ಮುಖಂಡ ಎನ್.ಆರ್ ಸಂತೋಷ್ ಸೇರಿದಂತೆ ಹಲವರು ಭಾಗಿಯಾಗಿದ್ದರು.